ಸಾವರ್ಕರ್, ಆರೆಸ್ಸೆಸ್, ಜಾತಿ ವ್ಯವಸ್ಥೆ ಮತ್ತು ಅಂಬೇಡ್ಕರ್

Update: 2022-06-23 07:15 GMT

ಭಾಗ-2

ಮನುಸ್ಮೃತಿ, ಜಾತಿ ಮತ್ತು ಸಾವರ್ಕರ್ 

ಸಾವರ್ಕರ್ ಅವರ ವಿಚಾರ ಮತ್ತು ಆಚಾರಗಳು ಸಹ ಇಷ್ಟೇ ದಲಿತ ವಿರೋಧಿಯಾಗಿದ್ದರೂ ಮೋದಿ ಸರಕಾರ ಬಂದ ಮೇಲೆ ಅಂಬೇಡ್ಕರ್‌ಗೆ ಮುಂಚಿನಿಂದಲೂ ಸಾವರ್ಕರ್ ಜಾತಿ ವಿನಾಶಕ್ಕೆ ಪ್ರಯತ್ನಿಸುತ್ತಿದ್ದ ದಲಿತೋದ್ಧಾರಕ ಎಂಬ ಪ್ರಭಾವಳಿಯನ್ನು ಕಟ್ಟಿಕೊಡಲಾಗುತ್ತಿದೆ. ಸಾವರ್ಕರ್ ಅವರು 1924ರಲ್ಲಿ ರತ್ನಗಿರಿಯಲ್ಲಿ ಗೃಹಬಂಧನದಲ್ಲಿ ಇದ್ದಾಗಲೇ 'ಪತಿತ-ಪಾವನ' ದೇವಸ್ಥಾನವನ್ನು ಕಟ್ಟಿ ಅಸ್ಪೃಶ್ಯರಿಗೆ ಪ್ರವೇಶವನ್ನು ಕೊಟ್ಟಿದ್ದರೆಂದೂ, ಅಸ್ಪೃಶ್ಯತೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದರೆಂದೂ, ಅಂಬೇಡ್ಕರ್ ಕೂಡಾ ಅವರ ಪ್ರಯತ್ನಗಳನ್ನು ಪ್ರಶಂಸಿದ್ದರೆಂದು ಅರ್ಧ ಸತ್ಯ ಹಾಗೂ ಸುಳ್ಳುಗಳಿಂದ ಕೂಡಿದ ಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ಸತ್ಯಾಸತ್ಯತೆಗಳೇನು?

 ಮೊದಲಿಗೆ ಮನುಸ್ಮೃತಿಯ ಬಗ್ಗೆ ಸಾವರ್ಕರ್ ಅವರ ಧೋರಣೆಯೇನಾಗಿತ್ತು ಎಂದು ಪರಿಶೀಲಿಸೋಣ. ಅದರ ಬಗ್ಗೆ ಸಾವರ್ಕರ್ ಅವರು ನಿಖರವಾಗಿ 1932ರಲ್ಲಿ 'ಕಿರ್ಲೋಸ್ಕರ್' ಎಂಬ ಪತ್ರಿಕೆಗೆ ಬರೆದ ಸರಣಿ ಲೇಖನದಲ್ಲಿ ಹಾಗೂ ಆ ನಂತರ 1956ರ ಬರಹಗಳಲ್ಲಿ ಹೇಳಿಕೊಂಡಿದ್ದಾರೆ. ಇವೆಲ್ಲವನ್ನು ಆಧರಿಸಿ ಪ್ರೊ. ಶಂಸುಲ್ ಇಸ್ಲಾಮ್ ಅವರು SAVARKAR- MYTHS AND FACTS ಎಂಬ ಪುಸ್ತಕದಲ್ಲಿ ಸಾವರ್ಕರ್ ಬಗೆಗಿನ ಕಥನಗಳನ್ನು ಕೂಲಂಕಶವಾಗಿ ವಿಶ್ಲೇಷಿಸಿದ್ದಾರೆ. ಇಸ್ಲಾಮ್ ಅವರ ಬರಹಗಳನ್ನು ಖಂಡಿಸಿ ಸಂಘ ಪರಿವಾರದವರು ಈವರೆಗೆ ಹಲವಾರು ಲೇಖನಗಳನ್ನು ಬರೆದಿದ್ದರೂ ಸಾವರ್ಕರ್ ಅವರ ಅಭಿಪ್ರಾಯಗಳ ಬಗ್ಗೆ ಅವರು ಮಾಡಿರುವ ಉಲ್ಲೇಖವನ್ನು ಸುಳ್ಳೆಂದು ಹೇಳಿಲ್ಲ!

