ನಿವೃತ್ತಿ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಲ್ಲಿರುತ್ತಾರೆ ಗೊತ್ತೇ?

Update: 2022-06-23 02:04 GMT
ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹೊಸದಿಲ್ಲಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಿಂದ ಮುಂದಿನ ತಿಂಗಳು ನಿವೃತ್ತರಾದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಕೊನೆಯವರೆಗೂ ಇದ್ದ ಬಂಗ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು timesofindia ವರದಿ ಮಾಡಿದೆ.

ರಾಜಧಾನಿಯ ಹೃದಯಭಾಗದಲ್ಲಿರುವ 12 ಜನಪಥ್ ಬಂಗಲೆಯ ನವೀಕರಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಜುಲೈ 25ರಂದು ಕೋವಿಂದ್ ಈ ಬಂಗಲೆಗೆ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ. ಕೋವಿಂದ್ ಅವರ ಕುಟುಂಬ ನವೀಕರಣ ಕಾರ್ಯದ ವೇಳೆ ಯಾವುದೇ ವಿಶೇಷ ಬೇಡಿಕೆಗಳನ್ನು ಮುಂದಿಟ್ಟಿಲ್ಲ ಎಂದು ತಿಳಿದು ಬಂದಿದೆ.

"ಇದು ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲೊಂದಾಗಿದ್ದು, ಮುಖ್ಯ ಬಂಗಲೆಗೆ ಹೊಂದಿಕೊಂಡಿದ್ದ ಇತರ ಕಟ್ಟಡಗಳನ್ನು ತೆರವುಗಳಿಸಲಾಗಿದೆ. ಸಾಮಾನ್ಯ ನವೀಕರಣವನ್ನಷ್ಟೇ ಕೈಗೊಳ್ಳಲಾಗುತ್ತಿದೆ" ಎಂದು ಸರ್ಕಾರಿ ಮೂಲಗಳು ಹೇಳಿವೆ. 

ಈ ಮುನ್ನ ಪಾಸ್ವಾನ್ ಅವರ ತಮ್ಮ ಹಾಗೂ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರಿಗೆ ಈ ಬಂಗ್ಲೆಯಲ್ಲಿ ವಾಸವಿರುವಂತೆ ಅನಧಿಕೃತ ಆಫರ್ ನೀಡಲಾಗಿತ್ತು. ಆದರೆ ಇದನ್ನು ಅವರು ನಿರಾಕರಿಸಿದ್ದರು. ಬಳಿಕ ಇದನ್ನು ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಸುಧೀರ್ಘ ಅವಧಿಯ ಬಳಿಕವೂ ಬಂಗ್ಲೆಯನ್ನು ತೆರವುಗೊಳಿಸದೇ ಇದ್ದ ಕಾರಣದಿಂದ ವೈಷ್ಣವ್ ಅವರಿಗೆ ಬೇರೆ ನಿವಾಸವನ್ನು ಹಂಚಿಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News