ಪೌರಕಾರ್ಮಿಕರ ಬವಣೆಗಳು

Update: 2022-06-30 18:42 GMT

ಡಾ. ಬಿ.ಆರ್. ಅಂಬೇಡ್ಕರ್‌ರವರು ‘‘ಜಾತಿ ಕೇವಲ ಕೆಲಸದ ಆಧಾರದ ಮೇಲೆ ಮಾಡಿದ ವಿಭಜನೆಯಲ್ಲ, ಅದು ಕಾರ್ಮಿಕರ ವಿಭಜನೆ’’ ಎಂದು ಸ್ಪಷ್ಟವಾಗಿ ಘೋಷಿಸಿದ್ದರು. ಬಹುಪಾಲು ಪೌರಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರು ಮತ್ತು ಈ ಕೆಲಸವನ್ನು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಂಡವರಲ್ಲ. ಆದರೆ ಅವರ ಹುಟ್ಟಿನಿಂದಲೇ, ಅಳಿಸಲಾಗದ ಜಾತಿಯ ಕಳಂಕದಿಂದಾಗಿ, ಭಾರತೀಯ ಜಾತಿ ವ್ಯವಸ್ಥೆಯ ದುಷ್ಟಶಕ್ತಿಯು ಪೌರಕಾರ್ಮಿಕರು ವಂಶ ಪಾರಂಪರ್ಯವಾಗಿ ಈ ವೃತ್ತಿಯನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳುವಂತೆ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣಮಾಡಿದೆ ಮತ್ತು ಬಲವಂತಪಡಿಸುತ್ತದೆ.



ಪೌರಕಾರ್ಮಿಕರಿಲ್ಲದ ನಗರ ಹೇಗಿರುತ್ತದೆಂದು ಒಮ್ಮೆ ಊಹಿಸಿಕೊಳ್ಳಿ, ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಮನೆಯ ಹೊರಗಿನ ಮೂಲೆ ಮೂಲೆಗಳಲ್ಲಿ, ಎಲ್ಲೆಂದರಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿ ಕಣ್ಮುಂದೆ ಇದ್ದರೆ ಸಮಾಜದ ಸ್ವಾಸ್ಥ ಏನಾಗುತ್ತದೆಂದು ಕಲ್ಪಿಸಿಕೊಳ್ಳಿ. ಊಹಿಸಿಕೊಳ್ಳುವುದು ಸಹ ಕಷ್ಟಸಾಧ್ಯ. ರಾಜ್ಯದಾದ್ಯಂತ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ 50,000ಕ್ಕೂ ಹೆಚ್ಚು ಪೌರಕಾರ್ಮಿಕರು ನಗರಗಳನ್ನು ಸ್ವಚ್ಛವಾಗಿಡುವುದಕ್ಕಾಗಿ, ಘನತ್ಯಾಜ್ಯಗಳನ್ನು ತೆರವುಗೊಳಿಸಲು ಪ್ರತಿದಿನ ಅವಿರತವಾಗಿ ಶ್ರಮಿಸುತ್ತಾರೆ. ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗವು ಲಕ್ಷಗಟ್ಟಲೆ ಜೀವಗಳನ್ನು ಬಲಿ ತೆಗೆದುಕೊಂಡಾಗ ಮತ್ತು ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಇರಬೇಕೆಂದು ಸರಕಾರ ಕಡ್ಡಾಯಗೊಳಿಸಿದಾಗಲೂ ಪೌರಕಾರ್ಮಿಕರು ತಮ್ಮ ಜೀವವನ್ನು ಲೆಕ್ಕಿಸದೆ ಆ ಸಂದರ್ಭದಲ್ಲಿ ಕೆಲಸ ಮಾಡಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಚಪ್ಪಾಳೆ ತಟ್ಟಿ ಪುಷ್ಪವೃಷ್ಟಿಯನ್ನೇ ಸುರಿಸಿದ್ದಾರೆ. ಸದ್ಯಕ್ಕೆ ಕೊರೋನದಂತಹ ಸಂದಿಗ್ಧ ಸಮಯ ಕಳೆದಿದೆ, ಆದರೆ ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್‌ನ ಸಮಯದಲ್ಲಿ ಹಾಗೂ ಅದಕ್ಕೂ ಮೊದಲು ಪೌರಕಾರ್ಮಿಕರು ಎದುರಿಸುತ್ತಿದ್ದಂತಹ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಅವುಗಳಲ್ಲಿ ಮುಖ್ಯವಾಗಿ ಉದ್ಯೋಗ, ವೇತನ ಮತ್ತು ಸಾಮಾಜಿಕ ಭದ್ರತೆಯ ಕೊರತೆ, ಅಮಾನವೀಯ ಕೆಲಸದ ಪರಿಸ್ಥಿತಿಗಳು ಮತ್ತು ಜೀವನ ನಿರ್ವಹಣೆಯಲ್ಲಿನ ಸಂದಿಗ್ಧ ಪರಿಸ್ಥಿತಿಗಳು ಈ ಕಾರ್ಮಿಕರನ್ನು ಸದಾ ಕಾಡುತ್ತಲೇ ಇವೆ.

