ಭಟ್ಕಳ: 91ನೇ ದಿನಕ್ಕೆ ಕಾಲಿಟ್ಟ ಮೊಗೇರ್ ಸಮುದಾಯದ ಪ್ರತಿಭಟನೆ

Update: 2022-06-21 17:17 GMT

ಭಟ್ಕಳ: ಜಿಲ್ಲಾಡಳಿತ ತಮಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿದ ಮೊಗೇರ್ ಸಮುದಾಯದ ವಿದ್ಯಾರ್ಥಿಗಳು ಮೂರು ದಿನದೊಳಗೆ ತಮಗೆ ಪ.ಜಾ ಪ್ರಮಾಣಪತ್ರ ನೀಡುವಂತೆ ಪಟ್ಟು ಹಿಡಿದು ಇಲ್ಲಿನ ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆ ಪ್ರತಿಭಟಿಸಿದ ಘಟನೆ ಮಂಗಳವಾರ ಜರಗಿದೆ.

ತಮಗೆ ಸಿಗುತ್ತಿರುವ ಪ.ಜಾ.ಪ್ರಮಾಣಪತ್ರವನ್ನು ಸರ್ಕಾರ ಏಕಾಎಕಿ ನಿಲ್ಲಿಸಿದ್ದು ಅದನ್ನು ಮರುಸ್ಥಾಪಿಸುವಂತೆ ಶಾಂತಿಯುತವಾಗಿ ನಡೆಯುತ್ತಿರುವ ಮೊಗೇರ್ ಸಮುದಾಯದ ಪ್ರತಿಭಟನೆ 91ನೆ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದ ಮೊಗೇರ್ ಸಮುದಾಯದ ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೆ ಬೀದಿಗಿಳಿದು ಜಿಲ್ಲಾಡಡಳಿತ ಮತ್ತು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. 

ಶಮ್ಸುದ್ದೀನ್ ವೃತ್ತದ ಮೂಲಕ ಮೆರವಣೆಗೆ ನಡೆಸಿ ಮೊದಲಿಗೆ ಶಿಕ್ಷಣಾದಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದು ನಂತರ ಅಲ್ಲಿಂದ ಸಹಾಯಕ ಅಯುಕ್ತರ ಕಚೇರಿ ಎದರು ಸರ್ಕಾರದ ವಿರುದ್ಧ ಘೋಷಣೆ ಕೋಗಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿ, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡ ತಿಲಕ್ ಮೊಗೇರ್, ಹಲವಾರು ವರ್ಷಗಳಿಂದ ಮೊಗೇರ್ ಶಿಕ್ಷಣ ಇಲಾಖೆ ಸಮುದಾಯದ ವಿದ್ಯಾರ್ಥಿಗಳನ್ನು ವಂಚಿಸುತ್ತ ಬಂದಿದ್ದು ಪ್ರಮಾಣಿಕ ಸಿಗಬೇಕಾದ ಪ.ಜಾ. ಪ್ರಮಾಣಪತ್ರ ನೀಡದೆ ಸರ್ಕಾರಿ ಸೌಲಭ್ಯಗಳಿಂದ ನಮ್ಮನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು. ೧೯೭೬ ರಿಂದ ಕೇಂದ್ರ ಸರಕಾರದ ಅಧಿಕೃತ ಆದೇಶದಂತೆ ನಾವು ಪ.ಜಾ. ಪ್ರಮಾಣಪತ್ರ ಪಡೆಯುತ್ತಿದ್ದೇವೆ. ನಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಂಡು ಬಂದಿರುತ್ತಾರೆ. ಆದರೆ ೧೪ ವರ್ಷಗಳಿಂದ ನಮಗೆ ಸಿಗಬೇಕಾದ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಜಿಲ್ಲಾಡಳಿತ ತಡೆಹಿಡಿದಿರುತ್ತದೆ. ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಪೂರಕವಾದ ಶಿಷ್ಯವೇತನ, ಸರಕಾರ ವಸತಿ ಸೌಲಭ್ಯ, ಉನ್ನತ ವ್ಯಾಸಂಗಕ್ಕೆ ಶಾಲಾ ಕಾಲೇಜುಗಳ ಆಯ್ಕೆ ಮುಂತಾದವುಗಳಿಗೆ ತೊಡಕಾಗಿದ್ದು, ಜಿಲ್ಲಾಡಳಿತದಿಂದ ನಮಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು. 

