ಉಕ್ರೇನ್ ಮೇಲಿನ ಪ್ರಹಾರ ಮುಂದುವರಿಸುವಂತೆ ಸೇನೆಗೆ ರಶ್ಯ ಅಧ್ಯಕ್ಷರ ಆದೇಶ

Update: 2022-07-04 17:09 GMT

ಮಾಸ್ಕೋ, ಜು.4: ರಶ್ಯಾದ ಸೇನೆ ಉಕ್ರೇನ್ ನ ಲುಹಾಂಸ್ಕ್ ವಲಯದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದನ್ನು ಸೋಮವಾರ ದೃಢಪಡಿಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಮೇಲಿನ ಪ್ರಹಾರವನ್ನು ಯೋಜಿತ ರೀತಿಯಲ್ಲಿ ಮುಂದುವರಿಸಿ ಗುರಿ ತಲುಪುವಂತೆ ರಕ್ಷಣಾ ಸಚಿವರಿಗೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಪೂರ್ವ ತುಕಡಿ ಮತ್ತು ಪಶ್ಚಿಮ ತುಕಡಿಯ ಸಹಿತ ಸೇನೆಯ ಎಲ್ಲಾ ಘಟಕಗಳೂ ಈ ಹಿಂದೆ ಅನುಮೋದಿಸಲ್ಪಟ್ಟ ಯೋಜನೆಯಂತೆ ತಮ್ಮ ಕಾರ್ಯವನ್ನು ಮುಂದುವರಿಸಬೇಕು. ಲುಹಾಂಸ್ಕ್ನಲ್ಲಿ ನಡೆದಂತೆ ಎಲ್ಲವೂ ಯೋಜಿತ ರೀತಿಯಲ್ಲಿಯೇ ಸಾಗುವುದೆಂದು ನಿರೀಕ್ಷಿಸುವುದಾಗಿ ರಕ್ಷಣಾ ಸಚಿವ ಸೆರ್ಗೈ ಶೊಯಿಗುರನ್ನು ಉಲ್ಲೇಖಿಸಿ ಪುಟಿನ್ ಸೂಚಿಸಿದ್ದಾರೆ. ಲುಹಾಂಸ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತುಕಡಿಗೆ ವಿರಾಮ ನೀಡಿ, ಆ ಪ್ರದೇಶದಲ್ಲಿ ಯುದ್ಧಸಾಮರ್ಥ್ಯವನ್ನು ಮರುಸಂಘಟಿಸುವಂತೆಯೂ ಅವರು ಸೂಚಿಸಿದ್ದಾರೆ.

ರಾಜಧಾನಿ ಕೀವ್ ವಶಪಡಿಸಿಕೊಳ್ಳುವ ಆರಂಭಿಕ ಯೋಜನೆಯನ್ನು ಕೈಬಿಟ್ಟ ಬಳಿಕ ರಶ್ಯಾವು ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ಮತ್ತು ಲುಹಾಂಸ್ಕ್ ವಲಯದ ಮೇಲೆ ಪೂರ್ಣ ನಿಯಂತ್ರಣದತ್ತ ಗಮನ ಕೇಂದ್ರೀಕರಿಸಿದೆ. 

ಅಮೆರಿಕ ಸ್ವಾತಂತ್ರ್ಯ ದಿನದಂದು ಬೈಡನ್ ರನ್ನು ಅಭಿನಂದಿಸುವುದಿಲ್ಲ: ಪುಟಿನ್ 

ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಂದು ಅಧ್ಯಕ್ಷ ಜೋ ಬೈಡನ್ರನ್ನು ಪುಟಿನ್ ಅಭಿನಂದಿಸುವುದಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಜುಲೈ 4 ಅಮೆರಿಕದ ಸ್ವಾತಂತ್ರ್ಯ ದಿನವಾಗಿದೆ. ರಶ್ಯದ ವಿಷಯದಲ್ಲಿ ಅಮೆರಿಕದ ಸ್ನೇಹಭಾವವಿಲ್ಲದ ಕ್ರಮಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ವರ್ಷ ಅಭಿನಂದನೆ ಸಲ್ಲಿಸುವುದು ಸೂಕ್ತ ಎಂದು ಅನಿಸುವುದಿಲ್ಲ. ಅಮೆರಿಕದ ಸ್ನೇಹಭಾವವಿಲ್ಲದ ನೀತಿ ಇದಕ್ಕೆ ಕಾರಣ ಎಂದು ರಶ್ಯ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. 

