ಕಾಮನ್ ವೆಲ್ತ್ ಗೇಮ್ಸ್ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಕುಂದಾಪುರದ ಗುರುರಾಜ್ ಪೂಜಾರಿ

Update: 2022-07-30 17:12 GMT
ಗುರುರಾಜ್ ಪೂಜಾರಿ (Photo: Twitter/@ianuragthakur)

ಕುಂದಾಪುರ, ಜು.30: 2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿಪದಕ ಪಡೆದು ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಕುಂದಾಪುರ ತಾಲೂಕಿನ ಕುಗ್ರಾಮವಾದ ಚಿತ್ತೂರು ಗ್ರಾಮದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ, ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್ ವೆಲ್ತ್-2022 ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿ ಮತ್ತೊಂದು ಮಹತ್ತರ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ಬರ್ಮಿಂಗ್ ಹ್ಯಾಮ್‌ನಲ್ಲಿ ಶುಕ್ರವಾರ ಆರಂಭವಾದ ಕಾಮನ್ ವೆಲ್ತ್ ಗೇಮ್ಸ್-2022ರಲ್ಲಿ ಭಾರತೀಯ ವೇಟ್ ಲಿಫ್ಟರ್‌ಗಳ ತಂಡ ಪಾಲ್ಗೊಂಡಿದ್ದು ಗುರುರಾಜ್ ಕಂಚು ಪದಕ ಗೆಲ್ಲವು ಮೂಲಕ ಉಡುಪಿ ಜಿಲ್ಲೆ ಕೀರ್ತಿ ಪಾತಕೆ ಹಾರಿಸಿದ್ದಾರೆ. ಗುರುರಾಜ್ ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದು, ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಗುರುರಾಜ್ ಒಟ್ಟು 249 ಕೆಜಿ(111+138) ಭಾರ ಎತ್ತಿ ಬೆಳ್ಳಿಯ ಪದಕ ಗೆದ್ದಿದ್ದಲ್ಲದೆ, ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಸಮಗಟ್ಟಿದರು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು, ಕಂಚಿನ ಪದಕ ಒಲಿಸಿಕೊಳ್ಳುವ ಮೂಲಕ ಎರಡನೇ ಬಾರಿ ದೇಶಕ್ಕಾಗಿ ಪದಕ ತಂದಿದ್ದಾರೆ.

ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶವಾದ ಚಿತ್ತೂರು ಎಂಬಲ್ಲಿನ ಗುರುರಾಜ್ ಕಡು ಬಡತನದಲ್ಲಿ ಬೆಳೆದು, ಅಂತಾ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆಯುವಲ್ಲಿ ಗುರುರಾಜ್ ಕಠಿಣ ಸವಾಲು ಎದುರಿಸಿದ್ದಾರೆ. ವೇಟ್ ಲಿಫ್ಟಿಂಗ್ ಆಸಕ್ತಿ ಬೆಳೆಸಿಕೊಂಡು, ವಿಶ್ವ ಮಟ್ಟದ ಲಿಫ್ಟರ್ ಗುರುರಾಜ್ ಬೆಳೆದಿರುವುದು ಅವರ ಆಸಕ್ತಿ ಹಾಗೂ ಶೃದ್ಧೆಯಿಂದ ಸಾಧ್ಯವಾಗಿದೆ ಎಂದು ಕುಟುಂಬಿಕರು ಹೇಳುತ್ತಾರೆ.

56 ಕೆಜಿ ವಿಭಾಗದಲ್ಲಿ 2016ರಲ್ಲಿ ಮಲೇಶ್ಯಾದಲ್ಲಿ ಕಾಮನ್ವೆಲ್ತ್ ಚಾಂಪಿಯನ್ ಶಿಪ್, 2017ರಲ್ಲಿ ಆಸ್ಟ್ರೇಲಿಯದಲ್ಲಿ ಚಾಂಪಿಯನ್ ಶಿಪ್, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದು, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ, ಕಳೆದ ವರ್ಷ 61 ಕೆಜಿ ವಿಭಾಗದಲ್ಲಿ ಉಜ್ಜೇಕಿಸ್ತಾನ್‌ನಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 2018ರಲ್ಲಿ ರಾಜ್ಯ ಸರಕಾರ ಇವರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

ಗುರುರಾಜ್ ಮನೆಯಲ್ಲಿ ಸಂಭ್ರಮ

ಕಾಮನ್ ವೆಲ್ತ್-2022 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡ ಗುರುರಾಜ್ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ. ಮಗ ಪದಕ ಗೆದ್ದಿರಿವುದು ನಮಗೆ ಸಂತೋಷ ತಂದರೂ ಗುರುವಿಗೆ ಸಮಾಧಾನ ತಂದಿರಲಿಕ್ಕಿಲ್ಲ. ಚಿನ್ನ ಗೆಲ್ಲಬೇಕು ಎಂಬುದು ಗುರು ಕನಸಾಗಿತ್ತು. ಪದೇ ಪದೇ ಗಾಯಕ್ಕೆ ಒಳಗಾಗುತ್ತಿದ್ದು, ಇಂಗ್ಲೆಂಡ್‌ಗೆ ಹೋದ ಮೇಲೂ ಕಾಲು, ಕೈಗೆ ಗಾಯ ಮಾಡಿಕೊಂಡಿದ್ದ. ಸ್ಪರ್ಧೆ ನಾಲ್ಕು ದಿನ ಮುನ್ನಾ ಗುರು ಜ್ವರದಿಂದ ನರಳುತ್ತಿದ್ದು, ಚಿನ್ನ ತಪ್ಪಲು ಕಾರಣವಾಯಿತೋ ಎನೋ. ಮಗ ದೇಶಕ್ಕಾಗಿ ಪದಕ ತಂದಿರುವುದು ಹೆಮ್ಮೆಯಾಗಿದ್ದು, ಗುರುರಾಜ್ ನನ್ನ ಮಗ ಎನ್ನೋದಕ್ಕೆ ಹೆಮ್ಮೆಯಾಗುತ್ತದೆ ಎಂದು ಗುರುರಾಜ್ ತಂದೆ ಮಹಾಬಲ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾರು ಚಾಲಕನ ಮಗನ ಸಾಧನೆ

