ಕುಂದಾಪುರ; ಶಂಕಿತ ನಕ್ಸಲರ ಪ್ರಕರಣಗಳು ಹೆಚ್ಚುವರಿ ನ್ಯಾಯಾಲಯಕ್ಕೆ ವರ್ಗ

Update: 2022-08-17 16:02 GMT

ಕುಂದಾಪುರ, ಆ.17: ಕೇರಳದಲ್ಲಿ ಬಂಧಿತರಾದ ಶಂಕಿತ ನಕ್ಸಲ್‌ವಾದಿಗಳಾದ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಪೊಲೀಸರು ಬುಧವಾರ ಕುಂದಾಪುರದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ (ಕಿರಿಯ ವಿಭಾಗ) ಹಾಜರುಪಡಿಸಿದರು.

ಇದೇ ವೇಳೆ ಇವರಿಗೆ ಸಂಬಂಧಿಸಿದ ಶಂಕರನಾರಾಯಣ ಹಾಗೂ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಟ್ಟು 7 ಪ್ರಕರಣಗಳನ್ನು ಕುಂದಾಪುರ ದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಿ ನ್ಯಾಯಾಧೀಶ ಧನೇಶ್ ಮುಗಳಿ ಆದೇಶ ನೀಡಿದರು.

ಈ ಇಬ್ಬರು ಶಂಕಿತ ನಕ್ಸಲರನ್ನು ಕರ್ನಾಟಕ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದು ಈ ವೇಳೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2003, 2004, 2005ರಲ್ಲಿನ ಮೂರು, 2006ರ ಒಟ್ಟು 6 ಪ್ರಕರಣ ಹಾಗೂ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ 2005ರ ಒಂದು ಪ್ರಕರಣದಲ್ಲಿ ಮಹಜರು ಮೊದಲಾದ ತನಿಖಾ ಪ್ರಕ್ರಿಯೆ ನಡೆಸಿ ನ್ಯಾಯಾ ಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.

ಅದರಂತೆಯೇ ಈ ಏಳು ಪ್ರಕರಣಗಳು ಸೆಶನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಗೊಂಡಿದೆ. ಅಲ್ಲದೆ ಇಬ್ಬರನ್ನೂ ಕೇರಳದ ತ್ರಿಶೂರ್ ಜೈಲಿಗೆ ರವಾನಿಸಲು ಆದೇಶ ನೀಡಲಾಗಿದೆ. ಶಂಕಿತ ನಕ್ಸಲರಾದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರ ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಕರೆತಂದರು.

ಎ.ಎನ್.ಎಫ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಆರ್.ಎಸ್.ಐ ಶ್ರೀಕಾಂತ್, ಶಂಕರನಾರಾಯಣ ಎಸ್ಸೈ ಸುದರ್ಶನ, ಕೊಲ್ಲೂರು ಎಸ್ಸೈ ಈರಣ್ಣ ಶಿರಗುಪ್ಪಿ  ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News