ಇಂದು ಮೂರು ಲೋಕಸಭಾ, 7 ವಿಧಾನಸಭೆಗೆ ಉಪ ಚುನಾವಣೆ

Update: 2022-06-23 04:57 GMT
ಸಾಂದರ್ಭಿಕ ಚಿತ್ರ, photo:PTI

ಹೊಸದಿಲ್ಲಿ: ಇಂದು ಆರು ರಾಜ್ಯಗಳಲ್ಲಿ ಮೂರು ಲೋಕಸಭೆ ಹಾಗೂ  ಏಳು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯ  ಫಲಿತಾಂಶ ರವಿವಾರ (ಜೂನ್ 26) ಪ್ರಕಟವಾಗಲಿದೆ.

ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದ  ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರಾಜೀನಾಮೆಯಿಂದ ಅಝಂಗಢ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಅವಶ್ಯವಾಗಿತ್ತು. ರಾಮ್‌ಪುರ ಲೋಕಸಭಾ ಕ್ಷೇತ್ರ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ ಅವರಿಂದ ತೆರವಾಗಿದೆ.  ಖಾನ್ ಕೂಡ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಭಗವಂತ್ ಮಾನ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ನಂತರ ಪಂಜಾಬ್‌ನ ಸಂಗ್ರೂರ್‌ ಲೋಕಸಭಾ  ಸ್ಥಾನ ತೆರವುಗೊಂಡಿದೆ. ಈ ಕ್ಷೇತ್ರಕ್ಕೆ ಇಂದು ಉಪ ಚುನಾವಣೆ ನಡೆಯಲಿದೆ.

ಚುನಾವಣೆ ನಡೆಯುವ ಏಳು ವಿಧಾನಸಭಾ ಸ್ಥಾನಗಳಲ್ಲಿ ಒಂದು ದಿಲ್ಲಿಯ ರಾಜಿಂದರ್ ನಗರ ಕೂಡ ಒಂದಾಗಿದೆ.  ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಅವರಿಂದ  ಈ ಕ್ಷೇತ್ರ ತೆರವಾಗಿದೆ.

ಜಾರ್ಖಂಡ್‌ನ ಮಂದರ್, ಆಂಧ್ರಪ್ರದೇಶದ ಆತ್ಮಕೂರ್ ಹಾಗೂ  ತ್ರಿಪುರಾದ ಅಗರ್ತಲಾ, ಟೌನ್ ಬೋರ್ಡೋವಾಲಿ, ಸುರ್ಮಾ ಹಾಗೂ  ಜುಬಾರಾಜ್‌ನಗರದಲ್ಲಿ ಉಪಚುನಾವಣೆ ನಡೆಯಲಿರುವ ಉಳಿದ ವಿಧಾನಸಭಾ ಕ್ಷೇತ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News