ಭಟ್ಕಳ: ಬಾಲಕನ ಅಪಹರಣ; ದೂರು ದಾಖಲು
ಭಟ್ಕಳ: ಆಝಾದ್ ನಗರದಲ್ಲಿ ರಾತ್ರಿ ಎಂಟು ಗಂಟೆಯ ಸುಮಾರಿಗೆ ಎಂಟು ವರ್ಷದ ಬಾಲಕನನ್ನು ಅಪಹರಿದ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕ ಅಲಿ ಸಾದಾ (8) ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದ್ದು, ಅದರಲ್ಲಿದ್ದ ವ್ಯಕ್ತಿಯೋರ್ವ ಇಳಿದು ಬಾಲಕನನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿದ್ದು, ಬಳಿಕ ವಾಹನ ಪರಾರಿಯಾಗಿದೆ.
ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಮಾತನಾಡಿ ನಾವು ನಮ್ಮ ಪ್ರಯತ್ನವನ್ನು ಮಾಡುತ್ತಿದ್ದೇವೆ, ಶೀಘ್ರದಲ್ಲೇ ನಾವು ಅಪಹರಣಕಾರರನ್ನು ಬಂಧಿಸುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.