ದೇವಾಲಯಗಳ ಪ್ರತಿಮೆ ನವೀಕರಣಕ್ಕಾಗಿ ನಿಧಿ ಸಂಗ್ರಹ, ವಂಚನೆ ಆರೋಪ: ಬಲಪಂಥೀಯ ತಮಿಳು ಯೂಟ್ಯೂಬರ್‌ ಬಂಧನ

Update: 2022-05-30 16:45 GMT
Photo: Youtube/SS

ಚೆನ್ನೈ: ದೇವಾಲಯದ ಪ್ರತಿಮೆಗಳ ನವೀಕರಣಕ್ಕಾಗಿ ಜನರಿಂದ ಕನಿಷ್ಠ 40 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ವಂಚಿಸಿದ ಆರೋಪದ ಮೇಲೆ ಬಲಪಂಥೀಯ ಯೂಟ್ಯೂಬರ್ ಎಸ್ ಕಾರ್ತಿಕ್ ಗೋಪಿನಾಥ್ ಎಂಬಾತನನ್ನು ಚೆನ್ನೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮುತಪುದುಪೇಟೆ ನಿವಾಸಿ ಎಸ್ ಕಾರ್ತಿಕ್ ಗೋಪಿನಾಥ್,  ಡಿಎಂಕೆ ಸರ್ಕಾರವನ್ನು ಟೀಕಿಸುವ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ 'ಇಳಯ ಭಾರತಂ' ಎಂಬ ಯೂಟ್ಯೂಬ್‌ ಚಾನೆಲ್‌ಗೆ 2.08 ಲಕ್ಷ ಚಂದಾದಾರರಿದ್ದಾರೆ. 

ಸಿರುವಾಚೂರಿನ ಅರುಲ್ಮಿಗು ಮಧುರ ಕಾಳಿಯಮ್ಮನ್ ತಿರುಕೋಯಿಲ್‌ ನ ಕಾರ್ಯನಿರ್ವಾಹಕ ಅಧಿಕಾರಿ ಟಿ ಅರವಿಂದನ್ ಅವರ ದೂರಿನ ಆಧಾರದ ಮೇಲೆ, ಆವಡಿ ಸೈಬರ್ ಕ್ರೈಂ ಸೆಲ್,  ಐಪಿಸಿ ಸೆಕ್ಷನ್ 406, 420 ಮತ್ತು ಐಟಿ ಕಾಯ್ದೆ ಸೆಕ್ಷನ್ 66 (ಡಿ) ಅಡಿಯಲ್ಲಿ ಗೋಪಿನಾಥ್‌ ವಿರುದ್ಧ ಪ್ರಕರಣ ದಾಖಲಿಸಿದೆ. ಸೋಮವಾರ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ʼಅರುಲ್ಮಿಗು ಮಥುರ ಕಾಳಿಯಮ್ಮʼನ ದೇವಸ್ಥಾನದ ಉಪ ದೇವಾಲಯಗಳ ಪ್ರತಿಮೆಗಳ ಜೀರ್ಣೋದ್ಧಾರದ ನೆಪದಲ್ಲಿ   ನಿಧಿ ಸಂಗ್ರಹಣೆ ಸೈಟ್ ಮೂಲಕ ಹಣವನ್ನು ದೇಣಿಗೆ ನೀಡುವಂತೆ ಅವರು ಸಾರ್ವಜನಿಕರನ್ನು ಕೇಳಿದ್ದರು ಮತ್ತು ಅವರು ಈ ಮೊತ್ತವನ್ನು ತಮ್ಮ ಸ್ವಂತ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಬಿಜೆಪಿ ನಾಯಕ ಎಚ್.ರಾಜಾ ಕಾರ್ತಿಕ್‌ ಗೋಪಿನಾಥನ್‌ ಬಂಧನವನ್ನು ಖಂಡಿಸಿದ್ದು, ‘ರಾಷ್ಟ್ರೀಯವಾದಿ ಯೂಟ್ಯೂಬರ್‌ಗಳ ಜೊತೆ ನಿಲ್ಲುತ್ತೇವೆ ಮತ್ತು ಅವರನ್ನು ಕಾನೂನಾತ್ಮಕವಾಗಿ ಬೆಂಬಲಿಸುತ್ತೇವೆ’ ಎಂದು ಹೇಳಿದ್ದಾರೆ.   

ಏಳು ತಿಂಗಳ ಹಿಂದೆ, ಗೋಪಿನಾಥ್ ಅವರು ಅರುಲ್ಮಿಗು ಮಥುರಾ ಕಾಳಿಯಮ್ಮನ್ ದೇವಾಲಯ ಮತ್ತು ಪೆರಂಬಲೂರ್ ಜಿಲ್ಲೆಯ ಉಪ ದೇವಾಲಯಗಳಲ್ಲಿ ಹಲವಾರು ಪ್ರತಿಮೆಗಳು ಹಾನಿಗೊಳಗಾಗಿವೆ ಮತ್ತು ಜೀರ್ಣೋದ್ಧಾರಕ್ಕೆ 36 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ದಾನಿಗಳಿಗೆ ಕೊಡುಗೆ ನೀಡಲು ಅವರು   ನಿಧಿಸಂಗ್ರಹಣೆ ಸೈಟ್‌ಗೆ ಲಿಂಕ್ ಅನ್ನು ಸಹ ಒದಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News