ಈ ಸಂಕಷ್ಟಗಳಿಂದ ನೊಂದಿರುವ ಪೌರಕಾರ್ಮಿಕರ ಉತ್ತಮ ಜೀವನಕ್ಕಾಗಿ, ಕರ್ನಾಟಕದಾದ್ಯಂತ ಇರುವ ಪೌರಕಾರ್ಮಿಕರ ಅನೇಕ ಸಂಘಟನೆಗಳು 1ನೇ ಜುಲೈ 2022ರಿಂದ ಅನಿರ್ದಿಷ್ಟಾವಧಿಗೆ ಅಹೋರಾತ್ರಿ ಮುಷ್ಕರ ನಡೆಸಲು ತೀರ್ಮಾನಿಸಿವೆ. ಮತ್ತು ಪತ್ರಿಕಾಗೋಷ್ಠಿಯ ಮೂಲಕ ಘೋಷಿಸಿವೆ. ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವುದು ಈ ಮುಷ್ಕರದ ಪ್ರಮುಖ ಹಕ್ಕೊತ್ತಾಯವಾಗಿದೆ.

ಬಹುಪಾಲು ಪೌರಕಾರ್ಮಿಕರು ಗತಕಾಲದಿಂದ ಶೋಷಣೆಗೊಳಪಟ್ಟು ತುಳಿತಕ್ಕೊಳಗಾದ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಅದರಲ್ಲೂ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂಬ ಅಂಶಗಳನ್ನು ಬಹುಮುಖ್ಯವಾಗಿ ಗಮನಿಸಬೇಕಾಗಿದೆ. ದಲಿತರಾಗಿ ಮತ್ತು ಮಹಿಳೆಯರಾಗಿ ಈ ಶೋಷಿತ ಸಮುದಾಯಗಳಿಂದ ಬಂದ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡುವ ಮೂಲಕ ಎಲ್ಲಾ ಜನರ ಆರೋಗ್ಯವನ್ನು ಕಾಪಾಡುವ ಪ್ರಮುಖ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಆದರೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ಪೌರಕಾರ್ಮಿಕರು ದಲಿತರೆಂಬ ಕಾರಣಕ್ಕೆ ಅವರ ವಿರುದ್ಧ ತಾರತಮ್ಯ ಮತ್ತು ಅಸ್ಪಶ್ಯತೆಯನ್ನು ಆಚರಿಸುತ್ತಾರೆ. ಪೌರಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಕುಡಿಯವ ನೀರಿನ ವ್ಯವಸ್ಥೆ ಇರುವುದಿಲ್ಲ, ಅಕ್ಕಪಕ್ಕದ ಮನೆಯವರನ್ನು ಕೇಳಿದರೆ ಕೆಲವರು ಕೊಡಲು ನಿರಾಕರಿಸುತ್ತಾರೆ ಮತ್ತೆ ಕೆಲವರು ಶೌಚಾಲಯಕ್ಕೆ ಬಳಸುವ ಜಗ್‌ಗಳಲ್ಲಿ ನೀರು ನೀಡುತ್ತಾರೆ. ಘನತ್ಯಾಜ್ಯ ವಿಲೇವಾರಿಯ ಕೆಲಸವು ಅನೈರ್ಮಲ್ಯದಿಂದ ಕೂಡಿದ್ದು, ಈ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣಾತ್ಮಕ ಪರಿಕರಗಳನ್ನು ನೀಡಿರುವುದಿಲ್ಲ. ಅದೂ ಅಲ್ಲದೆ ಕಸಗುಡಿಸುವ ಮತ್ತು ಮನೆ ಮನೆಗಳಿಂದ ಕಸ ಸಂಗ್ರಹಿಸಲು ಸೂಕ್ತ ಸಲಕರಣೆಗಳೂ ಇವರಿಗೆ ಸಿಗುವುದಿಲ್ಲ. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಸಮಾಜದ ಸ್ವಾಸ್ಥ ಕಾಪಾಡುವ ಪೌರಕಾರ್ಮಿಕರು ಹಲವಾರು ರೋಗ ರುಜಿನಗಳಿಗೆ ಅತಿಬೇಗ ತುತ್ತಾಗಿ ಸಮಾಜಕ್ಕಾಗಿ ಜೀವ ಬಿಡುತ್ತಾರೆ. ಹೀಗಾಗಿ ಪೌರಕಾರ್ಮಿಕರು ತಮ್ಮ ಬದುಕು ಸಂಕಷ್ಟದಲ್ಲಿರುವುದರಿಂದ ರಾಜ್ಯ ಸರಕಾರ ಮತ್ತು ಸಮಾಜದ ಗಮನ ಸೆಳೆಯಲು ಮುಷ್ಕರದಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಪೌರಕಾರ್ಮಿಕರು ಮುಷ್ಕರದಂತಹ ಕಠಿಣಕ್ರಮಕ್ಕೆ ಏಕೆ ಮುಂದಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಾವು ಅವರ ಕೆಲಸದ ಪರಿಸ್ಥಿತಿಗಳು, ಸೇವಾ ಸೌಲಭ್ಯಗಳ ಪರಿಸ್ಥಿತಿಗಳು ಮತ್ತು ಅವರ ಜೀವನದ ಇತರ ಅಂಶಗಳನ್ನು ನೋಡಬೇಕಾಗಿದೆ. ಮೇ 2016ರ ಹಿಂದೆಯೇ ಎಲ್ಲಾ ಪೌರಕಾರ್ಮಿಕರ ಸೇವೆಗಳನ್ನು ಮಾರ್ಚ್ 2017ರೊಳಗೆೆ ಖಾಯಂಗೊಳಿಸಲು ಅಂದಿನ ಸರಕಾರದ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ ಇಲ್ಲಿಯ ತನಕ ಯಾವುದೇ ಪ್ರಕ್ರಿಯೆ ನಡೆಯದೆ ಇರುವುದನ್ನು ಗಮನಿಸಿದರೆ, ಪೌರಕಾರ್ಮಿಕರ ಬವಣೆಗಳು ಏನೆಂದು ಸ್ಪಷ್ಟವಾಗಿ ತಿಳಿಯುತ್ತವೆ.

