×
Ad

ದಿಲ್ಲಿ ಪೊಲೀಸರು ನನ್ನ ಬಟ್ಟೆ ಹರಿದರು, ನೀರನ್ನು ಕೇಳಿದರೂ ಕೊಡಲಿಲ್ಲ: ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಆರೋಪ

Update: 2022-06-16 10:12 IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪದ ನಡುವೆ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ಕಾಂಗ್ರೆಸ್ ಸಂಸದೆ ಜೋತಿಮಣಿ ಅವರ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಈ ವೀಡಿಯೊದಲ್ಲಿ  ದಿಲ್ಲಿ  ಪೊಲೀಸರು ತಮ್ಮ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಂಸದೆ ಜ್ಯೋತಿಮಣಿ ಆರೋಪಿಸಿದ್ದಾರೆ. .

"ಯಾವುದೇ ಪ್ರಜಾಪ್ರಭುತ್ವದಲ್ಲಿ ಇದು ಅತಿರೇಕದ ಸಂಗತಿಯಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ಈ ರೀತಿ  ನಡೆಸಿಕೊಳ್ಳುವುದು ಪ್ರತಿ ಭಾರತೀಯ ಸಭ್ಯತೆಯ ಮಾನದಂಡವನ್ನು ಉಲ್ಲಂಘಿಸುತ್ತದೆ.  ನಾನು  ದಿಲ್ಲಿ  ಪೊಲೀಸರ  ನಡವಳಿಕೆಯನ್ನು ಖಂಡಿಸುತ್ತೇನೆ ಹಾಗೂ  ಉತ್ತರದಾಯಿತ್ವವನ್ನು ಕೋರುತ್ತೇನೆ. ಸ್ಪೀಕರ್ ಓ ಬಿರ್ಲಾ ಅವರೇ  ದಯವಿಟ್ಟು ಕ್ರಮ ಕೈಗೊಳ್ಳಿ!'' ಎಂದು ತರೂರ್ ಬರೆದಿದ್ದಾರೆ.

ದಿಲ್ಲಿ  ಪೊಲೀಸ್ ಸಿಬ್ಬಂದಿ ತನ್ನ ಬಟ್ಟೆಗಳನ್ನು ಹರಿದಿದ್ದಾರೆ.  ಇತರ ಮಹಿಳಾ ಪ್ರತಿಭಟನಾಕಾರರೊಂದಿಗೆ ಕ್ರಿಮಿನಲ್‌ ರೀತಿ  ಬಸ್‌ನಲ್ಲಿ ತನ್ನನ್ನು ಕರೆದಯೊಯ್ದಿದ್ದಾರೆ ಎಂದು ತರೂರ್ ಅವರು ಹಂಚಿಕೊಂಡ ವೀಡಿಯೊದಲ್ಲಿ ತಮಿಳುನಾಡಿನ ಕರೂರ್‌ನ ಕಾಂಗ್ರೆಸ್ ಸಂಸದೆ ಜೋತಿಮಣಿ ಆರೋಪಿಸಿದ್ದಾರೆ.

ಜೋತಿಮಣಿ ತನ್ನ ಹರಿದ ಕುರ್ತಾವನ್ನು ತೋರಿಸುತ್ತಿರುವುದು ವಿಡಿಯೋದಲ್ಲಿದೆ.  ಕಾಂಗ್ರೆಸ್ ಸಂಸದ ಒಂದೇ ಒಂದು ಶೂ ಧರಿಸಿರುವುದು ಕಂಡುಬಂದಿದೆ.

"ದಿಲ್ಲಿ ಪೊಲೀಸರು ನಿನ್ನೆ ನಮ್ಮ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅವರು ನನ್ನ ಬಟ್ಟೆಗಳನ್ನು ಹರಿದು, ನನ್ನ ಬೂಟುಗಳನ್ನು ತೆಗೆದುಹಾಕಿ,  ಅಪರಾಧಿಯಂತೆ ನನ್ನನ್ನು ಹೊತ್ತೊಯ್ದಿದ್ದಾರೆ. ಕುಡಿಯಲು ನೀರು  ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.

"ಬಸ್ಸಿನಲ್ಲಿ ನಾನು ಸೇರಿದಂತೆ 7-8 ಮಹಿಳೆಯರಿದ್ದೆವು.  ನಾವು ಪದೇ ಪದೇ ಕುಡಿಯಲು ನೀರು ಕೇಳಿದ್ದೇವೆ. ಆದರೆ ಅವರು  ನೀರು ನೀಡಲು  ನಿರಾಕರಿಸಿದರು. ನಾವು ನೀರನ್ನು  ಹೊರಗಿನಿಂದ ಖರೀದಿಸಲು ಪ್ರಯತ್ನಿಸಿದಾಗ, ನಮಗೆ ನೀರು ಕೊಡಬೇಡಿ ಎಂದು ವ್ಯಾಪಾರಿಗಳಿಗೆ ಅವರು ಹೇಳುತ್ತಿದ್ದರು ”ಎಂದು ಜ್ಯೋತಿಮಣಿ ಆರೋಪಿಸಿದರು. ಈ ವಿಷಯವನ್ನು ಪರಿಶೀಲಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಬುಧವಾರ ಸತತ ಮೂರನೇ ದಿನವೂ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಂತೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News