ಮೀನುಗಾರಿಕೆ: ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮಂಗಳೂರು : ಮೀನುಗಾರಿಕಾ ಇಲಾಖೆಯಿಂದ ೨೦೨೨-೨೩ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯಸಂಪದಾ ಯೋಜನೆಯಡಿ ಮಿನುಗಾರರು ಹಾಗೂ ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೀನು ಸಾಗಾಟಕ್ಕಾಗಿ ಇನ್ಸುಲೇಟೆಡ್ ಟ್ರಕ್ ಖರೀದಿ, ಮೀನು ಮಾರಾಟ ಕಿಯೋಸ್ಕ್ ಸ್ಥಾಪನೆಗೆ ಸಹಾಯ, ಐಸ್ಪ್ಲಾಂಟ್ ಮತ್ತು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆ ಮತ್ತು ಪುನರ್ ನಿರ್ಮಾಣಕ್ಕೆ ಸಹಾಯಧನ, ಆಳ ಸಮುದ್ರ ಮೀನುಗಾರಿಕಾ ದೋಣಿಗಳ ನಿರ್ಮಾಣಕ್ಕೆ ಸಹಾಯ, ಮೀನುಗಾರಿಕಾ ದೋಣಿಗಳಲ್ಲಿ ಜೈವಿಕ ಶೌಚಾಲಯ ಸ್ಥಾಪನೆಗೆ ಉತ್ತೇಜನ. ಸಮುದ್ರದಲ್ಲಿ ಮೀನುಗಾರರ ಸುರಕ್ಷತೆಗೆ ಮೀನುಗಾರಿಕಾ ದೋಣಿಗಳಲ್ಲಿ ಸಂವಹನ ಟ್ರ್ಯಾಕಿಂಗ್ ಮತ್ತು ಸುರಕ್ಷತಾ ಸಾಧನಗಳ ಅಳವಡಿಕೆಗೆ ಸಹಾಯ, ಸಾಂಪ್ರದಾಯಿಕ ಮೀನುಗಾರರಿಗೆ ಹಳೆ ದೋಣಿಗಳ ಬದಲಿಗೆ ಹೊಸ ಎಫ್ಆರ್ಪಿ ದೋಣಿಗಳ ಖರೀದಿಗೆ ಸಹಾಯ, ಮೀನುಗಾರರು ಮತ್ತು ಮೀನುಗಾರಿಕಾ ದೋಣಿಗಳಿಗೆ ವಿಮೆ ಸೌಲಭ್ಯ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಹಾಯ, ಒಳನಾಡು ಮತ್ತು ಹಿನ್ನೀರು ಮೀನು, ಸಿಗಡಿ ಕೃಷಿ ಕೊಳ ನಿರ್ಮಾಣಕ್ಕೆ ಸಹಾಯ, ಒಳನಾಡು ಮತ್ತು ಹಿನ್ನೀರು ಪ್ರದೇಶಗಳಲ್ಲಿ ಬಯೋಫೋಕ್, ಆರ್ಎಎಸ್ ತಂತಜ್ಞಾನ ಬಳಸಿ ಮೀನು ಸಿಗಡಿ ಕೃಷಿ ಕೊಳಗಳ ನಿರ್ಮಾಣಕ್ಕಾಗಿ ಸಹಾಯ, ಹಿನ್ನೀರು ಪ್ರದೇಶದಲ್ಲಿ ಏಡಿ, ಕಲ್ಲ, ಪಚ್ಚಿಲೆ ಕೃಷಿ ಸೇರಿದಂತೆ ಇತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಜಿಲ್ಲಾ ವಲಯ ಯೋಜನೆಯಡಿ ಪರಿಶಿಷ್ಟ ಜಾತಿ ಮೀನುಗಾರರಿಗೆ ಮೀನುಗಾರಿಕೆ ಬಲೆ, ಸಲಕರಣೆ ಕಿಟ್ ವಿತರಣೆ ಯೋಜನೆ ಹಾಗೂ ಮೀನು ಮಾರಾಟಕ್ಕಾಗಿ ಉಪಯೋಗಿಸುವ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯಧನ ನೀಡುವ ಯೋಜನೆಗಳಿವೆ.
*ರಾಜ್ಯ ವಲಯ ಯೋಜನೆಯಡಿ ಕರಾವಳಿ ಮೀನುಗಾರರಿಗೆ ಜೀವರಕ್ಷಕ ಸಾಧನ ಪ್ಲಾಸ್ಟಿಕ್ ಕ್ರೇಟ್ಸಗಳನ್ನು ವಿತರಿಸುವುದು, ಪರಿಶಿಷ್ಟ ಜಾತಿಯ ಕರಾವಳಿ ಸಾಂಪ್ರದಾಯಿಕ ಮೀನುಗಾರರಿಗೆ ಎಫ್ಆರ್ಐ ದೋಣಿ, ಇಂಜಿನ್, ಬಲೆ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಹಾಗೂ ಹಿನ್ನೀರು ಮೀನು ಸಿಗಡಿ ಕೃಷಿಗೆ ಸಹಾಯಧನ ನೀಡಲಾಗುವುದು.
ಅರ್ಹರು ಅಗತ್ಯ ದಾಖಲೆಗಳೊಂದಿಗೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿರುವ ತಾಲೂಕು ಮಟ್ಟದ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು, ಮಾಹಿತಿಗೆ ಮೀನುಗಾರಿಕಾ ಇಲಾಖೆಯ ವೆಬ್ಸೈಟ್ https://fisheries.Karnataka.gov.in ಪರಿಶೀಲಿಸುವಂತೆ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.