ಇಂದು, ರಾಜ್ಯದಲ್ಲಿರುವ 288 ನಗರ ಸ್ಥಳೀಯ ಸಂಸ್ಥೆಗಳಲ್ಲಿ 54,512 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ, ಅವರಲ್ಲಿ 10,755 ಖಾಯಂ ಪೌರಕಾರ್ಮಿಕರು ಮಾತ್ರ ವೇತನ ಶ್ರೇಣಿಯ ಪ್ರಕಾರ ವೇತನವನ್ನು ಪಡೆಯುತ್ತಿದ್ದಾರೆ. ವಾರದ ರಜೆ, ಸರಕಾರಿ ಘೋಷಿತ ರಜಾದಿನಗಳು ಮತ್ತು ಇತರ ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ನಿವೃತ್ತಿ ಸೇವಾ ಸೌಲಭ್ಯಗಳನ್ನು ಹೊಂದಿದ್ದಾರೆ. ಉಳಿದವರು ನೇರ-ಪಾವತಿ ಪೌರಕಾರ್ಮಿಕರು, ಇವರಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನವನ್ನು ಪಾವತಿಸಲಾಗುತ್ತದೆ ಮತ್ತು ಗುತ್ತಿಗೆ ಪೌರಕಾರ್ಮಿಕರು. ಈ ಕೊನೆಯ ಎರಡು ವರ್ಗದ ಕಾರ್ಮಿಕರಿಗೆೆ ಕೇವಲ ಕನಿಷ್ಠ ವೇತನವನ್ನು ನೀಡಲಾಗುತ್ತದೆ (ತಿಂಗಳಿಗೆ ಸುಮಾರು ರೂ. 12,000) ಮತ್ತು ರಜೆ, ವಾರದ ರಜೆ, ಸರಕಾರಿ ಘೋಷಿತ ರಜಾದಿನಗಳು, ಗ್ರಾಚ್ಯುಟಿ, ನಿವೃತ್ತಿ ಸೌಲಭ್ಯಗಳು ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ನಿರಾಕರಿಸಲಾಗಿದೆ. ಅದರಲ್ಲೂ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಏಕೆಂದರೆ, ಗುತ್ತಿಗೆದಾರರು ಪೌರಕಾರ್ಮಿಕರಿಗೆ ನೀಡುವ ಕನಿಷ್ಠ ವೇತನವನ್ನು ಸಹ ದೋಚುತ್ತಿದ್ದಾರೆ ಮತ್ತು ಅತ್ಯಲ್ಪವೇತನವನ್ನು ನೀಡುತ್ತಿದ್ದಾರೆ.

ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಸಂಭ್ರಮಿಸುತ್ತಿದೆ. ಆದರೆ ರಾಜ್ಯಾದ್ಯಂತ ಪೌರಕಾರ್ಮಿಕರು ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ, ಅವೈಜ್ಞಾನಿಕ ಮಾದರಿಯಲ್ಲಿ ಬೀದಿ ಕಸಕುಡಿಸುವುದು ಮತ್ತು ಕಸ ಸಂಗ್ರಹಣೆ ಮಾಡುವ ಅನೈರ್ಮಲ್ಯ ಕೆಲಸವನ್ನು ಮಾಡುತ್ತಿದ್ದಾರೆ. ಕೊಳೆತು ನಾರುವ ಕಸವನ್ನು ಬರೀ ಕೈಗಳಿಂದಲೇ ಎತ್ತುವಂತೆ ಅವರನ್ನು ಬಲವಂತ ಪಡಿಸಲಾಗುತ್ತದೆ ಮತ್ತು ಅದನ್ನು ಸಾಗಿಸಲು ಮುರಿದು ಬಿದ್ದಿರುವ ತಳ್ಳುವ ಗಾಡಿಗಳನ್ನು ನೀಡಲಾಗಿದೆ. ಇದರಿಂದಾಗಿ ಪೌರಕಾರ್ಮಿರು ಬೆನ್ನು ಮತ್ತು ಸೊಂಟ ನೋವಿನಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಬೆಂಗಳೂರು ಮಹಾನಗರದಂತಹ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಪೌರಕಾರ್ಮಿಕರು ಮುರಿದ ತಳ್ಳುವ ಗಾಡಿಗಳ ಮೂಲಕ ಕಸ ಸಾಗಿಸುವಾಗ ಹಲವಾರು ಅಪಘಾತಗಳು ಸಂಭವಿಸಿವೆ. ಆದರೆ ಅಪಘಾತಕ್ಕೊಳಗಾದ ಪೌರಕಾರ್ಮಿಕರಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ.

ಪಟ್ಟಣಗಳು ಮತ್ತು ನಗರಗಳನ್ನು ಸ್ವಚ್ಛವಾಗಿಡಲು ಹಾಗೂ ಜನರ ಆರೋಗ್ಯವನ್ನು ರಕ್ಷಿಸಲು ಪೌರಕಾರ್ಮಿಕರು ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.30ರವರೆಗೆ ಕೆಲಸ ಮಾಡುತ್ತಾರೆ. ಬೆಂಗಳೂರು ಮತ್ತು ಮೈಸೂರು ಹೊರತುಪಡಿಸಿ, ಇತರ ನಗರ ಸ್ಥಳೀಯ ಸಂಸ್ಥೆಗಳಡಿಯಲ್ಲಿ ಬರುವ ಪೌರಕಾರ್ಮಿಕರು ಗುಡಿಸುವುದು ಸೇರಿದಂತೆ ಮ್ಯಾನ್‌ಹೋಲ್‌ಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಎರಡು ಕೆಲಸಗಳನ್ನೂ ಮಾಡುತ್ತಾರೆ. ಇದಲ್ಲದೆ, ಪೌರಕಾರ್ಮಿಕರು ಬೀದಿ ಗುಡಿಸುವ ಮತ್ತು ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸಗಳ ಜೊತೆಗೆ ರಸ್ತೆಗಳಲ್ಲಿ ಬಿದ್ದಿರುವ ಮಾನವರ ಮಲಮೂತ್ರ ಮಿಶ್ರಿತ ತ್ಯಾಜ್ಯ ಮತ್ತು ಸತ್ತ ಪ್ರಾಣಿಗಳನ್ನು ಬರೀ ಕೈಯಿಂದ ತೆರವುಗೊಳಿಸುವಂತೆ ಒತ್ತಾಯಕ್ಕೊಳಪಡುತ್ತಾರೆ. ನಗರ ಪ್ರದೇಶಗಳಲ್ಲಿ ಮಾನವರ ಮಲ ಮೂತ್ರವನ್ನು ತೆರೆೆದ ಚರಂಡಿಗಳಿಗೆ ಬಿಡಲಾಗುತ್ತದೆ, ಇದು ಎಲ್ಲಾ ನಗರಗಳಲ್ಲೂ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ ಹಾಗೆಯೇ ಸೂಕ್ತ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದರಿಂದ ಸಾಕಷ್ಟು ಜನರು ಬಯಲಿನಲ್ಲಿ ಮಲಮೂತ್ರ ವಿಸರ್ಜನೆೆ ಮಾಡುತ್ತಾರೆ. ಇವುಗಳನ್ನು ಸಹ ಪೌರಕಾರ್ಮಿಕರಿಂದಲೇ ಸ್ವಚ್ಛಗೊಳಿಸಲಾಗುತ್ತದೆ. ಈ ರೀತಿಯ ಕೆಲಸ ಮಲಹೊರುವ ಪದ್ಧತಿಯೇ ಹೊರತು ಬೇರೇನೂ ಅಲ್ಲ.