ಮೊದಲನೆಯದಾಗಿ ಅವರ 1932ರ ಕಿರ್ಲೋಸ್ಕರ್ ಲೇಖನವನ್ನು ಗಮನಿಸೋಣ. ಆದರೆ, ಇದಕ್ಕೆ 5 ವರ್ಷಗಳಷ್ಟು ಮುಂಚೆಯೇ, 1927ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಲಿತ-ಮಹಿಳಾ-ಮಾನವತೆಯ ವಿರೋಧಿ ಗ್ರಂಥ ಎಂದು ಸುಟ್ಟುಹಾಕಿದ್ದರು ಎಂಬುದನ್ನು ನೆನಪಿನಲ್ಲಿಡೋಣ. ಹಾಗೆಯೇ ಅಸ್ಪೃಶ್ಯತೆಯ ಮೂಲ ಹಿಂದೂ ಧರ್ಮದಲ್ಲಿದೆಯೆಂದೂ, ಅದರ ಸಾರ ಮನುಸ್ಮೃತಿಯಲ್ಲಿದೆಯೆಂದೂ ಹಾಲಿ ಇರುವ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯು ನಿಂತಿರುವುದೇ ಮನುಸ್ಮೃತಿಯ ನಿರ್ದೇಶನ ಹಾಗೂ ಪ್ರೇರಣೆಗಳಿಂದ ಎಂದೂ ಸ್ಪಷ್ಟಪಡಿಸಿದ್ದರು. ಇಂತಹ ಮನುಸ್ಮೃತಿಯ ಬಗ್ಗೆ ಸಾವರ್ಕರ್ ಅವರು ತಮ್ಮ ಕಿರ್ಲೋಸ್ಕರ್ ಲೇಖನದಲ್ಲಿ ಹೀಗೆ ಬರೆಯುತ್ತಾರೆ:

''ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮೃತಿ. ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರಪ್ರಾಯವಾದ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮತಿಯನ್ನೇ ಅನುಸರಿಸುತ್ತದೆ. ಇಂದು ಮನುಸ್ಮೃತಿಯೇ ಹಿಂದೂ ಕಾನೂನು ಕೂಡಾ ಆಗಿದೆ. ಹಾಗೂ ಇದು ಹಿಂದೂ ದೇಶವಾಗಿದೆ'' ಎಂದು ಘೋಷಿಸುತ್ತಾರೆ. (VD Savarkar,‘Women in Manusmriti’ in Savarkar Samagar (collection of Savarkar’s writings in Hindi), Prabhat, Delhi, vol. 4, p. 415 ಶಂಸುಲ್ ಇಸ್ಲಾಮ್ ಅವರ ಮಿಥ್ಸ್ ಆ್ಯಂಡ್ ಫ್ಯಾಕ್ಟ್ಸ್ ಪುಸ್ತಕದಲ್ಲಿ ಉಲ್ಲೇಖ)

ಆದರೆ ಮನುಸ್ಮೃತಿಯ ಕಾನೂನುಗಳು ಮತ್ತು ಸೂತ್ರಗಳು ಎಷ್ಟು ಮಹಿಳಾ ವಿರೋಧಿ ಮತ್ತು ಅಸ್ಪೃಶ್ಯ ವಿರೋಧಿ ಇದೆ ಎಂಬುದನ್ನು ಆ ವೇಳೆಗಾಗಲೇ ಫುಲೆ-ಅಂಬೇಡ್ಕರ್ ಹಾಗೂ ಇನ್ನಿತರ ಬಹುಜನ ಚಿಂತಕರು ಬಯಲು ಮಾಡಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಮನುಸ್ಮತಿಯ ಬಗ್ಗೆ ಎದ್ದಿರುವ ಪ್ರಶ್ನೆಯನ್ನು ಸಾವರ್ಕರ್ ಅವರು ಜಾಣತನದಿಂದ ಬಗೆಹರಿಸುತ್ತಲೇ ಮನುಸ್ಮೃತಿಯ ಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಅವರ ಪ್ರಕಾರ:

