ಅಸ್ಸಾಂ: ಭಾರೀ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿದ್ದ 119 ರೈಲು ಪ್ರಯಾಣಿಕರನ್ನು ರಕ್ಷಿಸಿದ ಭಾರತೀಯ ವಾಯುಪಡೆ
Update: 2022-05-16 05:15 GMT
ಗುವಾಹಟಿ: ಭಾರೀ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸಿಲ್ಚಾರ್-ಗುವಾಹಟಿ ಎಕ್ಸ್ಪ್ರೆಸ್ ರೈಲಿನ 119 ಪ್ರಯಾಣಿಕರನ್ನು ಭಾರತೀಯ ವಾಯುಪಡೆ (ಐಎಎಫ್) ರಕ್ಷಿಸಿದೆ.
ಸಿಲ್ಚಾರ್-ಗುವಾಹಟಿ ರೈಲು ಕ್ಯಾಚಾರ್ ಪ್ರದೇಶದಲ್ಲಿ ಸಿಲುಕಿಕೊಂಡಿತ್ತು. ಪ್ರವಾಹದ ನೀರಿನಿಂದ ರೈಲು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲು ಸಾಧ್ಯವಾಗಿರಲಿಲ್ಲ.
ಹಲವಾರು ಗಂಟೆಗಳ ಕಾಲ ರೈಲು ಸಿಕ್ಕಿಹಾಕಿಕೊಂಡ ನಂತರ, ಜಿಲ್ಲಾಡಳಿತವು ಭಾರತೀಯ ವಾಯುಪಡೆಯ ಸಹಾಯದಿಂದ 119 ಜನರನ್ನು ರಕ್ಷಿಸಿತು.
ಅಸ್ಸಾಂ ಹಠಾತ್ ಪ್ರವಾಹ ಹಾಗೂ ಹಲವಾರು ಸ್ಥಳಗಳಲ್ಲಿ ಭಾರಿ ಭೂಕುಸಿತಗಳಿಂದ ತತ್ತರಿಸಿಹೋಗಿದ್ದು, ರಾಜ್ಯದ ಇತರ ಭಾಗಗಳಿಂದ ರೈಲು ಮತ್ತು ರಸ್ತೆ ಸಂಪರ್ಕಗಳು ಸ್ತಬ್ದವಾಗಿದೆ.
ಹಲವು ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 80 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಿಳಿಸಿದೆ.