ನೂಪುರ್ ಶರ್ಮ ಪ್ರಕರಣ: ಟಿವಿ ಚರ್ಚಾ ಕಾರ್ಯಕ್ರಮದ ಅಜೆಂಡಾ, ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

Update: 2022-07-01 09:22 GMT

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಇದೀಗ ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದ ಜನರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದನ್ನು ಸುಪ್ರೀಂ ಕೋರ್ಟ್ ಇಂದು ಬಲವಾಗಿ ಖಂಡಿಸಿದೆ.

"ನೀವು ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದಾಗ ಅವರನ್ನು ತಕ್ಷಣ ಬಂಧಿಸಲಾಗುತ್ತದೆ ಆದರೆ ನಿಮ್ಮ ವಿರುದ್ಧ ದಾಖಲಾದಾಗ ನಿಮ್ಮನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ,'' ಎಂದು ಜಸ್ಟಿಸ್ ಸೂರ್ಯಕಾಂತ್ ಹೇಳಿದರು.

ನೂಪುರ್ ಶರ್ಮ ಅವರು ಟಿವಿ ವಾಹಿನಿಯಲ್ಲಿ ಹೇಳಿಕೆ ನೀಡಿದ ನಂತರ ದಿಲ್ಲಿ ಪೊಲೀಸರು ಆಕೆಯ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದರು ಎಂದು ಶರ್ಮ ಅವರ ವಕೀಲರಾದ ಮಣೀಂದರ್ ಸಿಂಗ್ ಹೇಳಿದರು.

"ದಿಲ್ಲಿ ಪೊಲೀಸರೇನು ಮಾಡಿದ್ದಾರೆ?ನಮ್ಮ ಬಾಯಿ ತೆರೆಯುವಂತೆ ಮಾಡಬೇಡಿ. ಟಿವಿ ಚರ್ಚೆ ಯಾವ ವಿಚಾರ ಆಗಿತ್ತು? ಒಂದು ಅಜೆಂಡಾವನ್ನು ಬೆಂಬಲಿಸಲೆಂದೇ? ನ್ಯಾಯಾಲಯದಲ್ಲಿರುವ ವಿಚಾರವನ್ನು ಏಕೆ ಆಯ್ದುಕೊಳ್ಳಲಾಗಿತ್ತು? ಆಕೆ ಒಂದು ಪಕ್ಷದ ವಕ್ತಾರೆಯಾಗಿದ್ದರೆ ಏನು? ಆಕೆ ತನಗೆ ಅಧಿಕಾರದ ಬೆಂಬಲವಿದೆ ಹಾಗೂ ಕಾನೂನಿಗೆ ಗೌರವ ನೀಡದೆ ಏನು ಬೇಕಾದರೂ ಹೇಳಬಹುದು ಎಂದು ಅಂದುಕೊಂಡಿದ್ದರೇ?'' ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

"ನಿರೂಪಕರು ಕೇಳಿದ ಒಂದು ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದರು,'' ಎಂದು ನೂಪುರ್ ಅವರ ವಕೀಲರು ಹೇಳಿದಾಗ "ಹಾಗಿದ್ದರೆ ನಿರೂಪಕರ ವಿರುದ್ಧ ಕೇಸ್ ದಾಖಲಿಸಬೇಕು,''ಎಂದು ಜಸ್ಟಿಸ್ ಸೂರ್ಯಕಾಂತ್ ಹೇಳಿದರು.

ನೂಪುರ್ ಶರ್ಮ ತಮ್ಮ ಸುರಕ್ಷತೆಯ ನೆಪವೊಡ್ಡಿ ತಮ್ಮ ವಿರುದ್ಧ ಹಲವು ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ದಿಲ್ಲಿಗೆ ವರ್ಗಾಯಿಸುವಂತೆ ಬೇಡಿಕೆಯಿಟ್ಟಿರುವುದನ್ನು ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿದೆ. ಆಕೆಯ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದ ನಂತರ ವಕೀಲರು ಅದನ್ನು ವಾಪಸ್ ಪಡೆದರು.

"ಆಕೆ ದೇಶಾದ್ಯಂತ ಭಾವನೆಗಳನ್ನು ಕೆರಳಿಸಿದ್ದಾರೆ. ಆಕೆ ಬೆದರಿಕೆ ಎದುರಿಸುತ್ತಿದ್ದಾರೆಯೇ ಅಥವಾ ಆಕೆಯೇ ಭದ್ರತೆಗೆ ಅಪಾಯವೊಡ್ಡುತ್ತಿದ್ದಾರೆಯೇ? ದೇಶದಲ್ಲಿ ನಡೆಯುತ್ತಿರುವುದಕ್ಕೆ ಆಕೆಯೇ ಕಾರಣ. ನಾವು ಚರ್ಚಾ ಕಾರ್ಯಕ್ರಮ ನೋಡಿದ್ದೇವೆ ಹಾಗೂ ಆಕೆಯನ್ನು ಹೇಗೆ ಪ್ರಚೋದಿಸಲಾಯಿತೆಂಬುದನ್ನು ನೋಡಿದ್ದೇವೆ. ಆದರೆ ಆಕೆ  ಹೀಗೆಲ್ಲ ಹೇಳಿದ್ದು ನೋಡಿದಾಗ ಹಾಗೂ ನಂತರ ತಾನೊಬ್ಬ ವಕೀಲೆ ಎಂದು ಹೇಳಿದಾಗ, ನಿಜಕ್ಕೂ ನಾಚಿಕೆಗೇಡು. ಆಕೆ ಇಡೀ ದೇಶದ ಕ್ಷಮೆಯಾಚಿಸಬೇಕು,'' ಎಂದು ಜಸ್ಟಿಸ್ ಸೂರ್ಯಕಾಂತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News