ಲೈಂಗಿಕ ಕಿರುಕುಳ: ಬಾಲಕನ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಯುವಕ

Update: 2022-09-23 02:14 GMT

ಭೋಪಾಲ್: ಲೈಂಗಿಕ ಕಿರುಕುಳ ನೀಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಹದಿನೈದು ವರ್ಷದ ಬಾಲಕನನ್ನು ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗ್ವಾಲಿಯರ್ ನಲ್ಲಿ ನಡೆದಿದೆ.‌

20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡು, ಸಾವಿಗೆ ಶರಣಾಗುವ ಮುನ್ನ ಬರೆದಿದ್ದ ಚೀಟಿಯಲ್ಲಿ ಹದಿನೈದು ವರ್ಷದ ಬಾಲಕ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಾಗೂ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಎಂದು ಬರೆದಿದ್ದ. ಆದರೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಆತ 15 ವರ್ಷದ ಬಾಲಕನನ್ನು ಕೊಂದಿರುವುದು ಇದೀಗ ಬೆಳಕಿಗೆ ಬಂದಿದ್ದು, ಮುಚ್ಚಿದ ಫ್ಯಾಕ್ಟರಿ ಜಾಗದಲ್ಲಿ ಬಾಲಕನ ಶವ ಪತ್ತೆಯಾಗಿದೆ.

ಆತ್ಮಹತ್ಯೆಗೆ ಶರಣಾಗುವ ಮುನ್ನ ಈ ವ್ಯಕ್ತಿ ಬಾಲಕನನ್ನು ಕೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 20 ವರ್ಷದ ಯುವಕನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮೇಕಪ್ ಕಲಾವಿದನಾಗಿದ್ದ ಯುವಕ ಬುಧವಾರ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನ ಮನೆಯಲ್ಲಿ ನಾಲ್ಕು ಪುಟಗಳ ಆತ್ಮಹತ್ಯೆ ಟಿಪ್ಪಣಿಯೂ ಸಿಕ್ಕಿತ್ತು. ತನಗಿಂತ ಐದು ವರ್ಷ ಕಿರಿಯ ಬಾಲಕನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆತನ ವಿರುದ್ಧ ಸೇಡು ತೀರಿಸಿಕೊಂಡಿದ್ದಾಗಿ ಪತ್ರದಲ್ಲಿ ಹೇಳಲಾಗಿತ್ತು.

"ನಾನು ಆಘಾತಕ್ಕೆ ಒಳಗಾಗಿದ್ದೇನೆ. ಆದರೆ ಯಾರೊಂದಿಗೂ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ನನಗಿಂತ ಕಿರಿಯ ಬಾಲಕ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದರೆ ನಂಬುವ ಸ್ಥಿತಿಯಲ್ಲಿಲ್ಲ. ದುಬಾರಿ ಉಡುಗೊರೆಗಳನ್ನು ಆಗ್ರಹಿಸುತ್ತಿದ್ದುದಲ್ಲದೇ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಹಾಕಿದ್ದ" ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ಉಲ್ಲೇಖವಿದೆ.

ಸಮಾಜದ ಭಯದಿಂದ ನಾನು ಆತನ ಬೇಡಿಕೆಗಳಿಗೆ ಒಪ್ಪಿಕೊಂಡು ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ದುಬಾರಿ ಸೈಕಲ್ ಕೊಡಿಸಿದ್ದೆ. ಆದರೆ ಈ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಾನು ಆತ್ಮಹತ್ಯೆಗೆ ಮುನ್ನ ಸೇಡು ತೀರಿಸಿಕೊಂಡಿದ್ದೇನೆ" ಎಂದು ವಿವರಿಸಲಾಗಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News