ಕುಟುಂಬ ಸಂಗಮಗಳಿಂದ ಸಮಾಜದಲ್ಲಿ ಶಾಂತಿ, ಪ್ರೀತಿ ಬೆಳೆಯುತ್ತದೆ: ಡಾ. ಕುನ್ಹಾಲಿ
ಉಪ್ಪಳ: ಪಾರಂಪರಿಕ ಕುಟುಂಬಗಳ ಇತ್ತೀಚಿನ ತಲೆಮಾರುಗಳು ಭೌತಿಕವಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಸಹ-ಕುಟುಂಬಗಳಾಗಿ ವಿಭಜಿಸಿ ನೆಲೆಸಿದರೂ ತಮ್ಮ ಪೂರ್ವಜರ ಸತ್ಪಥದಲ್ಲಿ ಸಾಗಿದರೆ ಅದು ಸಮಾಜದಲ್ಲಿ ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕೊಡುವುದು ಎಂದು ಪೈವಳಿಕೆ ಸಮೀಪದ ಪ್ರತಿಷ್ಠಿತ ಮುಟ್ಟಜೆ ಕುನ್ಹಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಷನ್ ನ ಅಧ್ಯಕ್ಷ ಹಾಗೂ ಹೆಸರಾಂತ ಹೃದಯ ತಜ್ಞರಾದ ಡಾ. ಕೆ. ಕುನ್ಹಾಲಿ ಹೇಳಿದರು.
ಪೈವಳಿಕೆ ಕುಲಾಲ ಸಮಾಜ ಮಂದಿರದಲ್ಲಿ ಜರುಗಿದ ಆರನೇ ವಾರ್ಷಿಕ ಕುಟುಂಬ ಸಂಗಮ - 2022 ನ್ನು ಕುಟುಂಬದ ಹಿರಿಯ ಸದಸ್ಯರಾದ ಖದೀಜಮ್ಮ ಬಾಚಳಿಕೆ ನೆರವೇರಿಸಿದರು ಇವರ ಜೊತೆ ಖಾದರ್ ಕುಂಹಿ ಹಾಜಿ ನಯರಮೂಲೆ ಹಾಗೂ ಮರಿಯಮ್ಮ ಹಜ್ಜುಮ್ಮ ಕಾಣಜೆ ಜೊತೆಗೂಡಿದರು.
ಕುಟುಂಬದಲ್ಲಿ ಇತ್ತೀಚೆಗೆ ಮರಣ ಹೊಂದಿದ ಹಿರಿಯರೆಲ್ಲರಿಗೂ ಸಂತಾಪ ಸೂಚನೆ ಹಾಗೂ ದುವಾ ಮಾಡಲಾಯಿತು. ಹಾಜಿ ಎನ್. ಇಬ್ರಾಹಿಂ ನಯರಮೂಲೆ, ಹಾಜಿ ಅಬುಸಾಲಿ ಪಾರೆ, ಉಪಾಧ್ಯಕ್ಷರಾದ ಡಾಕ್ಟರ್ ಎನ್. ಉಮರ್ ನಯರಮೂಲೆ, ಹಮೀದ್ ಪಾರೆ, ಕೋಶಾಧಿಕಾರಿಗಳಾದ ಹಾಜಿ ಎಂ. ಕೆ. ಹನೀಫ್ ಹಾಗೂ ಜೊತೆ ಕಾರ್ಯದರ್ಶಿಗಳಾದ ನಫೀಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಜಿ ಹಮೀದ್ ಕುನ್ಹಾಲಿ ಮುಟ್ಟಜೆ ಸ್ವಾಗತಿಸಿದರು. ಡಾ. ಎ. ಎ. ಫಝಲ್ ವಂದಿಸಿದರು. ಹಾಜಿ ಆಲಿ ಕುಂಹಿ ಪಾರೆ ಕಾರ್ಯಕ್ರಮ ನಿರೂಪಿಸಿದರು.
ಇಂಡಿಗೋ ಏರ್ಲೈನ್ಸ್ ಹಿರಿಯ ಕ್ಯಾಪ್ಟನ್ ಪೈಲೆಟ್, ಕ್ಯಾಪ್ಟನ್ ಸರ್ಫರಾಝ ಝಾಕಿರ್ ಅವರು ಪೈಲೆಟ್ ಉದ್ಯೋಗಾರ್ಥಿಗಳಿಗೆ ಮಾರ್ಗದರ್ಶನ ಎಂಬ ವಿಶೇಷ ಉಪನ್ಯಾಸವನ್ನು ನೀಡಿ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರಿಗೆ ಉಪಯುಕ್ತ ಮಾಹಿತಿ ನೀಡಿದರು.
ಅಪರಾಹ್ನ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಏರ್ಪಡಿಸಿದ್ದ ಮನರಂಜನೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100% ಅಂಕಗಳಿಸಿದ ಶಾಝಿನ್ ಅಬ್ದುಲ್ ರಝಾಕ್ ಹಾಗೂ 80% ಗಿಂತ ಅಧಿಕ ಅಂಕ ಗಳಿಸಿದ 13 ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.