×
Ad

ಪಯಶ್ಶಿ ಉಸ್ತಾದ್ ನಿಧನ

Update: 2022-07-30 20:25 IST

ಮಂಗಳೂರು,ಜು.30: ಕೇರಳದ ಮುಸ್ಲಿಂ ಜಮಾಅತ್ ನಾಯಕ, ವಾಗ್ಮಿ, ವಿದ್ವಾಂಸ ಅಬ್ದುಲ್ಲತೀಫ್ ಸಅದಿ ಪಯಶ್ಶಿ (60) ಶನಿವಾರ ಹೃದಯಾಘಾತದಿಂದ ನಿಧನರಾದರು.

ಸಿರಾಜ್ ದಿನಪತ್ರಿಕೆಯ ಪ್ರಾದೇಶಿಕ ವ್ಯವಸ್ಥಾಪಕರಾಗಿದ್ದ ಕೆ.ಎಂ.ಬಶೀರ್ ಅವರನ್ನು ತಿರುವನಂತಪುರದಲ್ಲಿ ಕಾರು ಢಿಕ್ಕಿ ಹೊಡೆಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿಯೊಬ್ಬರನ್ನು ಆಲಪ್ಪುಯ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿದ ಕೇರಳ ಸರಕಾರದ ಕ್ರಮವನ್ನು ಖಂಡಿಸಿ ಸುನ್ನಿ ಸಂಘಟನೆಗಳು ಕೇರಳದ ಕಣ್ಣೂರಿನಲ್ಲಿ ಶನಿವಾರ ನಡಸಿದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಪ್ರಮುಖ ಭಾಷಣಗೈದು ಮರಳುವ ಮಧ್ಯೆ ಎದೆನೋವು ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.

ಕೇರಳ ರಾಜ್ಯದ ಎಸೆಸ್ಸೆಫ್, ಎಸ್‌ವೈಸ್, ಮುಸ್ಲಿಂ ಜಮಾಅತ್, ಜಂಇಯ್ಯತುಲ್ ಉಲಮಾ ಮುಂತಾದ ಸಂಘಟನೆಗಳ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಲ್ಪಟ್ಟಿದ್ದ ಅವರು ದೇಶ ವಿದೇಶಗಳಲ್ಲಿ ಪ್ರಸಿದ್ದರಾಗಿದ್ದರು. ಕೊಡಗು ಜಿಲ್ಲೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದರು.

ಅವರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ರವಿವಾರ ಬೆಳಗ್ಗೆ 8ಕ್ಕೆ ಪಯಶ್ಶಿ ಜುಮಾ ಮಸೀದಿಯ ಖಬರಸ್ತಾನದಲ್ಲಿ ದಫನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಬ್ದುಲ್ಲತೀಫ್ ಸಅದಿ ಪಯಶ್ಶಿ ಅವರ ನಿಧನದಿಂದ ಸುನ್ನೀ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ. ತನ್ನ ಆಕರ್ಷಕ ಭಾಷಣದಿಂದ ಸಮುದಾಯದ ಲಕ್ಷಾಂತರ ಮಂದಿಗೆ ಧರ್ಮದ ಸಂದೇಶ ತಲುಪಿಸುತ್ತಿದ್ದ ಅವರ ವಿದಾಯದಿಂದ ಸುನ್ನೀ ಚಳವಳಿಯು ಅತ್ಯಂತ ಬಲಿಷ್ಠ ಸಾರಥಿಯೊಬ್ಬರನ್ನು ಕಳೆದು ಕೊಂಡಂತಾಗಿದೆ ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈಎಸ್) ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ತನ್ನ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News