ಅವರಿಗೆ ಮಹಾರಾಷ್ಟ್ರದಲ್ಲಿ ಕೆಲಸವಿಲ್ಲ, ಗುವಹಾಟಿಯಲ್ಲಿಯೇ ವಿಶ್ರಾಂತಿ ಪಡೆಯಲಿ: ಬಂಡಾಯ ಶಾಸಕರ ಬಗ್ಗೆ ರಾವುತ್ ವ್ಯಂಗ್ಯ

Update: 2022-06-28 09:36 GMT
ಸಂಜಯ್ ರಾವುತ್

ಮುಂಬೈ: ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿತ ಬಂಡಾಯ ಶಿವಸೇನೆ ಶಾಸಕರುಗಳ  ಅರ್ಜಿಯನ್ನು ಪರಿಗಣಿಸಿ  ಅವರಿಗೆ ಮಹಾರಾಷ್ಟ್ರ ಉಪಸ್ಪೀಕರ್ ಅವರು ನೀಡಿರುವ ಅನರ್ಹತೆ ನೋಟಿಸ್‍ಗೆ ಉತ್ತರಿಸಲು ಜುಲೈ 11ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವುತ್ "ಅದು ಅವರಿಗೆ ಅಲ್ಲಿ (ಗುವಹಾಟಿಯಲ್ಲ) ಜುಲೈ 11ರವರೆಗೆ ವಿಶ್ರಾಂತಿ ಪಡೆದುಕೊಳ್ಳುವ ಆದೇಶ. ಅವರಿಗೆ ಮಹಾರಾಷ್ಟ್ರದಲ್ಲಿ ಕೆಲಸವಿಲ್ಲ,''ಎಂದರು.

ಕೆಲ ಭಿನ್ನಮತೀಯ ಶಾಸಕರು ವಾಪಸ್ ಬಂದು ಉದ್ಧವ್ ಠಾಕ್ರೆಗೆ ತಮ್ಮ ಬೆಂಬಲ ಘೋಷಿಸುತ್ತಾರೆಂಬ ಆಶಾವಾದವಿದೆ ಎಂದೂ ಅವರು ಹೇಳಿದರು.

"ನಾವು ಬಂಡುಕೋರರು ಎಂದು  ಪರಿಗಣಿಸದೇ ಇರುವ ಇನ್ನೂ ಕೆಲವರು ಶಾಸಕರಿದ್ದಾರೆ. ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ, ಅವರ ಕುಟುಂಬಗಳೂ ನಮ್ಮೊಂದಿಗೆ ಸಂಪರ್ಕದಲ್ಲಿವೆ, ಅವರು ವಾಪಸಾಗುತ್ತಾರೆಂಬ ವಿಶ್ವಾಸವಿದೆ,'' ಎಂದು ರಾವುತ್ ಹೇಳಿದರು.

ಬಿಜೆಪಿ ಮತ್ತು ದೇವೇಂದ್ರ ಫಡ್ನವೀಸ್ ಈ  ಬಿಕ್ಕಟ್ಟಿನಲ್ಲಿ ತಲೆತೂರಿಸಬಾರದು ಎಂದು ರಾವುತ್ ಹೇಳಿದರು. "ಅವರು ಹಾಗೇನಾದರೂ ಮಾಡಿದರೆ ಅವರ ಪಕ್ಷ(ಬಿಜೆಪಿ), ಫಡ್ನವೀಸ್ ಮತ್ತು ಪ್ರಧಾನಿಯ ಹೆಸರುಗಳಿಗೆ ಕಳಂಕವುಂಟಾಗಲಿದೆ,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News