ಕೇರಳ: ಚರ್ಚ್ ಆಫ್ ಸೌತ್ ಇಂಡಿಯಾದ ಪ್ರಧಾನ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ

Update: 2022-07-25 14:06 GMT
Photo: Facebook/@csimchkarakonam

ತಿರುವನಂತಪುರಂ: ಇಲ್ಲಿನ ಚರ್ಚ್ ಆಫ್ ಸೌತ್ ಇಂಡಿಯಾದ (ಸಿಎಸ್‌ಐ) ಪ್ರಧಾನ ಕಚೇರಿ ಸೇರಿದಂತೆ ಹಲವು ಆವರಣಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದ್ದು, ಚರ್ಚ್ ನಡೆಸುತ್ತಿರುವ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಕಪ್ಪುಹಣ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು newindianexpress.com ವರದಿ ಮಾಡಿದೆ.

ಚರ್ಚ್ ನಡೆಸುತ್ತಿರುವ ಡಾ. ಸೋಮರ್‌ವೆಲ್ ಮೆಮೋರಿಯಲ್ ಸಿಎಸ್‌ಐ ವೈದ್ಯಕೀಯ ಕಾಲೇಜು ಪ್ರವೇಶಕ್ಕಾಗಿ ಕ್ಯಾಪಿಟೇಶನ್ ಶುಲ್ಕವನ್ನು ಸ್ವೀಕರಿಸಿದೆ ಮತ್ತು ಇದರಲ್ಲಿ ಕಪ್ಪುಹಣ ಸೇರಿದೆ ಎಂಬ ಪ್ರಕರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ಸಿಎಸ್‌ಐ ದಕ್ಷಿಣ ಕೇರಳ ಬಿಷಪ್ ಧರ್ಮರಾಜ್ ರಸಾಲಂ, 2014ರ ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಬೆನೆಟ್ ಅಬ್ರಹಾಂ ಮತ್ತು ಸಿಎಸ್‌ಐ ಚರ್ಚ್ ಕಾರ್ಯದರ್ಶಿ ಪ್ರವೀಣ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ಈ ಹಿಂದೆ, ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಕ್ಯಾಪಿಟೇಶನ್ ಶುಲ್ಕವನ್ನು ಯಾವುದೇ ರಸೀದಿ ಅಥವಾ ಬಿಲ್‌ಗಳಿಲ್ಲದೆ ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗಿದೆ ಎಂಬ ಆರೋಪವನ್ನು ಚರ್ಚ್ ಎದುರಿಸಿತ್ತು. 2018 ರಲ್ಲಿ 11 ವಿದ್ಯಾರ್ಥಿಗಳು ನಕಲಿ ಸಮುದಾಯ ಪ್ರಮಾಣಪತ್ರಗಳನ್ನು ತಯಾರಿಸಿದ ನಂತರ ಕಾಲೇಜಿನ ಪ್ರವೇಶ ಪ್ರಕ್ರಿಯೆ ವಿವಾದದಲ್ಲಿ ಸಿಲುಕಿತ್ತು.

ಕಳೆದ ವರ್ಷ, ಕ್ಯಾಪಿಟೇಶನ್ ಶುಲ್ಕವನ್ನು ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನೀಡಲಿಲ್ಲ ಎಂಬ ಆರೋಪದ ಬಗ್ಗೆ ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ತನಿಖೆ ನಡೆಸಿತ್ತು. ಆಪಾದಿತ ಅಪರಾಧಕ್ಕೆ ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರೂ, ಈ ವರ್ಷದ ಆರಂಭದಲ್ಲಿ ನ್ಯಾಯಾಲಯವು ತನಿಖಾ ವರದಿಯನ್ನು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News