ಅಧಿಕೃತ ಪುಣ್ಯಕ್ಷೇತ್ರವಾಗಿ ಕಲ್ಮಾಡಿ ವೆಲಂಕಣಿ ಮಾತೆ ಕೇಂದ್ರ; ಉಡುಪಿ ಧರ್ಮಪ್ರಾಂತದ ಬಿಷಪ್ ಅ.ವಂ.ಡಾ.ಲೋಬೊ ಘೋಷಣೆ

Update: 2022-08-15 14:07 GMT

ಉಡುಪಿ : ವಿಶ್ವ ಪ್ರಸಿದ್ದ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತಕ್ಕೆ ಒಳಪಟ್ಟ ಅಧಿಕೃತ ಪುಣ್ಯಕ್ಷೇತ್ರವೆಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ. ಡಾ. ಜೆರಾಲ್ಡ್ ಐಸಾಕ್ ಲೋಬೋ ಆ.15ರಂದು ವಿದ್ಯುಕ್ತವಾಗಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಘೋಷಿಸಿದ್ದಾರೆ.

ಇದೇ ವೇಳೆ ಉಡುಪಿ ಧರ್ಮಪ್ರಾಂತದ ಕುಲಪತಿಗಳಾದ ವಂ. ಸ್ಟ್ಯಾನಿ ಬಿ ಲೋಬೋ ಪುಣ್ಯಕ್ಷೇತ್ರದ ಘೋಷಣಾ ಪತ್ರವನ್ನು ವಾಚಿಸಿದರು. ಈ ಸಂದರ್ಭದಲ್ಲಿ ಉಡುಪಿ ಬಿಷಪ್ ಡಾ. ಜೆರಾಲ್ಡ್ ಲೋಬೋ ದಿವ್ಯ ಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ್ಯ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ್ಯ ಡಾ.ಫ್ರಾನ್ಸಿಸ್ ಸೆರಾವೋ, ಬಳ್ಳಾರಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ್ಯ ಡಾ.ಹೆನ್ರಿ ಡಿಸೋಜ, ಕಲ್ಬುರ್ಗಿ ಧರ್ಮಪ್ರಾಂತದ ಧರ್ಮಾಧ್ಯಕ್ಷ್ಯ ಡಾ.ರಾಬರ್ಟ್ ಮಿರಾಂದಾ, ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಲಾರೆನ್ಸ್ ಮುಕ್ಕುಜಿ, ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಾಯಿಲ್, ಉಡುಪಿ ಧರ್ಮಪ್ರಾಂತದ ಕುಲಪತಿ ಸ್ಟಾನಿ ಬಿ ಲೋಬೋ, ವಂ. ಚಾರ್ಲ್ಸ್ ಮೆನೇಜಸ್, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದ ಪ್ರಧಾನ ಧರ್ಮಗುರು ವಂ. ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರು ವಂ.ಮೆಲ್ವಿಲ್ ರೊಯ್ ಲೋಬೋ ಮತ್ತು ಧರ್ಮಪ್ರಾಂತದ ಇತರ ಧರ್ಮಗುರುಗಳು ಕಲ್ಮಾಡಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದರೊಂದಿಗೆ ಸ್ಟೆಲ್ಲಾ ಮಾರಿಸ್ ದೇವಾಲಯದ ಸುವರ್ಣ ಮಹೋತ್ಸವದ ಸನ್ಮಾನ ಸಮಾರಂಭ ಕೂಡಾ ನಡೆಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ಕಳೆದ 50 ವರ್ಷಗಳಲ್ಲಿ ಸೇವೆ ಸಲ್ಲಿಸಿದ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷ್ಯ ಕಾರ್ಯದರ್ಶಿ ಮತ್ತು ವಾರ್ಡಿನ ಗುರಿಕಾರರನ್ನು ಸನ್ಮಾನಿಸಲಾಯಿತು. 

ಸುವರ್ಣ ಮಹೋತ್ಸವದ ಶಾಶ್ವತ ಯೋಜನೆಯಾಗಿ ಆರೋಗ್ಯ ನಿಧಿಗೆ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೋ ಚಾಲನೆ ನೀಡಿದರು. ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಪೀಟರ್ ಪೌಲ್ ಸಲ್ಡಾನ ಬಿಡುಗಡೆಗೊಳಿಸಿದರು. 

ಪ್ರಧಾನ ಧರ್ಮಗುರು ವಂ.ಬ್ಯಾಪ್ಟಿಸ್ಟ್ ಮಿನೇಜಸ್ ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ ವಂದಿಸಿದರು. ಹೆನ್ರಿ ಪೂರ್ಟಾಡೋ ಮತ್ತು ಜೆನವಿವ್ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. 

ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸ, ೨೦ ಆಯೋಗದ ಸಂಯೋಜಕಿ ಐಡಾ ಡಿಸೋಜಾ, ಸುವರ್ಣ ಮಹೋತ್ಸವ ಸಮಿತಿಯ ಸಂಯೋಜಕ ಸಂದೀಪ್ ಅಂದ್ರಾದೆ, ಪಾಲನಾ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News