ಕುಂದಾಪುರ: ತೀರ್ಥಯಾತ್ರೆಗೆ ಹೋದವರ ಮನೆಯಲ್ಲಿ ಕಳ್ಳತನ
Update: 2022-08-06 14:50 GMT
ಕುಂದಾಪುರ, ಆ.6: ಕುಂಭಾಶಿ ಗ್ರಾಮದ ವಿನಾಯಕ ನಗರ ಮುಖ್ಯರಸ್ತೆಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ವಿನಾಯಕ ನಗರದ ಮಂಜುನಾಥ ಜೋಗಿ ಎಂಬವರು ಜು.29ರಂದು ರಾತ್ರಿ ಕುಟುಂಬ ಸಮೇತರಾಗಿ ಪಂಡರಿಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೆರಳಿ ತೀರ್ಥಯಾತ್ರೆ ಮುಗಿಸಿ ಆ.೫ರಂದು ಬೆಳಗ್ಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಹಿಂಬದಿಯ ಬಾಗಿಲು ಮತ್ತು ಅಡುಗೆ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು, ಕಪಾಟಿನಲ್ಲಿದ್ದ ಚಿನ್ನದ ಬ್ರಾಸಲೇಟ್, ಪೆಂಡೇಂಟ್ ಇರುವ ರೋಪ್ ಚೈನ್, 2 ಚಿನ್ನದ ಉಂಗುರ ಸೇರಿದಂತೆ ಒಟ್ಟು 27 ಗ್ರಾಂ ತೂಕದ ಚಿನ್ನಾಭರಣ ಹಾಗೂ 13,500 ರೂ. ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.