''..ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಯಾವೆಲ್ಲ ವಿಷಯಗಳು ಮನುಸ್ಮತಿಯಲ್ಲಿ ಪ್ರತಿಗಾಮಿ ಎಂದು ಕಂಡುಬರುವುದೋ ಅವುಗಳನ್ನು ಕೈಬಿಡಬೇಕು ಎನ್ನುವುದು ಸರಿ. ಆದರೆ ಅಷ್ಟು ಮಾತ್ರಕ್ಕೆ ಮನುಸ್ಮತಿ ಅಪಾಯಕಾರಿಯೋ ಅಥವಾ ಕಾಲಬಾಹಿರವೋ ಆಗಿಬಿಡುವುದಿಲ್ಲ. ಬ್ಯಾಬಿಲೋನಿಯಾ, ಈಜಿಪ್ಟ್, ಹೀಬ್ರು, ಗ್ರೀಸ್ ಮತ್ತು ರೋಮನ್ ಸಮಾಜಗಳ ಸಾಮಾಜಿಕ ಸೂತ್ರಗಳಿಗೆ ಹೋಲಿಸಿದಲ್ಲಿ ಮನುಸ್ಮೃತಿ ಅವೆಲ್ಲಕ್ಕಿಂತ ಎತ್ತರದಲ್ಲಿ ನಿಲ್ಲುತ್ತದೆ. ಅದಕ್ಕಾಗಿ ನಾವು ಅದಕ್ಕೆ ಸಕಲ ಗೌರವಗಳನ್ನೂ ಸಲ್ಲಿಸಬೇಕು'' ಎಂದು ಮನುಸ್ಮೃತಿಯನ್ನು ಸುಟ್ಟ ಅಂಬೇಡ್ಕರ್ ಅವರಿಗೆ ನೇರವಾಗಿ ಸವಾಲು ಹಾಕುತ್ತಾರೆ. ಇತರ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಮನುಸ್ಮೃತಿ ಶ್ರೇಷ್ಠವೆಂಬುದು ಸಾವರ್ಕರ್ ಅವರ ವಾದವಾದರೆ, 1950ರಲ್ಲಿ ಮನುಸ್ಮತಿಯನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ಪುರಾತನ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಉನ್ನತವಾದ ಮೌಲ್ಯವನ್ನು ಪ್ರತಿಪಾದಿಸುವ ಅಂಬೇಡ್ಕರ್ ನೇತೃತ್ವದಲ್ಲಿ ತಯಾರಾದ 'ಭಾರತದ ಸಂವಿಧಾನ'ದ ಬಗ್ಗೆ ಸಾವರ್ಕರ್ ಮತ್ತು ಆರೆಸ್ಸೆಸ್ಸಿನ ನಿಲುವು ಏನಾಗಿತ್ತು? 1949ರ ನವೆಂಬರ್ 26ರಂದು ಸಂವಿಧಾನ ಬರಹ ಮುಗಿದು ನಾಡಿಗೆ ಅರ್ಪಣೆಯಾದ ಕೇವಲ ನಾಲ್ಕು ದಿನಗಳ ನಂತರ 1949ರ ನವೆಂಬರ್ 30ರಂದು ಆರೆಸ್ಸೆಸ್‌ನ ಮುಖಪತ್ರಿಕೆಯಾದ 'ಆರ್ಗನೈಸರ್' ನಲ್ಲಿ ಸಂವಿಧಾನವನ್ನು ಹೀಗೆಳೆಯುತ್ತಾ ಹೀಗೆ ಬರೆದುಕೊಳ್ಳುತ್ತಾರೆ:

''ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ'' ಎಂದು ಟೀಕಿಸುತ್ತಾರೆ.. ಗೋಳ್ವಾಲ್ಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅವರ ಜಾತಿ ವಿನಾಶ ಯೋಜನೆಯ ವಿರುದ್ಧ ಹೀಗೆ ಕಿಡಿ ಕಾರುತ್ತಾರೆ:

''ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ..ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ (The Organiser, 26 January 1962.)

