ಮುಂಬೈಯಿಂದ ಮಂಗಳೂರಿಗೆ ಟಿಕೆಟ್ ರಹಿತ ಪ್ರಯಾಣಿಕನಿಂದ ದಾಖಲೆ ಇಲ್ಲದ 2 ಕೋಟಿ ರೂ. ನಗದು ವಶ
ಉಡುಪಿ/ಕಾರವಾರ, ಜೂ.9: ಮುಂಬೈಯಿಂದ ಮಂಗಳೂರಿಗೆ ತೆರಳುತಿದ್ದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ ದಾಖಲೆ ಇಲ್ಲದ 2 ಕೋಟಿ ರೂ. ನಗದು ಹಣವನ್ನು ರೈಲ್ವೆ ಪೊಲೀಸರು ಬುಧವಾರ ಕಾರವಾರ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ರಾಜಸ್ಥಾನ ಮೂಲದ ಆರೋಪಿಯೊಬ್ಬನನ್ನು ಈ ಸಂಬಂಧ ಬಂಧಿಸಲಾಗಿದೆ.
ರೈಲು ನಂ. ೧೨೧೩೩ (ಸಿಎಸ್ಎಂಟಿ-ಮಂಗಳೂರು ಜಂಕ್ಷನ್)ರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ ಎರಡು ಕೋಟಿ ರೂ. ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾರವಾರ ಆರ್ಪಿಎಫ್ ಇನ್ಸ್ಪೆಕ್ಟರ್ ವಿಪಿನ್ ಸಿಂಗ್ ರಾಣಾ ಮತ್ತು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರಾಜಸ್ಥಾನದ ಚೆನ್ ಸಿಂಗ್ ಯಾನೆ ಮನೋಹರ್ ಸಿಂಗ್ (22) ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಸೂಂತ್ರಿ ಜಲೋರದ ವರಾನ್ವ ನಿವಾಸಿ ಎಂದು ಗೊತ್ತಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಸಾಗಿಸುವ ಬಗ್ಗೆ ಆತ ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿರಲಿಲ್ಲ. ದಾಖಲೆಗಳಿಲ್ಲದ ಈ ಹಣವನ್ನು ಆತ ಮುಂಬಯಿಯ ಭರತ್ ಭಾಯ್ ಯಾನೆ ಪಿಂಟು ಪರವಾಗಿ ಸಾಗಿಸುತಿದ್ದು, ಇದನ್ನು ಮಂಗಳೂರಿನಲ್ಲಿ ರಾಜು ಎಂಬವರಿಗೆ ತಲುಪಸಬೇಕಿತ್ತು ಎಂದಾತ ವಿಚಾರಣೆಯ ವೇಳೆ ತಿಳಿಸಿದ್ದಾನೆ.
ಘಟನೆಯ ವಿವರ: ರೈಲ್ವೆ ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ವಿಪಿನ್ ಸಿಂಗ್ ತಿಳಿಸಿದಂತೆ ಘಟನೆಯ ವಿವರ ಹೀಗಿದೆ. ಜೂ.8ರ ಬುಧವಾರ ಬೆಳಗ್ಗೆ 11ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಗ್ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದಾನೆಂದು ಬೇಲಾಪುರದಿಂದ ರೈಲ್ವೆ ಅಧಿಕಾರಿ ಹೆಚ್.ಕೆ.ಪ್ರಸನ್ನ ಕುಮಾರ್ ಲಿಖಿತ ಮಾಹಿತಿಯನ್ನು ಕಾರವಾರ ರೈಲ್ವೆ ಪೊಲೀಸರಿಗೆ ಸುಳಿವು ನೀಡಿದರು. ಈ ವ್ಯಕ್ತಿ ರೈಲ್ವೆ ಟಿಸಿಗಳಿಗೆ ಯಾವುದೇ ಮಾಹಿತಿ ನೀಡಲು, ಬ್ಯಾಗ್ನ್ನು ತೆರೆದು ತೋರಿಸಲು ಹಾಗೂ ಟಿಕೆಟ್ ತೋರಿಸಲು ನಿರಾಕರಿಸಿದ್ದ. ಈ ವೇಳೆ ರೈಲು ಕಾರವಾರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತ್ತು.
