ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಬಹುಮತ ಕಳೆದುಕೊಂಡಿದೆ: ಸುಪ್ರೀಂಕೋರ್ಟ್ ಗೆ ತಿಳಿಸಿದ ಶಿಂಧೆ ಬಣ
Update: 2022-06-27 08:20 GMT
ಹೊಸದಿಲ್ಲಿ: ಶಿವಸೇನೆಯ 55 ಶಾಸಕರ ಪೈಕಿ 38 ಶಾಸಕರು ಮೈತ್ರಿಕೂಟಕ್ಕೆ ಬೆಂಬಲ ಹಿಂಪಡೆದಿರುವುದರಿಂದ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಸದನದಲ್ಲಿ ಬಹುಮತವನ್ನು ಕಳೆದುಕೊಂಡಿದೆ ಎಂದು ಬಂಡಾಯ ಎದ್ದಿರುವ ಶಾಸಕರ ನಾಯಕನಾಗಿರುವ ಏಕನಾಥ್ ಶಿಂಧೆ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ವಿಚಾರಣೆಗೆ ಕೆಲವೇ ಕ್ಷಣಗಳ ಮೊದಲು ಶಿಂಧೆ ಬಣವು ಸುಪ್ರೀಂ ಕೋರ್ಟ್ಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದು, ಬಂಡಾಯ ಶಾಸಕರ ಜೀವಕ್ಕೆ ಶಿವಸೇನೆ ಕಾರ್ಯಕರ್ತರಿಂದ ಗಂಭೀರ ಬೆದರಿಕೆ ಇದೆ ಎಂದು ಹೊಸ ಅರ್ಜಿಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ಎಂವಿಎ ಸರಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣವನ್ನು ಕಳೆದುಕೊಂಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿಯಲ್ಲಿ ಶಿವಸೇನೆ ವಕ್ತಾರ ಸಂಜಯ್ ರಾವತ್ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.