ಅದಕ್ಕೆ ಈ ಸಂಘಪರಿವಾರದ ಈ ಕುಲಪುರೋಹಿತರು ಇನ್ನೂ ಚಿತ್ರವಿಚಿತ್ರವಾದ ಆದರೆ ಅಪಾಯಕಾರಿಯಾದ ವಾದಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ :
''ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಷ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಅಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದಿಲ್ಲಿ ಪ್ರಾಂತಗಳು ಪ್ರಧಾನವಾಗಿ ಹಿಂದೂವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು''
(RSS and Democracy (Delhi: Sampradayikta Virodhi Committee, nd): - ಆನಂದ್ ತೇಲ್ತುಂಬ್ಡೆ ಯವರು ಸಂಪಾದಿಸಿರುವ Hindutva and Dalits ಗ್ರಂಥದಲ್ಲಿ ಉಲ್ಲೇಖಿತ)

ಸ್ವಧರ್ಮದಲ್ಲೇ ಸಾಯಬೇಕಾದ ಕರ್ಮಯೋಗಿಗಳು
ಆರೆಸ್ಸೆಸ್‌ನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ:

''ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರು ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ..'' ಇದನ್ನು ಮುಂದುವರಿಸಿಯೇ ಮೋದಿಯವರು ಚರಂಡಿ ಸ್ವಚ್ಚ ಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಬೊಗಳೆಯಾಡಿದ್ದು. (upadhya, P. Bhishikar, Pandit Deendayal Upadhyaya: Ideology and Perception—Concept of the Rashtra, vol. 5)

ಬುದ್ಧನೊಬ್ಬ ದೇಶದ್ರೋಹಿ-ಸಾವರ್ಕರ್

ಹೀಗೆ ಈ ಬ್ರಾಹ್ಮಣಶಾಹಿ ತಿಳುವಳಿಕೆ ಆರೆಸ್ಸೆಸ್ ಮತ್ತು ಸಾವರ್ಕರ್ ಅನುಯಾಯಿಗಳ ಕಣಕಣದಲ್ಲೂ ಹರಿಯುತ್ತದೆ. ಅದಕ್ಕೆ ಸಾವರ್ಕರ್ ಮತ್ತು ಆರೆಸ್ಸೆಸ್‌ನ ಎಲ್ಲಾ ನಾಯಕರಿಗೆ ಸಮಾನತೆಯನ್ನು ಬೋಧಿಸಿದ ಬುದ್ಧನನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಸಾವರ್ಕರ್ ಅವರಂತೂ ತಮ್ಮ 'SixGolrious Epochs Of Indian History' ಎಂಬ ತಮ್ಮ ಕೊನೆಯ ಪುಸ್ತಕದಲ್ಲಿ ಬುದ್ಧ ಹಾಗೂ ಬೌದ್ಧ ಧರ್ಮ ಈ ದೇಶದ ಪ್ರಥಮ ದೇಶದ್ರೋಹಿ ಧರ್ಮ ಮತ್ತು ವ್ಯಕ್ತಿ ಎಂದು ಕನಿಷ್ಠ 28 ಸಾರಿ ಹೀಗೆಳೆಯುತ್ತಾರೆ. ಅಷ್ಟು ಮಾತ್ರವಲ್ಲ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ 'ಪ್ರಬುದ್ಧ ಭಾರತ್' ಪತ್ರಿಕೆಯಲ್ಲಿ ಸಾವರ್ಕರ್ ಅವರ 'ವೀರ' ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ. (https://thewire.in/politics/rss-ambedkar-camaraderie-fictional-narratives)