ಅಧಿಕಾರಿ, ಶಂಕಿತ ವ್ಯಕ್ತಿಯೊಂದಿಗೆ ಕಾರವಾರ ರೈಲು ನಿಲ್ದಾಣದಲ್ಲಿ ಇಳಿದು ಆತನನ್ನು ಕಾರವಾರದಲ್ಲಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದರು. ಟಿಕೇಟ್ ರಹಿತ ಪ್ರಯಾಣಕ್ಕಾಗಿ ಆತನಿಗೆ 1060ರೂ. ದಂಡವಿಧಿಸಿದ್ದು, ವ್ಯಕ್ತಿಯನ್ನು ತನಿಖೆಗೆ ಒಳಪಡಿಸಿದರು. ಆರಂಭದಲ್ಲಿ ಆರೋಪಿ ಚೆನ್ ಸಿಂಗ್ ತನ್ನ ಬ್ಯಾಗ್ ತೆರೆಯಲು ನಿರಾಕರಿಸಿದ್ದ.
ತೀವ್ರ ವಿಚಾರಣೆಯ ಬಳಿಕ ಚೆನ್ ಸಿಂಗ್ ಬ್ಯಾಗ್ನಲ್ಲಿ ಸ್ವಲ್ಪ ನಗದು (ಭಾರತೀಯ ಕರೆನ್ಸಿ ನೋಟುಗಳು) ಇರುವುದನ್ನು ಒಪ್ಪಿಕೊಂಡ. ಕೂಡಲೇ ಸ್ವತಂತ್ರ ಸಾಕ್ಷಿಗಳು ಹಾಗೂ ಹಣ ಎಣಿಸುವ ಯಂತ್ರವನ್ನು ತರಿಸಿ ಬ್ಯಾಗ್ನ್ನು ತೆರೆಯಲಾಯಿತು. ಇಡೀ ಘಟನೆಯನ್ನು ಪಂಚನಾಮ ಮಾಡಲಾಯಿತಲ್ಲದೇ, ಕೆಮರಾದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಬ್ಯಾಗ್ನ್ನು ತೆರೆದಾಗ ಕಂದು ಬಣ್ಣದ ಸೆಲ್ಲೋ ಟೇಪ್ನಿಂದ ಸುತ್ತಿದ ಪ್ಯಾಕ್ನಲ್ಲಿ ೧೦೦ ಸಣ್ಣ ಬಂಡಲ್ಗಳಲ್ಲಿ ಭಾರತೀಯ ಕರೆನ್ಸಿ ನೋಟುಗಳಿದ್ದು, ಒಟ್ಟು 2 ಕೋಟಿ ರೂ. ಅದರಲ್ಲಿತ್ತು. ಕಾರವಾರದ ರೈಲ್ವೆ ಪೊಲೀಸ್ ಪಡೆಯ ಕಚೇರಿಯಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ಜೂ.೮ರಂದು ಪಂಚನಾಮ ನಡೆಸಲಾಯಿತು.
ವಿಚಾರಣೆಯ ವೇಳೆ ತನ್ನ ಹೆಸರನ್ನು ಚೆನ್ಸಿಂಗ್ ಯಾನೆ ಮನೋಹರ್ ಸಿಂಗ್ ಎಂದು ತಿಳಿಸಿದ ೨೨ರ ಹರೆಯ ಯುವಕ, ಮುಂಬೈನ ಭರತ್ ಭಾಯ್ ಯಾನೆ ಪಿಂಟು ಎಂಬವರ ಬಳಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ೧೫೦೦೦ ರೂ ಪ್ರೋತ್ಸಾಹಕ ಸಂಬಳ ಪಡೆಯುತ್ತೇನೆ. ಅವರ ನಿರ್ದೇಶನದ ಮೇರೆಗೆ ಹಣ ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ಹಣವನ್ನು ಮಂಗಳೂರಿನಲ್ಲಿರುವ ರಾಜು ಎಂಬುವವರಿಗೆ ತಲುಪಿಸಲು ಹೋಗುತ್ತಿದ್ದೆ ಎಂದಿದ್ದಾನೆ.
ಇಡೀ ಘಟನೆಯನ್ನು ಪಂಚನಾಮ ಮಾಡಿದ್ದು, ಚಿತ್ರೀಕರಿಸಿ, ದಾಖಲೆ ಗಳೊಂದಿಗೆ ನೀಡಲಾಗಿದೆ. ಆರೋಪಿತನಿಂದ ೨ ಕೋಟಿ ರೂ. ನಗದು, ವಶಪಡಿಸಿಕೊಂಡ ಬ್ಯಾಗ್ನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಕಾರವಾರದ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಹಸ್ತಾಂತರಿಸಲಾಗಿದೆ ಎಂದು ವಿಪಿನ್ ಸಿಂಗ್ ರಾಣಾ ತಿಳಿಸಿದ್ದಾರೆ.