ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳು ಮತ್ತೆ ಜೈಲು ಸೇರುವವರೆಗೆ ಹಿಂತಿರುಗುವುದಿಲ್ಲ ಎಂದು ಹಳ್ಳಿ ತೊರೆದ ಮುಸ್ಲಿಮರು

Update: 2022-08-26 11:34 GMT

ಹೊಸದಿಲ್ಲಿ: ಬಿಲ್ಕಿಸ್ ಬಾನು (Bilkis Bano) ಪ್ರಕರಣದ 11 ಅಪರಾಧಿಗಳನ್ನು ಗುಜರಾತ್(Gujarat) ಸರಕಾರವು ಬಿಡುಗಡೆ ಮಾಡಿದ ನಂತರ ರಂಧಿಕ್‌ಪುರ(Randhikpur) ಗ್ರಾಮದ ಮುಸ್ಲಿಮರು ತಮ್ಮ ಮನೆಗಳನ್ನು ತೊರೆದು ಬೇರೆ ಗ್ರಾಮಕ್ಕೆ ತೆರಳುತ್ತಿದ್ದಾರೆ ಹಾಗೂ ಅತ್ಯಾಚಾರಿಗಳು ಮತ್ತೆ ಜೈಲಿಗೆ ಹೋದ ನಂತರವೇ ತಮ್ಮ ಗ್ರಾಮಕ್ಕೆ ಹಿಂತಿರುಗುವುದಾಗಿ ಅವರು ಹೇಳಿದ್ದಾರೆ. ಸದ್ಯಕ್ಕೆ ಈ ಗ್ರಾಮಸ್ಥರು ದೇವಗಢ್ ಬರಿಯಾಗೆ ವಲಸೆ ಹೋಗಿದ್ದಾರೆ ಎಂದು India Today ವರದಿ ಮಾಡಿದೆ.

ವಲಸೆ ಹೋಗಿರುವ ಗ್ರಾಮಸ್ಥರು ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡುವಂತೆ ಗುಜರಾತ್ ಸರಕಾರವನ್ನು ಒತ್ತಾಯಿಸಿದ್ದಾರೆ ಹಾಗೂ  ತಮ್ಮ ಗ್ರಾಮಕ್ಕೆ ಮರಳಲು ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.

ರಂಧಿಕ್‌ಪುರ ಗ್ರಾಮದ ಹಲವು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಈಗ ದೇವಗಡ ಬರಿಯಾದಲ್ಲಿ ವಾಸಿಸುತ್ತಿದ್ದಾರೆ. ಬಿಲ್ಕಿಸ್ ಬಾನು ಹಾಗೂ ಅವರ ಕುಟುಂಬ ಕೂಡ ದೇವಗಢ್ ಬರಿಯಾದಲ್ಲಿ ವಾಸಿಸುತ್ತಿದ್ದಾರೆ ಎಂದು India Today ವರದಿ ಮಾಡಿದೆ.

ಗ್ರಾಮಸ್ಥರಲ್ಲಿ ಒಬ್ಬರಾದ ಸಮೀರ್ ಘಾಚಿ ಅವರು ತಮ್ಮ 12 ಸದಸ್ಯರ ಸಂಪೂರ್ಣ ಕುಟುಂಬದೊಂದಿಗೆ ರಂಧಿಕ್‌ಪುರ ಗ್ರಾಮವನ್ನು ತೊರೆದು ದೇವಗಢ್ ಬರಿಯಾದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ವಲಸೆ ಹೋಗಿದ್ದಾರೆ.

ವಾಹನ ಮಾರಾಟದ ಕೆಲಸ ಮಾಡುತ್ತಿರುವ ಸಮೀರ್ ಘಾಚಿ ಮಾತನಾಡಿ, "ಆ 11 ಮಂದಿ ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಜೈಲಿನಿಂದ ಬಿಡುಗಡೆಯಾದ ಬಗ್ಗೆ ನಮಗೆ ಮೊದಲು ತಿಳಿದಿರಲಿಲ್ಲ. ಗ್ರಾಮಕ್ಕೆ ಮರಳಿದ ನಂತರ ಅವರು ಪಟಾಕಿ ಮತ್ತು ಸಂಗೀತದೊಂದಿಗೆ ಸಂಭ್ರಮಿಸಿದರು. ನಾವು ನಮ್ಮ ಗ್ರಾಮವನ್ನು ತೊರೆದು ಇಲ್ಲಿ ದೇವಗಢ್ ಬರಿಯಾಕ್ಕೆ ವಲಸೆ ಹೋಗಲು ನಿರ್ಧರಿಸಿದ್ದೇವೆ" ಎಂದರು.

"ಎಲ್ಲಾ 11 ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡಬೇಕು ಮತ್ತು ಬಿಲ್ಕಿಸ್ ಬಾನುಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾವು ದಾಹೋದ್ ಕಲೆಕ್ಟರ್‌ಗೆ ಪತ್ರ ಬರೆದಿದ್ದೇವೆ, ಅದು ಆಗದಿದ್ದರೆ, ನಾವು ನಮ್ಮ ಹಳ್ಳಿಗೆ ಹಿಂತಿರುಗುವುದಿಲ್ಲ" ಎಂದು ಸಮೀರ್ ಹೇಳಿದರು.

11 ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡಬೇಕು ಹಾಗೂ ಬಿಲ್ಕಿಸ್ ಬಾನುಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ 55 ಜನರು ಪತ್ರಕ್ಕೆ ಸಹಿ ಹಾಕಿ ದಾಹೋದ್ ಕಲೆಕ್ಟರ್‌ಗೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News