ಪೂರ್ವ ಉಕ್ರೇನ್ನಲ್ಲಿ ನಿರ್ಣಾಯಕ ಮುನ್ನಡೆ: ರಶ್ಯ 

ಉಕ್ರೇನ್ನ ಅತ್ಯಂತ ಆಯಕಟ್ಟಿನ ನಗರ ಲಿಸಿಚಾಂಸ್ಕ್ ಅನ್ನು ತನ್ನ ಪಡೆ ವಶಕ್ಕೆ ಪಡೆದಿದ್ದು ಈ ಮೂಲಕ ಲುಗಾಂಸ್ಕ್ ವಲಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದಂತಾಗಿದೆ. ಇದು ಪೂರ್ವ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ನಿರ್ಣಾಯಕ ಮುನ್ನಡೆಯಾಗಿದೆ ಎಂದು ರಶ್ಯ ಪ್ರತಿಪಾದಿಸಿದೆ.

ಉಕ್ರೇನ್ ವಿರುದ್ಧ ಕಳೆದ 4 ತಿಂಗಳಿಂದ ನಡೆದಿದ್ದ ಯುದ್ಧದಲ್ಲಿ ಇದೇ ಪ್ರಥಮ ಬಾರಿಗೆ ನಿರ್ಣಾಯಕ ಮುನ್ನಡೆ ಸಾಧಿಸಲಾಗಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಲುಹಾಂಸ್ಕ್ ವಲಯದಲ್ಲಿ ಉಕ್ರೇನ್ನ ನಿಯಂತ್ರಣದಲ್ಲಿದ್ದ ಕಟ್ಟಕಡೆಯ ನಗರ ಲಿಸಿಚಾಂಸ್ಕ್ ಕೈವಶವಾಗಿರುವುದರಿಂದ ಪೂರ್ವ ವಲಯದಲ್ಲಿ ಗಮನಾರ್ಹ ಮೇಲುಗೈ ಸಾಧ್ಯವಾಗಿದೆ ಎಂದು ರಶ್ಯದ ವಿದೇಶಾಂಗ ಸಚಿವಾಲಯ ಹೇಳಿದೆ.

ಲಿಸಿಚಾಂಸ್ಕ್ ನಗರದಿಂದ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಆ ನಗರದಲ್ಲಿ ನಮ್ಮ ಯೋಧರ ಸಂಖ್ಯೆ ಕಡಿಮೆ ಇರುವುದರಿಂದ ವೈರಿಗಳಿಂದ ನಮ್ಮ ಯೋಧರು ಮುತ್ತಿಗೆಗೆ ಒಳಗಾಗುವುದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಲುಹಾಂಸ್ಕ್ ಗವರ್ನರ್ ಸೆರ್ಹಿಹ್ ಹೈದಯ್ ಸೋಮವಾರ ಹೇಳಿದ್ದಾರೆ.

ಇದೀಗ ರಶ್ಯ ಸೇನೆ ಡೊನೆಟ್ಸ್ಕ್ ವಲಯದ ಸಿವೆರ್ಸ್ಕ್, ಫೆಡೊರಿವ್ಕ ಮತ್ತು ಬಾಖ್ಮುಟ್ ನಗರದತ್ತ ಗಮನ ಕೇಂದ್ರೀಕರಿಸಿದೆ. ಅಲ್ಲದೆ ಸ್ಲೊವಿಯಾಂಸ್ಕ್ ಮತ್ತು ಕ್ರಮಟೊರ್ಸ್ಕ್ ನಗರಗಳ ಮೇಲೆ ತೀವ್ರ ವಾಯುದಾಳಿ ಮುಂದುವರಿದಿದೆ ಎಂದು ಉಕ್ರೇನ್ ಸೇನೆ ಹೇಳಿದೆ

. ಈ ಮಧ್ಯೆ, ಉಕ್ರೇನ್ನ ಸ್ಲೊವಿಯಾಂಸ್ಕ್ ನಗರದ ಮೇಲೆ ರಶ್ಯ ಪಡೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಗು ಸಹಿತ 6 ಮಂದಿ ಮೃತಪಟ್ಟಿದ್ದು ಇತರ 15 ಮಂದಿ ಗಾಯಗೊಂಡಿದ್ದಾರೆ. ಹಲವು ಅಂಗಡಿಗಳಿಗೆ ಹಾನಿಯಾಗಿರುವುದಾಗಿ ಉಕ್ರೇನ್ನ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಉಕ್ರೇನ್ನ ಗಡಿಯಲ್ಲಿರುವ ರಶ್ಯದ ಬೆಲ್ಗೊರೊಡ್ ನಗರದ ಮೇಲೆ ಉಕ್ರೇನ್ 3 ಕ್ಷಿಪಣಿಗಳನ್ನು ಉಡಾಯಿಸಿದ್ದು ಅವನ್ನು ತಡೆಯಲಾಗಿದೆ ಎಂದು ಬೆಲಾರಸ್ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News