ಕಾಳಾವರ ಬಸ್ ನಿಲ್ದಾಣ ತಗಾದೆ: ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ
ಕುಂದಾಪುರ: ಇಲ್ಲಿನ ಕಾಳಾವರ ಜಂಕ್ಷನ್ ಬಳಿಯ ವಿವಾದಾತ್ಮಕ ತಂಗುದಾಣದ ವಿಚಾರವಾಗಿ ಚರ್ಚಿಸಲು ಶುಕ್ರವಾರ ಗ್ರಾಪಂ ವತಿಯಿಂದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯನ್ನು ಕರೆಯಲಾಗಿತ್ತು.
ತಾಲೂಕಿನ ಕೋಟೇಶ್ವರ- ಸೋಮೇಶ್ವರ ಸಂಪರ್ಕ ರಾಜ್ಯ ಹೆದ್ದಾರಿ ನಡುವಿನ ಕಾಳಾವಾರ ಸರ್ಕಲ್ ಬಳಿ ಈ ಹಿಂದಿದ್ದ ಬಸ್ ನಿಲ್ದಾಣವನ್ನು ಕಾಮಗಾರಿ ವೇಳೆ ತೆರವು ಮಾಡಿದ್ದು ಜನರು ಮೊದಲಿದ್ದ ಜಾಗದಲ್ಲಿ ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಿಕೊಂಡಿದ್ದರು. ಆದರೆ ಇದಕ್ಕೂ ಕೂಡ ಪರ- ವಿರೋಧ ವ್ಯಕ್ತವಾಗಿದ್ದು ಸೌಹಾರ್ಧಯುತವಾಗಿ ಪರಿಹಾರವಾಗಿರಲಿಲ್ಲ. ಈ ಹಿನ್ನೆಲೆ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ನಡೆಸಿದ್ದು ಅಲ್ಲಿಯೂ ಕೂಡ ತಾರ್ಕಿಕ ನಿರ್ಧಾರಕ್ಕೆ ಬರಲಾಗದೇ ಕೇವಲ ಚರ್ಚೆ, ಗೊಂದಲ- ಗೋಜಲುಗಳ ನಡುವೆ ಸಭೆ ಅಂತ್ಯವಾಯಿತು.
ಈ ವೇಳೆ ಮಾತನಾಡಿದ ಗ್ರಾಮಸ್ಥ ಮೋಹನಚಂದ್ರ ಕಾಳಾವರ್, ರಸ್ತೆ ನಿರ್ಮಾಣದ ವೇಳೆ ನಿಯಮಾನುಸಾರ ಮಾಡಿದ್ದರೆ ಇದೆಲ್ಲಾ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಬಸ್ ನಿಲ್ದಾಣದ ವಿಚಾರದಲ್ಲಿ ಊರಿನ ಶಾಂತಿ ಸುವ್ಯವಸ್ಥೆ ಹಾಳಾಗಿದ್ದಕ್ಕೆ ಹೊಣೆಗಾರರು ಯಾರು? ಈಗಿರುವ ತಾತ್ಕಾಲಿಕ ನಿಲ್ದಾಣ ಜಾಗ ವಿಚಾರದಲ್ಲಿ ಆಕ್ಷೇಪಣೆ ಅರ್ಜಿಯು ಸಲ್ಲಿಸಲಾಗಿದೆ ಎಂದರು.
ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ ಹರ್ಷವರ್ಧನ್ ಸಭೆಯಲ್ಲಿ ಮಾತ ನಾಡಿ, ಬಸ್ ನಿಲ್ದಾಣ ವಿಚಾರ ಹಳೆ ಜಾಗದಲ್ಲಿ ಮಾಡಲು ಬೇಡಿಕೆಯಿದ್ದು ಇಂಜಕ್ಷನ್ ಆರ್ಡರ್ ಇರುವುದರಿಂದ ಕಾನೂನು ಸಲಹೆ ಪಡೆದು ಮುಂದು ವರೆಯದೇ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಎಲ್ಲಿ ನಿಲ್ದಾಣವಾಗ ಬೇಕೆಂದು ಗ್ರಾ.ಪಂ ಹಾಗೂ ಸಾರ್ವಜನಿಕರು ಒಮ್ಮತದ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಸುಸಜ್ಜಿತ ಬಸ್ ನಿಲ್ದಾಣ ಮಾಡಿಕೊಡಬೇಕು ಹಾಗೂ ಅಲ್ಲಿಯವರೆಗೆ ತಾತ್ಕಾಲಿಕ ಬಸ್ ನಿಲ್ದಾಣ ತೆರವು ಮಾಡಬಾರದೆಂದು ಸ್ಥಳೀಯರ ಪರವಾಗಿ ಸತೀಶ್ ಕಾಳಾವರ, ಸುಧೀರ್ ಜಿ. ಕಾಳಾವರ, ಶ್ರೀನಿವಾಸ್, ರಘುರಾಮ್ ಒತ್ತಾಯಿಸಿದರು. ಈ ವೇಳೆ ಗೊಂದಲದ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಹಾಗೂ ಸ್ಥಳೀಯ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.
ಕಾಳಾವರ ಗ್ರಾ.ಪಂ ಅಧ್ಯಕ್ಷೆ ಆಶಲತಾ ಶೆಟ್ಟಿ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರ ನಾವಡ, ಪಿಡಿಓ ಪಾಡುರಂಗ ಶೇಟ್, ಸದಸ್ಯರಾದ ರವಿರಾಜ್ ಶೆಟ್ಟಿ, ಚಂದ್ರ ಪೂಜಾರಿ ಕಾಳಾವಾರ, ರಮೇಶ್ ಶೆಟ್ಟಿ ವಕ್ವಾಡಿ, ಸುಪ್ರೀತಾ ಇದ್ದರು. ತಾ.ಪಂ ಮಾಜಿ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಕಾಳಾವರ, ಶಶಿಕಲಾ, ಕಾಳಾವರ ಗ್ರಾ.ಪಂ ಮಾಜಿ ಸದಸ್ಯರಾದ ಸುರೇಶ್, ಜಯಲಕ್ಷ್ಮಿ ಉಪಸ್ಥಿತರಿದ್ದರು.