ಕುಂದಾಪುರ ತಾಲೂಕು ಚಿತ್ತೂರು ಗ್ರಾಮ ಜಡ್ಡು ಕಾರು ಚಾಲಕ ಮಹಾಬಲ ಪೂಜಾರಿ, ಪದ್ದು ದಂಪತಿ ಆರು ಮ್ಕಳಲ್ಲಿ ಗುರುರಾಜ್ ಐದನೆಯವರು.

ಪ್ರಾಥಮಿಕ ಶಿಕ್ಷಣ ವಂಡ್ಸೆ ಸರಕಾರಿ ಶಾಲೆಯಲ್ಲಿ ಪಡೆದು, ಹೈಸ್ಕೂಲ್, ಪಿಯು ತನಕ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳ ಪಡೆದ ನಂತರ ಉಜರೆ ಎಸ್‌ಡಿಎಂ ಕಾಲೇಜ್‌ನಲ್ಲಿ ಓದಿದರು.ಕೊಲ್ಲೂರು ಶ್ರೀಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಗುರುರಾಜ್‌ಗೆ ದೈಹಿಕ ಶಿಕ್ಷಿಕ ಸುಕೇಶ್ ಶೆಟ್ಟಿ ತರಬೇತಿ ನೀಡಿದ್ದರು. ಉಜಿರೆ ಎಸ್‌ಡಿಎಂ ಕಾಲೇಜ್ ಎಂ.ರಾಜೇಂದ್ರ ಪ್ರಸಾದ್ ವೆಯ್ಟ್ ಲಿಫ್ಟಿಂಗ್ ತರಬೇತಿ ನೀಡಿದರೆ, ಎಸ್‌ಡಿಎಂ ಕ್ರೀಡಾ ತರಬೇತಿ ಸಂಸ್ಥೆ ಮೂಲಕ ನಿರಂತರ ತರಬೇತಿ ಪಡೆಯುತ್ತಿದ್ದರು

ಇಂಗ್ಲೆಂಡ್ ನಡೆದ ಕಾಮನ್‌ವೆಲ್ತ್ ವೈಟ್ಲಿಪ್ಟ್ ಸ್ಪರ್ಧೆಯಲ್ಲಿ ಗುರುರಾಜ ಚಿನ್ನದ ಮೇಲೆ ಕಣ್ಣಿಟ್ಟು ಸ್ಪರ್ಧಿಸಿದ್ದು, ಈ ಬಾರಿ 61 ಕೆಜಿ ವಿಭಾಗ ಅವನ ಆಯ್ಕೆ ಮಾಡಿಕೊಂಡು ಸ್ಪರ್ಧೆ ಆಗಿತ್ತು. ಕ್ಯಾಟಗರಿ ಬದಲಾಗಿದ್ದು, ಗುರು ದೇಹದ ತೂಕ ಕೂಡಾ ಹೆಚ್ಚಿದ್ದು, ಚಿನ್ನದ ಪದಕ ಪಡೆಯುವಲ್ಲಿ ಅಡ್ಡಿಯಾಗಿರುವ ಸಾಧ್ಯತೆ ಕೂಡಾ ಇತ್ತು. ಒಟ್ಟಾರೆ ಗುರು ಕಂಚು ಗೆಲ್ಲವ ಮೂಲಕ ಪದಕ ಆಸೆ ಈಡೇರಿಸಿಕೊಂಡುದ್ದು, ನಮ್ಮೂರಿಗಲ್ಲದೆ ಜಿಲ್ಲೆಗೂ ಹೆಮ್ಮಯ ಪಡುವಂತೆ ಮಾಡಿದ್ದಾನೆ.

-ಸುಖೇಶ್ ಶೆಟ್ಟಿ, ಆರಂಭದಲ್ಲಿ ಗುರುರಾಜ್‌ಗೆ ತರಬೇತಿ ನೀಡಿದ ಕೊಲ್ಲೂರು ಪ್ರೌಢಶಾಲೆ ದೈಹಿಕ ಶಿಕ್ಷಕ

ಗುರುರಾಜ್ ಪೂಜಾರಿಯವರ ಸಾಧನೆ ಖುಷಿ ನೀಡಿದೆ. ಕುಂದಾಪುರಕ್ಕೆ ಬಂದಾಗ ನಮ್ಮ ಹರ್ಕ್ಯೂಲಸ್ ಜಿಮ್
 ಕೇಂದ್ರಕ್ಕೆ ಭೇಟಿ ನೀಡಿ ವ್ಯಾಯಾಮ ಮಾಡುತ್ತಿದ್ದರು. ಉತ್ತಮ ಸಾಧನೆ ಮಾಡುತ್ತಿರುವ ಲೈವ್ ನೋಡಿದೆವು. ಪದಕ ಗೆದ್ದಿದ್ದನ್ನು ಕಂಡು ನಮ್ಮ ಜಿಮ್ ಸೆಂಟರಿನಲ್ಲಿ ಸಂಭ್ರಮಿಸಿದೆವು.

- ಸತೀಶ್ ಖಾರ್ವಿ ಕುಂದಾಪುರ(ಅಂತರರಾಷ್ಟ್ರೀಯ ವೇಟ್ ಲಿಫ್ಟಿಂಗ್ ಕ್ರೀಡಾಪಟು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News