ಡಾ. ಬಿ.ಆರ್. ಅಂಬೇಡ್ಕರ್‌ರವರು ‘‘ಜಾತಿ ಕೇವಲ ಕೆಲಸದ ಆಧಾರದ ಮೇಲೆ ಮಾಡಿದ ವಿಭಜನೆಯಲ್ಲ, ಅದು ಕಾರ್ಮಿಕರ ವಿಭಜನೆ’’ ಎಂದು ಸ್ಪಷ್ಟವಾಗಿ ಘೋಷಿಸಿದ್ದರು. ಬಹುಪಾಲು ಪೌರಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರು ಮತ್ತು ಈ ಕೆಲಸವನ್ನು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಂಡವರಲ್ಲ. ಆದರೆ ಅವರ ಹುಟ್ಟಿನಿಂದಲೇ, ಅಳಿಸಲಾಗದ ಜಾತಿಯ ಕಳಂಕದಿಂದಾಗಿ, ಭಾರತೀಯ ಜಾತಿ ವ್ಯವಸ್ಥೆಯ ದುಷ್ಟ ಶಕ್ತಿಯು ಪೌರಕಾರ್ಮಿಕರು ವಂಶ ಪಾರಂಪರ್ಯವಾಗಿ ಈ ವೃತ್ತಿಯನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳುವಂತೆ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣಮಾಡಿದೆ ಮತ್ತು ಬಲವಂತಪಡಿಸುತ್ತದೆ. ಜಾತಿ ವ್ಯವಸ್ಥೆಯಿಂದ ಕೂಡಿದ ಸಮಾಜ ಮತ್ತು ಆಡಳಿತ ನಡೆಸುವ ಪ್ರಬಲ ಜಾತಿಗಳು ದಲಿತರಿಂದ ಅನೈರ್ಮಲೀಕರಣ ಕೆಲಸವನ್ನು ಮಾಡುವಂತೆ ಒತ್ತಾಯಪಡಿಸುತ್ತಾರೆ. ಹೀಗಾಗಿ, ಊಳಿಗಮಾನ್ಯ ಜಾತಿವಾದಿ ಸಮಾಜವು ಅಸ್ಪಶ್ಯ ಸಮುದಾಯವನ್ನು ಕಸಗುಡಿಸುವವರು ಮತ್ತು ನೈರ್ಮಲೀಕರಣ ಕೆಲಸ ಮಾಡುವವರು ಎಂದು ಪರಿಗಣಿಸಿದೆ.

