ಕಾಳಿ ಕುರಿತು ಹೇಳಿಕೆ:ಮಹುವಾ ಮೊಯಿತ್ರಾಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲ

Update: 2022-07-06 15:45 GMT

ಹೊಸದಿಲ್ಲಿ,ಜು.6: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಕಾಳಿಯ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ಅವರನ್ನು ಬೆಂಬಲಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್,‘ನಮ್ಮ ಆರಾಧನಾ ವಿಧಾನಗಳು ದೇಶಾದ್ಯಂತ ವಿಭಿನ್ನವಾಗಿವೆ ’ ಎಂದು ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ,ವ್ಯಕ್ತಿಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ತಮ್ಮ ಇಚ್ಛೆಯಂತೆ ಖಾಸಗಿಯಾಗಿ ನಡೆಸಲು ಬಿಡಿ ಎಂದು ಜನರನ್ನು ಅವರು ಆಗ್ರಹಿಸಿದ್ದಾರೆ.

‘ದುರುದ್ದೇಶಗಳಿಂದ ಹುಟ್ಟುಹಾಕುವ ವಿವಾದಗಳಿಗೆ ನಾನು ಹೊಸಬನಲ್ಲ. ಆದಾಗ್ಯೂಪ್ರತಿಯೊಬ್ಬ ಹಿಂದುವಿಗೂ ತಿಳಿದಿರುವುದನ್ನೇ ಹೇಳಿದ್ದಕ್ಕಾಗಿ ಮೊಯಿತ್ರಾ ವಿರುದ್ಧ ನಡೆಯುತ್ತಿರುವ ದಾಳಿ ನನ್ನನ್ನು ದಿಗ್ಭ್ರಮೆಗೊಳಿಸಿದೆ. ದೇಶಾದ್ಯಂತ ನಮ್ಮ ಆರಾಧನಾ ವಿಧಾನಗಳು ಬದಲಾಗುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಭಕ್ತರು ಅರ್ಪಿಸುವ ನೈವೇದ್ಯ ದೇವಿಗಿಂತ ಹೆಚ್ಚಿನದನ್ನು ಅವರ ಬಗ್ಗೆಯೇ ಹೇಳುತ್ತದೆ’ ಎಂದು ತರೂರ್ ಟ್ವೀಟಿಸಿದ್ದಾರೆ.

‘ನಾವಿಂದು ಧರ್ಮದ ಯಾವುದೇ ಅಂಶದ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲದ ಹಂತವನ್ನು ತಲುಪಿದ್ದೇವೆ. ಏನೇ ಹೇಳಿದರೂ ಅದು ಧಾರ್ಮಿಕ ಅವಹೇಳನವೆಂದು ಯಾರಾದರೂ ಆರೋಪಿಸುವುದು ಸಾಮಾನ್ಯವಾಗಿಬಿಟ್ಟಿದೆ. ಮೊಯಿತ್ರಾ ಯಾರನ್ನೂ ನೋಯಿಸುವ ಇಚ್ಛೆಯನ್ನು ಹೊಂದಿರಲಿಲ್ಲ ಎನ್ನುವದು ಸ್ಪಷ್ಟವಾಗಿದೆ ’ ಎಂದು ತರೂರ್ ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮಂಗಳವಾರ ಕೋಲ್ಕತಾದಲ್ಲಿ ಮಾಧ್ಯಮ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೊಯಿತ್ರಾ‘ಹಿಂದು ಧರ್ಮದಲ್ಲಿ,ಕಾಳಿ ಮಾತೆಯ ಆರಾಧಕಿಯಾಗಿ ನನ್ನ ಕಾಳಿಯನ್ನು ನನ್ನ ಆಯ್ಕೆಯ ರೂಪದಲ್ಲಿ ಕಲ್ಪಿಸಿಕೊಳ್ಳಲು ನನಗೆ ಸ್ವಾತಂತ್ರವಿದೆ. ಅದು ನನ್ನ ಸ್ವಾತಂತ್ರವಾಗಿದೆ ಮತ್ತು ಅದರಿಂದ ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ನಿಮಗೆ ನಿಮ್ಮ ದೇವರನ್ನು ಆರಾಧಿಸಲು ಇರುವಷ್ಟೇ ಸ್ವಾತಂತ್ರ ನನಗೂ ಇದೆ ’ಎಂದು ಹೇಳಿದ್ದರು.

‘ನನ್ನ ಪಾಲಿಗೆ ಕಾಳಿ ಮಾಂಸವನ್ನು ತಿನ್ನುವ ಮತ್ತು ಮದ್ಯವನ್ನು ಸೇವಿಸುವ ದೇವತೆಯಾಗಿದ್ದಾಳೆ. ಪ.ಬಂಗಾಳದ ವೀರಭೂಮ್ ಜಿಲ್ಲೆಯಲ್ಲಿಯ ಪ್ರಮುಖ ಶಕ್ತಿಪೀಠವಾಗಿರುವ ತಾರಾಪೀಠಕ್ಕೆ ನೀವು ಭೇಟಿ ನೀಡಿದರೆ ಅಲ್ಲಿ ಸಾಧುಗಳು ಧೂಮ್ರಪಾನ ಮಾಡುವುದನ್ನು ನೀವು ನೋಡುತ್ತೀರಿ. ಅದು ಅಲ್ಲಿ ಕಾಳಿ ಆರಾಧನೆಯ ರೂಪವಾಗಿದೆ ’ಎಂದು ಹೇಳಿದ್ದರು.

ಕೆನಡಾದಲ್ಲಿ ನೆಲೆಸಿರುವ ತಮಿಳುನಾಡು ಮೂಲದ ನಿರ್ಮಾಪಕಿ ಲೀನಾ ಮಣಿಮೇಖಲೈ ಅವರ ನೂತನ ಸಾಕ್ಷಚಿತ್ರ ‘ಕಾಳಿ’ಯ ಪೋಸ್ಟರ್ ವಿವಾದವನ್ನುಂಟು ಮಾಡಿರುವ ಸಂದರ್ಭದಲ್ಲಿಯೇ ಹೊರಬಿದ್ದಿರುವ ಮೊಯಿತ್ರಾ ಅವರ ಹೇಳಿಕೆಯೂ ವಿವಾದವನ್ನು ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News