ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯವರನ್ನು ಸಿಲುಕಿಸುವ ಸಂಚಿಗೆ ಸೋನಿಯಾ ಗಾಂಧಿ ಪ್ರೇರಣೆ: ಬಿಜೆಪಿ ಆರೋಪ
ಹೊಸದಿಲ್ಲಿ: 2002ರಲ್ಲಿ ಗುಜರಾತ್ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಸಿಲುಕಿಸುವ ಸಂಚಿನ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಪಕ್ಷದ ವಕ್ತಾರ ಸಂಬಿತ್ ಪಾತ್ರಾ , ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕ ದಿವಂಗತ ಅಹ್ಮದ್ ಪಟೇಲ್ ಕೇವಲ ಮಾಧ್ಯಮವಾಗಿದ್ದರು. ಅವರ ಮೂಲಕ ಸೋನಿಯಾ ಗಾಂಧಿ ಅವರು ರಾಜ್ಯದಲ್ಲಿನ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಹಾಗೂ ಪ್ರಧಾನಿ ಮೋದಿಯವರ ರಾಜಕೀಯ ವೃತ್ತಿವನ್ನು ಹಾನಿ ಮಾಡುವ ಕೆಲಸ ಮಾಡಿದ್ದಾರೆ ಎಂದರು.
ಈ ಬಗ್ಗೆ ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿ ನಡೆಸಬೇಕು ಎಂದು ಪಾತ್ರಾ ಆಗ್ರಹಿಸಿದರು.
"ಸೋನಿಯಾ ಗಾಂಧಿ ಅವರು ಪತ್ರಿಕಾಗೋಷ್ಠಿ ನಡೆಸಬೇಕೆಂದು ನಾವು ಬಯಸುತ್ತೇವೆ ಹಾಗೂ ಅವರು ಪಿಎಂ ಮೋದಿಯ ವಿರುದ್ಧ ಏಕೆ ಪಿತೂರಿ ನಡೆಸಿದ್ದಾರೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಹೇಳಬೇಕು. ಈ ಪತ್ರಿಕಾಗೋಷ್ಠಿಯು ಪಟೇಲ್ ಅವರ ಮೇಲೆ ಆಕ್ರಮಣವಲ್ಲ, ಪಟೇಲ್ ಹೇಳಿದಂತೆ ಸೋನಿಯಾ ವರ್ತಿಸುತ್ತಿದ್ದರು'' ಎಂದರು.