ಐ.ಪಿ.ಡಿ. ಸಾಲಪ್ಪ ಸಮಿತಿಯ ವರದಿಯನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು. ಸಾಲಪ್ಪಸಮಿತಿಯು, ‘‘ಕಸಗುಡಿಸುವವರು ಮತ್ತು ನೈರ್ಮಲೀಕರಣ ಕೆಲಸ ಮಾಡುವವರ ಜೀವನ ಮತ್ತು ಕೆಲಸದ ಪರಿಸ್ಥಿತಿಗಳ ಸುಧಾರಣೆಯ ಕುರಿತು’’ ವರದಿಯನ್ನು ಎಪ್ರಿಲ್ 1976ರಲ್ಲಿ ಕರ್ನಾಟಕ ರಾಜ್ಯ ಸರಕಾರಕ್ಕೆ ಸಲ್ಲಿಸಿ ಕೆಲವು ಶಿಫಾರಸುಗಳನ್ನು ಮಾಡಿದೆ. ಅವುಗಳು: ತಾತ್ಕಾಲಿಕವಾಗಿ ಉದ್ಯೋಗದಲ್ಲಿರುವ ಮತ್ತು ಒಂದು ವರ್ಷಕ್ಕೆ ಕಡಿಮೆಯಿಲ್ಲದೆ ಸೇವೆಯಲ್ಲಿ ತೊಡಗಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು, ನಗರ ಸ್ಥಳೀಯ ಸಂಸ್ಥೆಗಳು ಪ್ರತಿ 1,000 ಜನಸಂಖ್ಯೆಗೆ ಇಬ್ಬರು ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು, ಪೌರಕಾರ್ಮಿಕರಿಗೆ ಮೇಲ್ವಿಚಾರಕ ಸಿಬ್ಬಂದಿಯಿಂದ ಮತ್ತು ಸಾರ್ವಜನಿಕರಿಂದ ಆಗುವಂತಹ ನಿಂದನೆ ಮತ್ತು ಅವಮಾನಗಳನ್ನು ನಿಲ್ಲಿಸಬೇಕು, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಬೇಕು, ಸೂಕ್ತ ವೇತನ, ವಾರದ ರಜೆ/ ಸರಕಾರಿ ಘೋಷಿತ ರಜೆ/ ಇತರ ರಜಾ ದಿನಗಳು, ಸಮವಸ್ತ್ರಗಳು, ರಕ್ಷಣಾತ್ಮಕ ಪರಿಕರಗಳು ಮತ್ತು ಶುಚಿಗೊಳಿಸಲು ಬೇಕಾಗಿರುವ ಎಲ್ಲಾ ಸಾಧನಗಳನ್ನು ಒದಗಿಸಬೇಕು ಹಾಗೂ ಪಿಂಚಣಿ, ಗ್ರಾಚ್ಯುಟಿ, ಜೀವ ವಿಮಾ ಯೋಜನೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ. ಮುಖ್ಯವಾಗಿ, ಯಾವುದೇ ಪುರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆ 200ಕ್ಕಿಂತ ಕಡಿಮೆಯಿಲ್ಲದಿರುವಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿಗಳನ್ನು ನೇಮಿಸಲು ಸಮಿತಿ ಶಿಫಾರಸು ಮಾಡಿದೆ. ಐ.ಪಿ.ಡಿ. ಸಾಲಪ್ಪ ಸಮಿತಿಯು ಸಂಶೋಧನೆ ನಡೆಸಿ ಮಾಡಿದ ಶಿಫಾರಸುಗಳು ಅರ್ಧ ಶತಮಾನದ ನಂತರವೂ ಯಾವುದೇ ಪ್ರಗತಿಯನ್ನು ಕಾಣದೆ ಅದೇ ಸ್ಥಿತಿಯಲ್ಲಿವೆ ಎನ್ನುವುದನ್ನು ಗಮನಿಸಿದರೆೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಡಳಿತರೂಢ ಸರಕಾರಗಳು ಮಾಡಿದ ಮಹಾ ದ್ರೋಹವಾಗಿದೆ.

