ದ್ರೋಹಿಗಳೆಂದಿಗೂ ಗೆಲ್ಲುವುದಿಲ್ಲ, ಒಂದಲ್ಲ ಒಂದು ದಿನ ನಮ್ಮೆದುರು ಬರುತ್ತಾರೆ: ಆದಿತ್ಯ ಠಾಕ್ರೆ

Update: 2022-06-27 15:03 GMT
Photo: Twitter/@AUThackeray

ಮುಂಬೈ,ಜೂ.27: ತನ್ನೆದುರು ಬರುವಂತೆ ಮತ್ತು ಸರಕಾರದ ತಪ್ಪನ್ನು ತನಗೆ ತಿಳಿಸುವಂತೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯವರು ಬಂಡುಕೋರ ಶಿವಸೇನೆ ನಾಯಕರಿಗೆ ಸವಾಲೊಡ್ಡಿದ್ದಾರೆ.

ತನ್ನ ವಿಧಾನಸಭಾ ಕ್ಷೇತ್ರ ವರ್ಲಿಯಲ್ಲಿ ಸೋಮವಾರ ಸರಕಾರದ ವಸತಿ ಯೋಜನೆಯ ಫಲಾನುಭವಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಂದೆ ಪಾಳಯವನ್ನು ಬಂಡುಕೋರರಲ್ಲ,ದ್ರೋಹಿಗಳು ಎಂದು ಬಣ್ಣಿಸಿದರು. ‘ವಂಚಿಸುವವರು ಎಂದಿಗೂ ಗೆಲ್ಲುವುದಿಲ್ಲ. ನಾವು ಆತ್ಮವಿಶ್ವಾಸವನ್ನು ಹೊಂದಿದ್ದೇವೆ ಮತ್ತು ಬಹಳಷ್ಟು ಪ್ರೀತಿಯನ್ನು ಪಡೆಯುತ್ತಿದ್ದೇವೆ ’ಎಂದರು.

ಗುವಾಹಟಿಯಲ್ಲಿ ಶಿಂದೆ ಪಾಳಯವನ್ನು ಸೇರಿಕೊಂಡಿರುವ ಸಚಿವ ಉದಯ ಸಾಮಂತ್ ಕುರಿತು ನಿರ್ದಿಷ್ಟ ಪ್ರಶ್ನೆಗೆ,‘ಅದು ಅವರ ನಿರ್ಧಾರವಾಗಿದೆ. ಆದರೆ ಅವರು ಒಂದಲ್ಲ ಒಂದು ದಿನ ನಮ್ಮೆದುರು ಬರುತ್ತಾರೆ. ಒಂದಲ್ಲ ಒಂದು ದಿನ ಅವರು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗುತ್ತದೆ ’ಎಂದು ಠಾಕ್ರೆ ಉತ್ತರಿಸಿದರು.

ಇಲ್ಲಿಂದ ಓಡಿ ಹೋಗಿ ತಮ್ಮನ್ನು ಬಂಡುಕೋರರು ಎಂದು ಕರೆದುಕೊಳ್ಳುತ್ತಿರುವವರು ಬಂಡೇಳಲು ಬಯಸಿದ್ದರೆ ಆ ಕೆಲಸವನ್ನು ಇಲ್ಲಿಯೇ ಮಾಡಬೇಕಿತ್ತು. ಅವರು ರಾಜೀನಾಮೆ ನೀಡಿ ಚುನಾವಣೆಗಳಿಗೆ ಸ್ಪರ್ಧಿಸಬೇಕಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News