ನಮ್ಮ ಹಿರಿಯರು ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದು, ನಮಗೆ ಯಾವುದೇ ಕಾರಣ ನೀಡದೆ ನ್ಯಾಯಾಲಯ ಮತ್ತು ಸರ್ಕಾರಿ ಆದೇಶ ಇದ್ದರೂ ಸಹ ಪ್ರಮಾಣ ಪತ್ರ ನೀಡುವುದನ್ನು ತಡೆಹಿಡಿದಿರುವುದು ನಮಗೆ ಮಾಡಿದ ಘೋರ ಅನ್ಯಾಯವಾಗಿದೆ. ಈಗಾಗಲೇ ನಾವು ಶಾಲಾ ಕಾಲೇಜುಗಳಿಗೆ ಪ್ರವೇಶವನ್ನು ಪಡೆದಿರುತ್ತೇವೆ. ಸದರಿ ನಮ್ಮ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಖಾಲಂ ನಂ. ೧೫ ರಲ್ಲಿರುವ ಪ.ಜಾತಿ/ಪ.ಪಂಗಡದ ಖಾಲಂನ್ನು ಖಾಲಿ ಬಿಟ್ಟಿದ್ದು/ಪ್ರಮಾಣ ಪತ್ರ ಲಭ್ಯವಿಲ್ಲವೆಂದು ನಮೂದಿಸಿದ್ದು ಇರುತ್ತದೆ. ಈ ಕಾರಣದಿಂದ ನಮ್ಮ ಎಲ್ಲಾ ದಾಖಲಾತಿಗಳು ಇದೇ ರೀತಿ ಹಲವು ವರ್ಷಗಳಿಂದ ಶಿಕ್ಷಣ ಇಲಾಖೆಯು ಮುಂದುವರಿಸಿಕೊAಡು ಬಂದಿದ್ದು ಇರುತ್ತದೆ. ಇದನ್ನು ನಾವು ಶಾಲಾ/ ಕಾಲೇಜುಗಳಲ್ಲಿ ಸಂಬಂಧಪಟ್ಟ ಶಿಕ್ಷಕರಲ್ಲಿ ಪ್ರಶ್ನಿಸಿದರೆ ಯಾವುದೇ ಕಾರಣ ನೀಡದೇ ನಮ್ಮನ್ನು ಇಲಾಖಾ ವರ್ಗವು ವಂಚಿಸುತ್ತಾ ಬಂದಿರುತ್ತದೆ. ಈ ರೀತಿ ಸುಳ್ಳು ಹೇಳುತ್ತಾ ನಮಗೆ ಸುಳ್ಳಿನ ಶಿಕ್ಷಣವನ್ನು ನೀಡುವ ಶಿಕ್ಷಣ ಇಲಾಖೆಯನ್ನು ನಂಬಲು ಸಾಧ್ಯವೇ? ಈ ಇಲಾಖೆಯಲ್ಲಿ ಈ ರೀತಿಯಾದ ಶಿಕ್ಷಣವನ್ನು ಪಡೆದುಕೊಂಡು ನಾವು ಈ ಸಮಾಜದಲ್ಲಿ ಬದುಕಲು ಸಾಧ್ಯವೇ? ಈ ಪ್ರಶ್ನೆ ನಮ್ಮ ವಿದ್ಯಾರ್ಥಿಗಳಲ್ಲಿ ಪ್ರತಿ ದಿನ ಕಾಡುತ್ತಿದೆ. ನಮಗೆ ಉತ್ತಮ, ಮೌಲ್ಯಯುತ ಶಿಕ್ಷಣ ನೀಡಬಯಸುತ್ತೀರೋ? ಅಥವಾ ಇಂತಹ ಸುಳ್ಳಿನ ಶಿಕ್ಷಣವನ್ನು ನೀಡಬಯಸುತ್ತೀರೋ? ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಲಾಗಿದ್ದು, ಸ್ವಯಂ ಪ್ರೇರಿತವಾಗಿ ನಾವು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ. ಒಂದು ವೇಳೆ ನಮಗೆ ಶೀಘ್ರವಾಗಿ ನ್ಯಾಯ ಒದಗಿಸಿಕೊಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ತರಗತಿ ಬಹಿಷ್ಕರಿಸಿ ನಾವೆಲ್ಲರೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತೇವೆಂದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News