ಐತಿಹಾಸಿಕವಾಗಿ ತುಳಿತಕ್ಕೊಳಗಾದ ಮತ್ತು ಶೋಷಿತ ಸಮುದಾಯಗಳ, ವಿಶೇಷವಾಗಿ ದಲಿತರ ಉನ್ನತಿಗಾಗಿ ವಿಸ್ತಾರವಾದ ಕಾರ್ಯವಿಧಾನದ ಮೂಲಕ, ಅವರಿಗಿರುವ ತಾರತಮ್ಯವನ್ನು ಪರಿಹರಿಸಲು, ಸಂವಿಧಾನದಲ್ಲಿ ಕಡ್ಡಾಯಗೊಳಿಸಿರುವುದು ಸಂವಿಧಾನ ರಚನಾಕಾರರ ಕಾಳಜಿಯನ್ನು ತೋರಿಸುತ್ತದೆ. ಅನುಚ್ಛೇದ 17 ಅಸ್ಪಶ್ಯತೆಯನ್ನು ನಿರ್ಮೂಲನೆ ಮಾಡುತ್ತದೆ. ಅನುಚ್ಛೇದ 46ರ ಪ್ರಕಾರ ರಾಜ್ಯವು ದುರ್ಬಲ ವರ್ಗದ ಜನರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಕಾಳಜಿಯಿಂದ ಉತ್ತೇಜಿಸಲು ಮತ್ತು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸಲು ಬಯಸುತ್ತದೆ. ಹಾಗಾಗಿ ರಾಜ್ಯ ಸರಕಾರವು ಪೌರಕಾರ್ಮಿಕರ ಸ್ಥಿತಿಗತಿಗಳನ್ನು ಸುಧಾರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಂವಿಧಾನಾತ್ಮಕ ಜವಾಬ್ದಾರಿಯನ್ನು ಹೊಂದಿದೆ. ಇದಲ್ಲದೆ, ಭಾರತದಲ್ಲಿನ ಸಮಾನತೆಯ ನ್ಯಾಯತತ್ವದ ಪ್ರಕಾರ ಔಪಚಾರಿಕ ಸಮಾನತೆಯಿಂದ ವಸ್ತುನಿಷ್ಠ ಸಮಾನತೆಗೆ ಪರಿವರ್ತಿಸುವ ದೃಷ್ಟಿಯಿಂದ ವಿಶೇಷವಾಗಿ ಈ ಕಾರ್ಮಿಕರನ್ನು ಖಾಯಂಗೊಳಿಸಲು ಸರಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ರಚನಾತ್ಮಕ ಅಸಮಾನತೆಗಳನ್ನು ನಿವಾರಿಸುವುದಕ್ಕಾಗಿ ಸಂವಿಧಾನದಲ್ಲಿ ವಿಶೇಷ ನಿಬಂಧನೆಗಳನ್ನು ಸೇರಿಸಲಾಗಿದೆ, ಇಲ್ಲವಾದಲ್ಲಿ ನಿಜವಾದ ಅಥವಾ ವಾಸ್ತವಿಕ ಸಮಾನತೆ ಭ್ರಮೆಯಾಗಿ ಉಳಿಯುತ್ತದೆ. ಸಂವಿಧಾನದ ಅನುಚ್ಛೇದ 15(4) ಕೆಲವು ವರ್ಗಗಳನ್ನು ವಿಶೆೇಷವಾಗಿ ಗುರುತಿಸಿ, ಅ ಮೂಲಕ ವಸ್ತುನಿಷ್ಠ ಸಮಾನತೆಯನ್ನು ಸಾಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಹೀಗಾಗಿ ಸಮಾಜದಲ್ಲಿ ತಳಮಟ್ಟದಲ್ಲಿರುವ ಪೌರಕಾರ್ಮಿಕರನ್ನು ಮೇಲಕ್ಕೆತ್ತಲು ಅದರಲ್ಲೂ ದಲಿತ ಮಹಿಳೆಯರೇ ಹೆಚ್ಚಾಗಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕರ್ನಾಟಕ ಸರಕಾರಕ್ಕೆ ವಿಶೇಷಾಧಿಕಾರವಿದ್ದು, ಅದನ್ನು ಪೌರಕಾರ್ಮಿಕರ ಪರವಾಗಿ ಚಲಾಯಿಸಬೇಕಾಗಿದೆ.

