ಹಣದುಬ್ಬರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಸುಧಾರಿಸಬಹುದು: ಆರ್ಬಿಐ ಗವರ್ನರ್ ವಿಶ್ವಾಸ
ಹೊಸದಿಲ್ಲಿ: ದೇಶದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ಸಮಸ್ಯೆ ಕ್ರಮೇಣ ಸುಧಾರಿಸಬಹುದೆಂಬ ಆತ್ಮವಿಶ್ವಾಸವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಂಠ ದಾಸ್ ವ್ಯಕ್ತಪಡಿಸಿದ್ದಾರೆ.
ಕೌಟಿಲ್ಯ ಇಕನಾಮಿಕ್ ಕಾಂಕ್ಲೇವ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಹಣದುಬ್ಬರವನ್ನು ನಿಯಂತ್ರಿಸಲು ಹಾಗೂ ಸುಸ್ಥಿರ ಪ್ರಗತಿ ಸಾಧಿಸಲು ಆರ್ಬಿಐ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಲಿದೆ ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದ ಪ್ರಥಮಾರ್ಧದಲ್ಲಿನ ಚಿತ್ರಣವನ್ನು ಗಮನಿಸಿದಾಗ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
"ಅಲ್ಪಾವಧಿಯಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳು ಹಣದುಬ್ಬರವನ್ನು ಬಾಧಿಸಬಹುದಾದರೂ, ಮಧ್ಯಮಾವಧಿಯಲ್ಲಿ ಇದರ ಪರಿಣಾಮ ನಾವು ಕೈಗೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿದೆ" ಎಂದು ಅವರು ಹೇಳಿದರು. ರಿಸರ್ವ್ ಬ್ಯಾಂಕಿನ ಆರ್ಥಿಕ ನೀತಿ ಸಮಿತಿ ಎಪ್ರಿಲ್-ಜೂನ್ ಸಭೆಗಳಲ್ಲಿ ಹಣದುಬ್ಬರ ಪ್ರಮಾಣದ ನಿಗದಿಯನ್ನು ಶೇ 6.7 ಗೆ ಪರಿಷ್ಕರಿಸಿತ್ತು.