ಕೇಂದ್ರ ಸರಕಾರದ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ರಾಜ್ಯ ಸರಕಾರ ವೈಫಲ್ಯ: ರವೀಂದ್ರ ನಾಯ್ಕ

Update: 2022-06-07 16:08 GMT

ಶಿರಸಿ : ಕೇಂದ್ರ ಸರಕಾರದ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ರಾಜ್ಯ ಸರಕಾರವು ವೈಫಲ್ಯವಾಗಿದ್ದು, ಅರಣ್ಯವಾಸಿಗಳ ಪರವಾಗಿ ರಾಜ್ಯ ಸರಕಾರಗಳು ಗಂಭೀರವಾಗಿ ಚಿಂತಿಸಬೇಕು. ಇಲ್ಲದಿದ್ದರೇ, ಉತ್ತರ ಕನ್ನಡ ಜಿಲ್ಲೆಯು ನಿರಾಶ್ರಿತ ಜಿಲ್ಲೆಯಾಗಬಹುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಅರಣ್ಯ ವಾಸಿಗಳನ್ನ ಉಳಿಸಿ-ಜಾಥದ ಕಾರ್ಯಕ್ರಮದ ಅಂಗವಾಗಿ ಶಿರಸಿ ತಾಲೂಕಿನ, ಬಂಕನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕಂಡ್ರಾಜಿಯಲ್ಲಿನ ಮಾರುತಿ ದೇವಾಲಯದ ಆವರಣದಲ್ಲಿ ಜರುಗಿದ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅರಣ್ಯಾಧಿಕಾರಿಗಳ ದೌರ್ಜನ್ಯ 

ತಾಂತ್ರಿಕ ದೋಷದ ಅಡಿಯಲ್ಲಿ ಜಿಪಿಎಸ್ ಅಸಮರ್ಪಕ ಅಳತೆಯ ಮಾನದಂಡದ ಅಡಿಯಲ್ಲಿ ಅರಣ್ಯ ಸಿಬ್ಬಂದಿ ಜಿಲ್ಲಾದ್ಯಂತ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮಾಡುತ್ತಿರುವುದು ಖಂಡನಾರ್ಹ. ಅರಣ್ಯ ಸಿಬ್ಬಂದಿ ಕಾನೂನು ಬಾಹಿರ ಕೃತ್ಯ ಮುಂದುವರೆಸಿದ್ದಲ್ಲಿ ಅರಣ್ಯ ಸಿಬ್ಬಂದಿಗಳ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗು ವುದೆಂದು ರವೀಂದ್ರ ನಾಯ್ಕ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಹಿರಿಯ ಹೋರಾಟಗಾರರಾದ ಎಮ್ ಆರ್ ನಾಯ್ಕ ಕಂಡ್ರಾಜಿ ಅವರು ವಹಿಸಿದ್ದರು. ಸಭೆಯನ್ನು ಉದ್ಧೇಶಿಸಿ ವಕೀಲ ಮಹೇಶ್ ನಾಯ್ಕ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ನೆಹರೂ ನಾಯ್ಕ ಬಿಳೂರು ಮಾತನಾಡಿದರು.

ಸಭೆಯಲ್ಲಿ ರವಿ ನಾಯ್ಕ ಮುಟ್ಟಳ್ಳಿ, ಗ್ರಾಮ ಪಂ. ಅಧ್ಯಕ್ಷ ಕರಿಯಪ್ಪ ಗೌಡ, ಎಮ್ ಕೆ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಚಂದ್ರು ನಾಯ್ಕ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News