ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ
ಹೊಸದಿಲ್ಲಿ: ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ವಿದೇಶದಿಂದ ವಾಪಸಾದ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ದೃಢಪಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಸೋಂಕನ್ನು ನಿರ್ವಹಿಸುವ ಕುರಿತಂತೆ ಇಂದು ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಅಸೌಖ್ಯಪೀಡಿತರ ಹತ್ತಿರ ಹೋಗದಂತೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸರಕಾರ ಸೂಚಿಸಿದ್ದು, ಯಾರಿಗಾದರೂ ಜ್ವರ, ಮೈಯ್ಯಲ್ಲಿ ದದ್ದು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕೆಂದು ಹೇಳಿದೆ.
ಚರ್ಮದಲ್ಲಿ ಗಾಯಗಳಿರುವ ಜನರ ಬಳಿ ಹೋಗದಂತೆ ಹಾಗೂ ರೋಗಿಗಳು ಬಳಸುವ ವಸ್ತುಗಳು, ಬಟ್ಟೆಗಳು, ಹಾಸಿಗೆಗಳನ್ನು ಮುಟ್ಟದಂತೆ ಅವರಿಗೆ ಸೂಚನೆ ನೀಡಲಾಗಿದೆ.
ವನ್ಯ ಪ್ರಾಣಿಗಳ ಹತ್ತಿರ ಹೋಗದಂತೆ, ವನ್ಯ ಪ್ರಾಣಿಗಳ ಮಾಂಸ ಸೇವಿಸದಂತೆ ಹಾಗೂ ಆಫ್ರಿಕಾದಲ್ಲಿ ವನ್ಯ ಪ್ರಾಣಿಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಬಳಸದಂತೆ ಸೂಚಿಸಲಾಗಿದೆ.
ಶಂಕಿತ ಮಂಕಿಪಾಕ್ಸ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದೇವೆ ಎಂಬ ಶಂಕೆ ಯಾರಿಗಾದರೂ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕೇಂದ್ರ ಹೇಳಿದೆ.
ಶಂಕಿತ ಮಂಕಿಪಾಕ್ಸ್ ಸೋಂಕಿತರನ್ನು ಅವರು ಪತ್ತೆಯಾದ ಸ್ಥಳದಲ್ಲಿಯೇ ತಪಾಸಣೆಗೆ ಗುರಿಪಡಿಸಿ ಅವರನ್ನು ಇತರರಿಂದ ಪ್ರತ್ಯೇಕಿಸಿ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