ಡಿಸೆಂಬರ್ ತಿಂಗಳೊಳಗೆ ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ: ಸಿ.ಎಸ್. ಷಡಾಕ್ಷರಿ

Update: 2022-06-26 12:28 GMT

ಉಡುಪಿ : ಡಿಸೆಂಬರ್ ತಿಂಗಳೊಳಗೆ ರಾಜ್ಯದ ಸರಕಾರಿ ನೌಕರರ ಬಹುನಿರೀಕ್ಷಿತ ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸುವಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬದ್ಧವಾಗಿದೆ ಎಂದು  ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಭರವಸೆ ನೀಡಿದ್ದಾರೆ.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಮಾವೇಶ ಮತ್ತು ಸೇವಾ ನಿವೃತ್ತಿ ಗೊಳ್ಳುತ್ತಿರುವ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸರಕಾರಿ ನೌಕರರ ೭ನೇ ವೇತನ ಆಯೋಗದ ರಚನೆ ಕುರಿತಂತೆ ಒಂದು ತಿಂಗಳೊಳಗೆ ಸಮಿತಿ ರಚನೆಯಾ ಗಲಿದ್ದು, ಇದೇ ಡಿಸೆಂಬರ್ ಒಳಗೆ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡುವಂತೆ ಸರಕಾರದ ಮೇಲೆ ಈಗಾಗಲೇ ಒತ್ತಡ ಹಾಕಲಾಗಿದೆ. ಡಿ ದರ್ಜೆ ನೌಕರರಿಗೆ ೧೦೦೦೦ರೂ., ಸಿ ದರ್ಜೆ ನೌಕರರರಿಗೆ ೨೦೦೦೦ರೂ., ಬಿ ದರ್ಜೆ ಅಧಿಕಾರಿಗಳಿಗೆ ೩೦೦೦೦ರೂ. ಹಾಗೂ ಎ ದರ್ಜೆ ಅಧಿಕಾರಿಗಳಿಗೆ ಕನಿಷ್ಠ ೪೦೦೦೦ರೂ. ವರೆಗೆ ವೇತನ ಹೆಚ್ಚಳವಾಗಲಿದೆ ಎಂದರು.

ರಾಜ್ಯದ ಸರಕಾರಿ ನೌಕರರಿಗೆ ನಗದು ರಹಿತ ಶೇ.100 ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಯೋಜನೆ ಕೂಡ ಶೀಘ್ರದಲ್ಲಿ ಜಾರಿಯಾಗಲಿದೆ. ಈ ಕುರಿತಂತೆ ಅಂತಿಮ ಸಭೆ ನಡೆಯಲಿದ್ದು,  ಈ ಯೋಜನೆಯ ಮೂಲಕ  ನೌಕರರು ಮತ್ತು ಅವರ ಅವಲಂಬಿತರು ಯಾವುದೇ ಕಾಯಿಲೆಗಳಿಗೆ ಒಂದು ಲಕ್ಷದಿಂದ ಒಂದು ಕೋಟಿ ರೂ.ವರೆಗೆ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯ ವಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ರಾಜ್ಯದ ೬ ಲಕ್ಷ ನೌಕರರ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಇವುಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಯಾವುದೇ ಪ್ರತಿಭಟನೆ, ಮುಷ್ಕರಗಳಿಲ್ಲದೇ  ಮನವಿ ನೀಡುವ ಮೂಲಕ  ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಸರಕಾರಿ ನೌಕರರ ಸೇವಾವಹಿ ಗಳನ್ನು ಆನ್‌ಲೈನ್ ಮಾಡಲಾಗುತ್ತಿದ್ದು, ಎಚ್‌ಆರ್ ಎಂಎಸ್, ಮಹಾಲೇಖಪಾಲರ ಕಚೇರಿ ಮತ್ತು ಖಜಾನೆ ಗಳನ್ನು ಪರಸ್ಪರ ಜೋಡಣೆ ಮಾಡುವ ಮೂಲಕ ನಿವೃತ್ತಿ ನೌಕರರು ನಿವೃತ್ತಿ ದಿನವೇ ಪಿಂಚಣಿ ಪಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ಸಂಘವು ನೌಕರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಿರಂತರ ತರಬೇತಿ ಕಾರ್ಯಕ್ರಮ ನಡೆಸುವ ಕುರಿತು ಯೋಜನೆ ರೂಪಿಸಬೇಕು. ತಮ್ಮ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮದ್ಯ ವ್ಯಸನಿ ನೌಕರರನ್ನು ಅದರಿಂದ ಹೊರ ತರಲು ಯೋಜನೆ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಆಶಯ ನುಡಿ ಮಾಡಿದರು. ಸುಬ್ರಹ್ಮಣ್ಯ ಶೇರಿಗಾರ್ ಹಾಗೂ ಅವರ ಪತ್ನಿ ಸಜನಿ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿವಿಧ ಪದಾಧಿಕಾರಿಗಳಾದ ವೆಂಕಟೇಶಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ರುದ್ರಪ್ಪ, ಬಸವರಾಜು, ರವಿ, ಮೋಹನ್ ಕುಮಾರ್, ಹರ್ಷ, ಸತೀಶ್ ಸಿದ್ದರಾಮಣ್ಣ, ದ.ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕೃಷ್ಣ, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಜಿಲ್ಲಾ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರೀಪ ಮರೋಣ, ಕಾರ್ಕಳ ತಾಲೂಕು ಅಧ್ಯಕ್ಷ ಬಾಲಕೃಷ್ಣ, ಹೆಬ್ರಿ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ, ಕಾಪು ಅಧ್ಯಕ್ಷ ನಾಗೇಶ್ ಬಿಲ್ಲವ ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯ ಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಗಣಪತಿ ಹೋಬಳಿದಾರ್ ವಂದಿಸಿದರು.

ಹಳೆ ಪಿಂಚಣಿ ವ್ಯವಸ್ಥೆ: ಸಿಎಂ ಜೊತೆ ಚರ್ಚೆ

ಕೆಜಿಐಡಿಯನ್ನು ಆನ್‌ಲೈನ್ ಮಾಡಲಾಗಿದ್ದು, ಅರ್ಜಿ ಸಲ್ಲಿಸಿದ ೭ ದಿನಗಳ ಒಳಗೆ ಸಾಲದ ಮೊತ್ತದ ಬ್ಯಾಂಕ್ ಖಾತೆಗೆ ಜಮೆ ಆಗುವ ಯೋಜನೆ ೧ ತಿಂಗಳೊಳಗೆ ಜಾರಿಗೆ ತರುವ ಚಿಂತನೆ ಇದೆ. ೨೦೧೯ರಿಂದ ಬಾಕಿ ಇರುವ ಕೆಜಿಐಡಿ ಬೋನಸ್ ಮೊತ್ತ ೪೮೮ ಕೋಟಿ ರೂ. ಒಂದು ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.

ಎನ್‌ಪಿಎಸ್ ಬದಲು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಕುರಿತಂತೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ರಾಜ್ಯದ ಸರಕಾರಿ ನೌಕರರ ಹಿತ ಕಾಪಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳ ಎಲ್ಲಾ ನೌಕರರ ಸಮಸ್ಯೆಗಳ ಕುರಿತು ಸಂಘದ ವತಿಯಿಂದ ಸರಕಾರದೊಂದಿಗೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News