ಅಜೆಕಾರು: ಕಣ್ಣಿಗೆ ಮೆಣಸಿನ ಹುಡಿ ಎಸೆದು ಮನೆ ಕಳವಿಗೆ ಯತ್ನ
Update: 2022-07-18 16:14 GMT
ಅಜೆಕಾರು, ಜು.18: ಮನೆ ಮಾಲಕರ ಕಣ್ಣಿಗೆ ಮೆಣಸಿನ ಹುಡಿ ಎಸೆದು ಮನೆ ಕಳವಿಗೆ ಯತ್ನಿಸಿರುವ ಘಟನೆ ಜು.18ರಂದು ನಸುಕಿನ ವೇಳೆ ಕೆರ್ವಾಶೆ ಗ್ರಾಮದ ಜಯಪುರ ಎಂಬಲ್ಲಿ ನಡೆದಿದೆ.
ಮನೆಯ ಹೊರಗೆ ನಾಯಿ ಬೊಗಳಿದ ಶಬ್ದ ಕೇಳಿ ಕೃಷ್ಣ ಭಟ್, ಮನೆ ಬಾಗಿಲನ್ನು ತೆರೆದು ಹೊರಗೆ ಬಂದರು. ಆಗ ಇಬ್ಬರು ಅಪರಿಚಿತರು ಅವರನ್ನು ಗಟ್ಟಿಯಾಗಿ ಹಿಡಿದು ಮುಖಕ್ಕೆ ಮೆಣಸಿನ ಪುಡಿಯನ್ನು ಎಸೆದರು. ಬಳಿಕ ಅವರ ಪಂಚೆಯನ್ನು ಹಿಡಿದೆಳೆದು ಅದನ್ನು ಅವರ ಮುಖಕ್ಕೆ ಸುತ್ತಿ ಕೂಗಾಡದಂತೆ ಬಾಯಿ ಹಾಗೂ ಕುತ್ತಿಗೆಯನ್ನು ಒತ್ತಿ ಹಿಡಿದರು. ಅಲುಗಾಡದಂತೆ ಸೊಂಟ ಹಿಡಿದುಕೊಂಡರೆಂದು ದೂರಲಾಗಿದೆ.
ಇವರಿಂದ ತಪ್ಪಿಸಿಕೊಂಡ ಕೃಷ್ಣ ಭಟ್, ಜೋರಾಗಿ ಬೊಬ್ಬೆ ಹೊಡೆದಾಗ ಕೃಷ್ಣ ಭಟ್ ಅವರ ಕೈಯಲ್ಲಿದ್ದ ಟಾರ್ಚನ್ನು ತೆಗೆದುಕೊಂಡು ಇಬ್ಬರು ಅಪರಿಚಿತರು ಅಲ್ಲಿಂದ ಓಡಿ ಹೋದರು. ಇವರು ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.