ರಣಬೀರ್- ಅಲಿಯಾ ಜೋಡಿ ಮಹಾಕಾಳ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಬಜರಂಗದಳ ಕಾರ್ಯಕರ್ತರು ತಡೆ

Update: 2022-09-07 11:55 GMT

ಉಜ್ಜಯಿನಿ: ಬಾಲಿವುಡ್ ತಾರಾ ಜೋಡಿಯಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮಧ್ಯಪ್ರದೇಶದ ಉಜ್ಜಯಿನಿಯ ಪುರಾಣ ಪ್ರಸಿದ್ಧ ಮಹಾಕಾಳ ದೇವಾಲಯ ಪ್ರವೇಶಿಸದಂತೆ ಬಜರಂಗದಳ ಕಾರ್ಯಕರ್ತರು ತಡೆದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.

ಗೋಮಾಂಸ ಭಕ್ಷಣೆ ಬಗೆಗೆ ಈ ಜೋಡಿ ನೀಡಿದೆ ಎನ್ನಲಾದ ಹೇಳಿಕೆ ಮತ್ತು "ಬ್ರಹ್ಮಾಸ್ತ್ರ" ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತರು ಈ ಜೋಡಿ ದೇವಾಲಯ ಪ್ರವೇಶಿಸದಂತೆ ತಡೆದರು ಎನ್ನಲಾಗಿದೆ.

ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದು, ದೇವಾಲಯ ಆವರಣದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಯಿತು ಎಂದು ಹೇಳಿದ್ದಾರೆ. ಲಾಠಿ ಪ್ರಹಾರದ ಹೊರತಾಗಿಯೂ ಪ್ರತಿಭಟನಾಕಾರರು ರಣಬೀರ್ ಮತ್ತು ಅಲಿಯಾ ಜೋಡಿ ದೇವಾಲಯ ಆವರಣ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಬಾಲಿವುಡ್ ಜೋಡಿ ದೇವಾಲಯ ದರ್ಶನಕ್ಕಾಗಿ ಆಗಮಿಸಿದಾಗ ಬಜರಂಗ ದಳ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗಿದರು. ಮಾಂಸಾಹಾರದಲ್ಲಿ ಮಟನ್, ಚಿಕನ್, ಗೋಮಾಂಸ ತನಗೆ ಅತ್ಯಂತ ಪ್ರಿಯ ಎಂದು ಕೆಲ ದಿನಗಳ ಹಿಂದೆ ರಣಬೀರ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ಪವಿತ್ರ ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ನಾಯಕ ಅಂಕಿತ್ ಚೌಬೆ ಹೇಳಿದ್ದಾರೆ.

ತಮ್ಮ ಬ್ರಹ್ಮಾಸ್ತ್ರ ಚಿತ್ರವನ್ನು ನೋಡಲು ಬಯಸುವವರು ನೋಡಲಿ; ಆಸಕ್ತಿ ಇಲ್ಲದವರು ನೋಡದಿದ್ದರೆ ಬೇಡ" ಎಂದೂ ಅಲಿಯಾ ಭಟ್ ಹೇಳಿದ್ದಾಗಿ ಅವರು ವಿವರಿಸಿದರು. ಪ್ರತಿಭಟನೆಯ ನಡುವೆಯೇ ಬ್ರಹ್ಮಸೂತ್ರ ಚಿತ್ರ ನಿರ್ದೇಶಕ ಅಯಾನ್ ಮುಖರ್ಜಿ ದೇವಾಲಯದಲ್ಲಿ ದರ್ಶನ ಪಡೆದರು ಎಂದು ಅರ್ಚಕ ಆಶೀಶ್ ಪೂಜಾರಿ ಹೇಳಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News