ಹಾಗಿದ್ದರೂ ಸಾವರ್ಕರ್ ಅವರನ್ನು ಅತ್ಯಂತ ದೊಡ್ದ ದಲಿತೋದ್ಧಾರಕ ಎಂದು ಸ್ಥಾಪಿಸಲು ಮೋದಿ ಮತ್ತು ಆರೆಸ್ಸೆಸಿಗರು ಹೇಗೆ ಹಿಂದೂ ಐಕ್ಯ ಸಾಧಿಸಲು ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಪಟ್ಟರು ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಾರೆ. ಆದರೆ ಸಾವರ್ಕರ್ ಅವರಾಗಲೀ, ಹೆಡಗೆವಾರ್ ಅವರಾಗಲೀ ಮೇಲ್ಜಾತಿಯವರ ಇಷ್ಟಕ್ಕೆ ವಿರುದ್ಧವಾಗಿ ಯಾವುದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ಕೊಟ್ಟಿರುತ್ತಾರೆ. ಉದಾಹರಣೆಗೆ 1939ರ ಹಿಂದೂ ಮಹಾಸಭಾ ಸಮ್ಮೇಳನದಲ್ಲಿ ತಮ್ಮ ಸಂಘವು ಅಸ್ಪೃಶ್ಯರಿಗೆ ದೇವಸ್ಥಾನಗಳಿಗೆ ಪ್ರವೇಶ ಕಡ್ಡಾಯ ಮಾಡುವ ಯಾವುದೇ ಮಸೂದೆಯನ್ನು ತಾವು ಶಾಸನ ಸಭೆಗಳಲ್ಲಿ ಮಂಡಿಸುವುದಿಲ್ಲವೆಂದು ಭರವಸೆ ನೀಡಿರುತ್ತಾರೆ. 1941ರಲ್ಲೂ ಮತ್ತೊಮ್ಮೆ ಇದೇ ಭರವಸೆಯನ್ನು ಸಾವರ್ಕರ್ ಕೊಡುತ್ತಾರೆ. ಹಾಗಿದ್ದಲ್ಲಿ ಸಾವರ್ಕರ್ ಮತ್ತು ನಂತರದ ಹಾಗೂ ಈಗಿನ ನಾಯಕರು ದಲಿತರ ಬಗ್ಗೆ ಕಾಳಜಿಯ ಮಾತಾಡುವುದೇಕೆ?

ಸಂಚುಕೋರ ಬ್ರಾಹ್ಮಣ್ಯದ ಸಪ್ತ ವಂಚಕ ಸೂತ್ರಗಳು

ಇದಕ್ಕೆ 1937ರಲ್ಲಿ ಸಾವರ್ಕರ್ ಅವರೇ ಉತ್ತರವನ್ನು ಕೊಡುತ್ತಾರೆ. ಅವರ ಪ್ರಕಾರ ಮುಸ್ಲಿಮ್ ಸವಾಲನ್ನು ನಿವಾರಿಸಿಕೊಳ್ಳಲು ಹಿಂದೂ ಐಕ್ಯತೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಅದಕ್ಕಾಗಿ ಹಿಂದೂ ಧರ್ಮದ ದೊಡ್ಡ ಸಂಖ್ಯೆಯ ದಲಿತರು ಹಿಂದೂ ಧರ್ಮದಲ್ಲೇ ಉಳಿಯುವುದು ಅತಿ ಮುಖ್ಯ. ಆದರೆ ಅದಕ್ಕಾಗಿ ಹಿಂದೂ ಧರ್ಮದ ಅಡಿಪಾಯವಾದ ಮನುಸ್ಮೃತಿ ಆಧಾರಿತ ಜಾತಿ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯನ್ನೂ ತರದೆ, ದಲಿತರನ್ನು ಸಮಾನವಾಗಿಯೂ ಕಾಣದೆ ಚಾತುರ್ವರ್ಣದ ಚೌಕಟ್ಟಿನಲ್ಲಿ ಒಳಪಟ್ಟೇ ಅವರನ್ನು ಒಳಗೊಳ್ಳಬೇಕು. ಅದಕ್ಕೆ ಆಧುನಿಕ ಚುನಾವಣಾ ರಾಜಕೀಯ ಉತ್ತಮವಾದ ಅವಕಾಶಗಳನ್ನು ಒದಗಿಸುತ್ತದೆ ಹಾಗೂ ಮುಸ್ಲಿಮರ ಮೇಲಿನ ಸಮರಕ್ಕೂ ಕ್ಷಾತ್ರವನ್ನು ಮತ್ತು ನಿಷ್ಠೆಯನ್ನು ತುಂಬಿಕೊಂಡಿರುವ ದಲಿತ-ಶೂದ್ರ ಯುವಕರು ಬೇಕು. ಅವರಿಲ್ಲದೆ ಈ ಸಮರವನ್ನು ಗೆಲ್ಲಲಾಗದು ಎಂದು ಮೂಂಜೆ 1935ರಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ಆದ್ದರಿಂದಲೇ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ನಿವಾರಿಸಿಕೊಳ್ಳಬೇಕಾದ ಏಳು ತೊಡಕುಗಳೆಂದು ಸಾವರ್ಕರ್ ಹೇಳುವ ವಿಷಯಗಳನ್ನು ಈ ಹಿನ್ನೆಲೆಯಲ್ಲೇ ನೋಡಬೇಕು. ಸಾವರ್ಕರ್ ಪ್ರಕಾರ 1. ವೇದೋಚ್ಚಾರಕ್ಕೆ ನಿರ್ಬಂಧ, 2. ಕೆಲವು ವೃತ್ತಿಗಳಿಗೆ ನಿಷೇಧ, 3. ಅಸ್ಪಶ್ಯತೆ, 4. ಸಮುದ್ರೋಲ್ಲಂಘನಕ್ಕೆ ನಿಷೆೇಧ, 5. ಹಿಂದೂ ಧರ್ಮಕ್ಕೆ ಮರುಮತಾಂತರದ ನಿಷೇಧ, 6. ಸಹಭೋಜನ ನಿಷೆೇಧ 7. ಅಂತರ್ಜಾತಿ ಮದುವೆ ನಿಷೇಧ.. ಇವುಗಳು ಹಿಂದೂ ಐಕ್ಯತೆಗೆ ಅಡ್ಡಿ. ಆದರೆ ಇವು ಯಾವುವೂ ಅಸ್ಪಶ್ಯತೆಯನ್ನಾಗಲೀ, ಜಾತಿ ವ್ಯವಸ್ಥೆಯನ್ನಾಗಲೀ, ಬ್ರಾಹ್ಮಣಶಾಹಿಯನ್ನಾಗಲೀ ಕಿಂಚಿತ್ತೂ ಕದಲಿಸಲಾರವು ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.

ಇವು ದಮನಿತ ಸಮುದಾಯಗಳಿಗೆ ತಾವೂ ಕೂಡ ಹಿಂದೂ ಎಂಬ ಹುಸಿ ಭಾವವನ್ನು ಹುಟ್ಟಿಸಿ ಬ್ರಾಹ್ಮಣಶಾಹಿಯ ಕಾಲಾಳುಗಳನ್ನಾಗಿ ಮಾಡಿಕೊಳ್ಳಲಾದ ರೂಪಿಸಲಾದ ಸಂಚುಕೋರ ಬ್ರಾಹ್ಮಣ್ಯದ ಸಪ್ತ ವಂಚಕ ಸೂತ್ರಗಳು. ಆದ್ದರಿಂದಲೇ ಅಲ್ಲವೇ ಅಂಬೇಡ್ಕರ್ ಅವರು 1951ರಲ್ಲಿ ಆರ್‌ಪಿಐನ ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವಾಗ ತಮ್ಮ ಪಕ್ಷ ಯಾವ ಕಾರಣಕ್ಕೂ ಅತ್ಯಂತ ಪ್ರತಿಗಾಮಿ ಪಕ್ಷವಾದ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಜೊತೆಗೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದು. (ಅಂಬೇಡ್ಕರ್ ಅವರು ಕಮ್ಯುನಿಸ್ಟರೊಂದಿಗೂ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅದೇ ಸಮಯದಲ್ಲಿ ಘೋಷಿಸಿದ್ದರು. ಆದರೆ ಅದು ಮತ್ತೊಂದು ಪ್ರತ್ಯೇಕ ಲೇಖನಕ್ಕೆ ವಸ್ತುವಾಗಬೇಕಾದ ಬ್ರಾಹ್ಮಣಶಾಹಿಯ ದಿಗ್ವಿಜಯದ ಕಾರಣಗಳ ಮತ್ತೊಂದು ಕಥನ)

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News