ಅಯೋಧ್ಯೆ: ದೇವಳದ ಆದಾಯ ಕುರಿತಂತೆ ಸಾಧುಗಳ ನಡುವೆ ಸಂಘರ್ಷ

Update: 2022-08-18 12:52 GMT

ಅಯೋಧ್ಯೆ: ದೇವಳದ ಆದಾಯ ಹಂಚಿಕೆ ವಿಚಾರವಾಗಿ ಸಾಧುಗಳ ಎರಡು ಗುಂಪುಗಳ ನಡುವೆ ಅಯೋಧ್ಯೆಯಲ್ಲಿ(Ayodhya) ಇಂದು ಬೆಳಿಗ್ಗೆ ಸಂಘರ್ಷ ನಡೆದಿದೆ.

ನಗರದ ಕೋತ್ವಾಲಿ ಠಾಣೆಯ ವ್ಯಾಪ್ತಿಯಲ್ಲಿ ಬರುವ ನರಸಿಂಹ ದೇವಳದಲ್ಲಿ(Narasimha Temple) ಮುಂಜಾನೆ 4 ಗಂಟೆ ವೇಳೆ ಈ ಘಟನೆ ನಡೆದಾಗ ಸ್ಫೋಟದಂತಹ ಸದ್ದು ಕೇಳಿ ಸ್ವಲ್ಪ ಹೊತ್ತು ಆತಂಕಕ್ಕೆ ಕಾರಣವಾಯಿತು ಎಂದು ndtv.com ವರದಿಯಲ್ಲಿ ತಿಳಿಸಿದೆ.

ದೇವಸ್ಥಾನದ ಮಹಂತ ಮತ್ತು ಇತರ ಅರ್ಚಕರ ನಡುವೆ ದೇವಳಕ್ಕೆ ಬರುವ ಕಾಣಿಕೆ ಮತ್ತು ಆದಾಯ ಹಂಚಿಕೆ ನಡುವೆ ಒಂದೆರಡು ತಿಂಗಳುಗಳಿಂದ ಕಲಹ ಏರ್ಪಟ್ಟಿತ್ತು. ಸಂಘರ್ಷದಲ್ಲಿ ತೊಡಗಿದ ಎರಡೂ ಕಡೆಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ವೇಳೆ  ಆತಂಕ ಸೃಷ್ಟಿಸಲು ದೊಡ್ಡ ಸದ್ದಿನ ಪಟಾಕಿಗಳನ್ನು ಸಿಡಿಸಲಾಗಿತ್ತು ಯಾವುದೇ ಸ್ಫೋಟಕ ಸಿಡಿದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತನಿಖೆ ಮುಂದುವರಿದಿದೆ ಆದರೆ ಎಫ್‍ಐಆರ್ ಇನ್ನೂ ದಾಖಲಾಗಿಲ್ಲ ಎಂದು ತಿಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News