ಆದರೆ ಸರಕಾರ ಸಾಮಾನ್ಯವಾಗಿ ಬಳಸುವ ವಾದವೆಂದರೆ ಉಮಾದೇವಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾರ್ಮಿಕರನ್ನು ಖಾಯಂಗೊಳಿಸುವುದು ‘‘ಹಿಂಬಾಗಿಲ ಮೂಲಕ ನೇಮಕಾತಿ ಮಾಡುವ ಪ್ರಕ್ರಿಯೆಯಾಗಿದೆ’’ ಎಂದು ತಿಳಿಸಿದ್ದು, ಖಾಯಂಗೊಳಿಸುವ ಪ್ರಕ್ರಿಯೆಯನ್ನು ನಿಷೇಧಿಸಿದೆ ಎಂಬುದಾಗಿದೆ. ಆದರೆ ಇದು ತಪ್ಪುಕಲ್ಪನೆಯಾಗಿದೆ ಏಕೆಂದರೆ ಉಮಾದೇವಿ ಪ್ರಕರಣದಲ್ಲಿ ಸಂವಿಧಾನದ ಪರಿಚ್ಛೇದ 15(4)ರ ಅಡಿಯಲ್ಲಿ ರಾಜ್ಯಕ್ಕಿರುವ ಬಾಧ್ಯತೆಗಳನ್ನು ಕಡಿಮೆ ಮಾಡುವುದಿಲ್ಲ. ಇದಲ್ಲದೆ, ಉಮಾದೇವಿ ಪ್ರಕರಣವನ್ನು ಒಳಗೊಂಡಂತೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ತಡೆಯಲು ಯಾವುದೇ ಸಾರ್ವತ್ರಿಕ ನಿಯಮಗಳಿಲ್ಲ. ಇದಲ್ಲದೆ, ಉಮಾದೇವಿ ಪ್ರಕರಣದ ನಂತರದಲ್ಲಿ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಕೋರಿ ದಾಖಲಾದ ಪ್ರಕರಣಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ಖಾಯಂಗೊಳಿಸುವಂತೆ ನಿರ್ದೇಶನ ನೀಡಿದ್ದಲ್ಲದೆ, ಉದ್ಯೋಗದಾತರು ತಮಗಾಗಿ ತಮ್ಮ ಜೀವಮಾನವೆಲ್ಲಾ ರಕ್ತ ಬೆವರು ಸುರಿಸಿ ದುಡಿದ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವುದನ್ನು ತಪ್ಪಿಸುವುದಕ್ಕಾಗಿ, ಉಮಾದೇವಿ ಪ್ರಕರಣವನ್ನು ಸಾಧನವನ್ನಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಸಮಾಜದ ಸ್ವಾಸ್ಥ್ಯಕ್ಕಾಗಿ ಮಳೆ, ಚಳಿ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಅನೈರ್ಮಲ್ಯವಾದ ಕೆಲಸವನ್ನು ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಇಂದು ತಮ್ಮ ನ್ಯಾಯಬದ್ಧವಾದ ಖಾಯಂ ಕೆಲಸಕ್ಕಾಗಿ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಹಾಲಿ ರಾಜ್ಯದಾದ್ಯಂತ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿರನ್ನು ಖಾಯಂಗೊಳಿಸಬೇಕೇ ವಿನಃ, ನೇಮಕಾತಿಯಲ್ಲ ಎಂಬುವುದು ಪೌರಕಾರ್ಮಿಕರ ದೊಡ್ಡ ಘೋಷಣೆಯಾಗಿದೆ. ವಾಸ್ತವಾಗಿ ಪೌರಕಾರ್ಮಿಕರ ಬದುಕು ತಾರತಮ್ಯ ಮತ್ತು ಶೋಷಣೆಗಳಿಂದ ಕೂಡಿರುವುದರಿಂದ ರಾಜ್ಯ ಸರಕಾರವು ಪೌರಕಾರ್ಮಿಕರ ಹಕ್ಕೋತ್ತಾಯಗಳಿಗೆ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಸ್ಪಂದಿಸುವ ಜವಾಬ್ದಾರಿಯನ್ನು ಹೊಂದಿದೆ. ಕೊರೋನ ಸಾಂಕ್ರಾಮಿಕದ ವಿರುದ್ಧ ನಡೆದ ಹೋರಾಟದಲ್ಲಿ ಪೌರಕಾರ್ಮಿಕರು ಮುಂಚೂಣಿಯಲ್ಲಿದ್ದರೆಂದು ಹೆಮ್ಮೆಪಟ್ಟು ಚಪ್ಪಾಳೆ ತಟ್ಟಿ ಪೌರಕಾರ್ಮಿಕರ ಮೇಲೆ ಪುಷ್ಪವೃಷ್ಟಿ ಮಾಡಿದ ಸಾರ್ವಜನಿಕರಿಗೆ ಪೌರಕಾರ್ಮಿಕರ ನ್ಯಾಯಯುತವಾದ ಹಕ್ಕೊತ್ತಾಯಕ್ಕೆ ಬೆಂಬಲಿಸುವುದು ಕೂಡಾ ಬಾಧ್ಯತೆಯಾಗಿದೆ.

Writer - ಕ್ಲಿಫ್ಟನ್ ಡಿ’ ರೋಜಾರಿಯೋ

contributor

Editor - ಕ್ಲಿಫ್ಟನ್ ಡಿ’ ರೋಜಾರಿಯೋ

contributor

Similar News