ರಾಜ್ಯಸಭಾ ಚುನಾವಣೆ : ಪಿ.ಚಿದಂಬರಂ,ಕಪಿಲ್ ಸಿಬಲ್ ಸೇರಿದಂತೆ 41 ಅಭ್ಯರ್ಥಿಗಳ ಅವಿರೋಧ ಆಯ್ಕೆ
ಹೊಸದಿಲ್ಲಿ,ಜೂ.4: ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಸೇರಿದಂತೆ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 16ರಂದು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಸಿಬಲ್ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಬಿಜೆಪಿಯ ಸುಮಿತ್ರಾ ವಾಲ್ಮೀಕಿ ಮತ್ತು ಕವಿತಾ ಪಾಟಿದಾರ್,ಕಾಂಗ್ರೆಸ್ನ ರಾಜೀವ ಶುಕ್ಲಾ,ಆರ್ಜೆಡಿಯ ಮಿಸಾ ಭಾರ್ತಿ ಮತ್ತು ಆರ್ಎಲ್ಡಿಯ ಜಯಂತ ಚೌಧರಿ ಅವರೂ ಅವಿರೋಧವಾಗಿ ಆಯ್ಕೆಗೊಂಡವರಲ್ಲಿ ಸೇರಿದ್ದಾರೆ.
ಅವಿರೋಧವಾಗಿ ಆಯ್ಕೆಗೊಂಡವರಲ್ಲಿ 14 ಜನರು ಬಿಜೆಪಿಗೆ,ತಲಾ ನಾಲ್ವರು ಕಾಂಗ್ರೆಸ್ ಮತ್ತು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಾರ್ಟಿ,ತಲಾ ಮೂವರು ಡಿಎಂಕೆ ಮತ್ತು ಬಿಜೆಡಿ,ತಲಾ ಇಬ್ಬರು ಆಪ್,ಆರ್ಜೆಡಿ,ಟಿಆರ್ಎಸ್ ಮತ್ತು ಎಐಎಡಿಎಂಕೆ ಹಾಗೂ ತಲಾ ಓರ್ವರು ಜೆಎಂಎಂ,ಜೆಡಿಯು,ಎಸ್ಪಿ ಮತ್ತು ಆರ್ಎಲ್ಡಿಗೆ ಸೇರಿದ್ದಾರೆ. ಓರ್ವ ಪಕ್ಷೇತರ ಅಭ್ಯರ್ಥಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದ ಆರು,ರಾಜಸ್ಥಾನ ಮತ್ತು ಕರ್ನಾಟಕದ ತಲಾ ನಾಲ್ಕು ಹಾಗೂ ಹರ್ಯಾಣದ ಎರಡು ಸೇರಿದಂತೆ ಒಟ್ಟು 16 ಸ್ಥಾನಗಳಿಗೆ ಜೂ.10ರಂದು ಚುನಾವಣೆ ನಡೆಯಲಿದ್ದು,ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ.