ಪಡುಬಿದ್ರೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಶಶಾಂಕ್ ಸಾಲ್ಯಾನ್ ಕಲಾಕೃತಿ ಸೇರ್ಪಡೆ
ಪಡುಬಿದ್ರೆ: ಆನೆಯ ಕಲಾಕೃತಿಯನ್ನು 13,940 ಮೊಳೆಗಳನ್ನು ಬಳಸಿ ಒಂಬತ್ತು ಗಂಟೆಗಳಲ್ಲಿ ರಚಿಸಿದ ಕಾಪುವಿನ ಪ್ರತಿಭೆ ಶಶಾಂಕ್ ಎಸ್. ಸಾಲ್ಯಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ.
ಗುರುವಾರ ಕಾಪುವಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಾಂಕ್, ಶಾಲಾ ದಿನಗಳಲ್ಲಿಯೇ ಕಲಾಕೃತಿ ರಚನೆ ಹವ್ಯಾಸವನ್ನು ಬೆಳೆಸಿಕೊಂಡಿದ್ದ ನಾನು, ಆವೆ ಮಣ್ಣಿನ ಕಲಾಕೃತಿ, ಪೇಂಟಿಂಗ್, ವಾಟರ್ ಕಲರ್, ಆಕ್ರಾಲಿಕ್ ಹೀಗೆ ವಿಭಿನ್ನ ಕಲಾ ಪ್ರಕಾರಗಳಲ್ಲಿ ಕಲಾಕೃತಿ ರಚನೆಯಲ್ಲಿ ತೊಡಗಿದ್ದೆ.
ಆನೆಯ ಕಲಾಕೃತಿ ರಚಿಸುವ ಬಗ್ಗೆ ಚಿಂತಿಸಿ 2000 ಮೊಳೆ ಬಳಸಿ ಸಣ್ಣ ಗಾತ್ರ ಕಲಾಕೃತಿ ರಚಿಸುವ ಯೋಜನೆ ಹಾಕಿಕೊಂಡಿದ್ದೆ. ಆದರೆ ಕಲಾಕೃತಿಗೆ ಅರ್ಧ ಇಂಚಿನ 13,940 ಮೊಳೆಗಳನ್ನು ಬಳಸಿಕೊಳ್ಳಲಾಗಿದೆ. 5x4 ಫ್ರೇಮ್ ಶೀಟ್ನಲ್ಲಿ ಒಂಬತ್ತು ಗಂಟೆಗಳಲ್ಲಿ 4x3.8 ಗಾತ್ರದ ಆನೆಯ ಕಲಾಕೃತಿ ರಚಿಸಲಾಗಿದೆ. ಕೇವಲ ಮೊಳೆಗಳನ್ನು ಬಳಸಿಕೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಕಲಾಕೃತಿ ಮಾಡಿರುವ ದಾಖಲೆ ಇಲ್ಲದಿರುವುದನ್ನು ತಿಳಿದುಕೊಂಡಿದ್ದೆ. ಮೊದಲಾಗಿ ಬ್ರಶ್ ಮತ್ತು ಬಣ್ಣಗಳನ್ನು ಉಪಯೋಗಿಸದೇ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕವಾಗಿ ಸಲ್ಲಿಸಿದ್ದು, ಅದನ್ನು ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ದಾಖಲೆ ಸಂದೇಶ ರವಾನಿಸಿದೆ. ವಾರದೊಳಗೆ ದಾಖಲೆ ಪ್ರಮಾಣ ಪತ್ರ ರವಾನಿಸುವುದಾಗಿಯೂ ತಿಳಿಸಿದೆ ಎಂದರು.
ತಂದೆ-ತಾಯಿ ಪ್ರೋತ್ಸಾಹ, ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ ಮತ್ತು ಜೋಸ್ವಿನ್ ಸಹಕಾರದಿಂದ ಬೃಹತ್ ಗಾತ್ರದ ಕಲಾಕೃತಿ ಮಾಡಲು ಮುಂದಾದೆ. ಕಲಾಕೃತಿ ರಚಿಸಲು ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿ ಇನ್ನಷ್ಟು ಉತ್ತೇಜಿಸಿದರು.
ಕಲಾ ಪ್ರೋತ್ಸಾಹಕ ಗುರುಚರಣ್ ಪೊಲಿಪು ಮಾತನಾಡಿ, ಕೇರಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆಯ ಸಾವಿಗೆ ಮರುಕ ಪಟ್ಟು ಮೊಳೆಗಳ ಜೋಡಣೆಯೊಂದಿಗೆ ಆನೆಯ ಕಲಾಕೃತಿ ರಚಿಸಿದ್ದಾರೆ. ಇದೊಂದು ಅಪೂರ್ವ ಸಾಧನೆಯಾಗಿದ್ದು, ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವುದು ಕಾಪುವಿನ ಜನತೆಗೆ ಹೆಮ್ಮೆಯನ್ನುಂಟು ಮಾಡಿದೆ. ಚಿತ್ರವನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದರು.