ಕರಾವಳಿ ಜಿಲ್ಲೆಗಳಲ್ಲಿ ಸೈನಿಕ ತರಬೇತಿ ಸಂಸ್ಥೆಗಳ ಆರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-07-08 13:53 GMT

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಪೂರಕವಾಗಿ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ವೀರರ ಹೆಸರಿನಲ್ಲಿ ಸೈನಿಕ ತರಬೇತಿ ಸಂಸ್ಥೆಗಳನ್ನು ಆರಂಭಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರೂ. 4.5 ಕೋಟಿ ವೆಚ್ಚದಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ನ ಯೋಜನೆ  (CAFES) ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವರು, ಸರ್ಕಾರಿ ನೌಕರಿಯ ಬಗ್ಗೆ ಕರಾವಳಿ ಜನರಿಗೆ ಹೆಚ್ಚಿನ ಮಾಹಿತಿ, ತರಬೇತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಇದೇ ವೇಳೆ ಅವರು, ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹೊಸ ಸ್ಪರ್ಷ ನೀಡಲಾಗುತ್ತಿದೆ. ಇಲಾಖೆಯ 1704 ವಸತಿ ಶಾಲೆಗಳಲ್ಲಿ 1.8 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸರ್ಕಾರ 6 ನೇ ತರಗತಿ ನಂತರದ ಮಕ್ಕಳಿಗೆ ಆತ್ಮರಕ್ಷಣೆಗೆ ಒನಕೆ ಓಬವ್ವ ಹೆಸರಿನಲ್ಲಿ ಕರಾಟೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಕರಾಟೆ ಕಲಿತ ಹೆಣ್ಣುಮಕ್ಕಳಿಗೆ ಉದ್ಯೋಗವೂ ದೊರೆಯಲಿದೆ ಎಂದರು.

ಶಿಕ್ಷಣದ ಮೂಲಕ ರಾಷ್ಟ್ರಭಕ್ತಿ

ನಮ್ಮ ದೇಶದ ಅನ್ನ ತಿಂದು ದೇಶಕ್ಕೆ ದ್ರೋಹ ಬಗೆಯುವ ಯುವಕರ ಮನಸ್ಥಿತಿ ಬದಲಾಗಬೇಕು. ಶಿಕ್ಷಣದ ಮೂಲಕವೇ ರಾಷ್ಟ್ರಭಕ್ತಿ ಮೂಡಿಸುವ ಕೆಲಸವಾಗಬೇಕಿದೆ. ಜಾತಿ- ಧರ್ಮ ಮೀರಿ ವಿದ್ಯಾರ್ಥಿಗಳು ಏಕತೆ, ರಾಷ್ಟ್ರಪ್ರೇಮ, ಸಹಬಾಳ್ವೆಯ ಪಾಠ ಕಲಿಯಬೇಕು. ಇದಕ್ಕಾಗಿ ಹೆಗಡೇವಾರ್ ಕುರಿತ ಪಠ್ಯ ಕಲಿತರೆ ತಪ್ಪೇನು? ಟೀಕೆ, ಹೇಳಿಕೆ, ಪ್ರತಿಹೇಳಿಕೆ ಎಲ್ಲವೂ ಪ್ರಜಾಪ್ರಭುತ್ವದ ಭಾಗ. ಆದರೆ ಕುರುಡಾಗಿ ವಿರೋಧಿಸುವುದು ಪ್ರಜಾಪ್ರಭುತ್ವದ  ಸೋಲು, ಎಂದರು.

ರೂಸಾದ ರೂ. 3.25 ಕೋಟಿ ಅನುದಾನದಡಿ ನಿರ್ಮಿಸಲಾಗಿರುವ ಭೂಗೋಳ ಶಾಸ್ತ್ರ ಅಧ್ಯಯನ ವಿಭಾಗದ ನೂತನ ಕಟ್ಟಡ ಹಾಗೂ ವಿಭಾಗ ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಸರ್ಕಾರ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ರೂ. 20 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ, ʼಇಸಂʼ ಗಳನ್ನು ಹೊರತುಪಡಿಸಿದ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020 ರ ಅನುಷ್ಠಾನದಲ್ಲಿ ಮಂಗಳೂರು ವಿವಿಯ ಬದ್ಧತೆ ಶ್ಲಾಘನೀಯ, ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಪ್ರೊ. ಎಂ. ಎಸ್ ತಳವಾರ್ ಗೌರವ ಅತಿಥಿಗಳಾಗಿದ್ದರು. ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ ಕೆ ಅತಿಥಿಗಳನ್ನು ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ ಹೆಚ್ ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭೂಗೋಳಶಾಸ್ತ್ರ ವಿಭಾಗದ ಸಂಯೋಜಕ ಡಾ. ದಶರಥ ಪಿ. ಅಂಗಡಿ ವಂದಿಸಿದರು. ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ, ಹಣಕಾಸು ಅಧಿಕಾರಿ ಪ್ರೊ. ಜಯಪ್ಪ, ಕಾರ್ಯಕಾರಿ ಅಭಿಯಂತರ ದೇವಿಪ್ರಸಾದ್ ಎಂ,  ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News