ಮಂಗಳೂರು: ಮೂವರು ಕಾಲೇಜು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಸುಖಾಂತ್ಯ

Update: 2022-09-24 07:32 GMT

ಮಂಗಳೂರು, ಸೆ.24: ನಗರದ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಇಂದು ಮಂಗಳೂರಿಗೆ ಆಗಮಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಕಾಲೇಜು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಾಧಾನಗೊಂಡಿದ್ದ ಈ ಮೂವರು ವಿದ್ಯಾರ್ಥಿನಿಯರು ಕಳೆದ ಬುಧವಾರ ಬೆಳಗ್ಗಿನ ಹೊತ್ತು ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದರು. ಅವರು ಹಾಸ್ಟೆಲ್‌ನಿಂದ ಹೊರಟು ಮಂಗಳೂರು ರೈಲ್ವೇ ಸ್ಟೇಷನ್‌ವರೆಗೆ ತೆರಳಿದ್ದ ಮಾಹಿತಿ ಲಭ್ಯವಾಗಿತ್ತು. ಅದರಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಜತೆ ಮಾತುಕತೆ ನಡೆಸಿ ಪೊಲೀಸ್ ಅಧಿಕಾರಿಗಳು ಮಕ್ಕಳ ಹುಡುಕಾಟ ನಡೆಸಿದ್ದರು. ನಿನ್ನೆ ತಮಿಳುನಾಡಿನ ಚೆನ್ನೈ ಬಳಿ ಅವರು ಪತ್ತೆಯಾಗಿದ್ದಾರೆ. ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಮಕ್ಕಳ ಶಿಕ್ಷಣದ ಮೇಲೆ ಪೋಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗಿ ಕಡಿಮೆ ಅಂಕ ಬಂದಾಗ ಮಕ್ಕಳು ಅದನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಒತ್ತಡದಿಂದ ಈ ಕಾರ್ಯ ಮಾಡಿದ್ದಾರೆ. ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಯ ಸಂಬಂಧಿಕರು ಚೆನ್ನೈಯಲ್ಲಿದ್ದು, ಅಲ್ಲಿಗೆಂದು ಅವರು ಜತೆಯಾಗಿ ತೆರಳಿದ್ದರು. ಅವರು ಮೂವರು ಎಂದೂ ಒಂಟಿಯಾಗಿ ಈ ರೀತಿ ಚೆನ್ನೈ ಆಗಲಿ ಅಥವಾ ಹೊರಗಡೆ ಆಗಲಿ ಪ್ರಯಾಣಿಸಿದವರಲ್ಲ. ಮಕ್ಕಳಲ್ಲಿ ಮೊಬೈಲ್ ಫೋನ್ ಆಗಲಿ, ಇತರ ಯಾವುದೇ ರೀತಿಯ ಮಾಹಿತಿಯೂ ಇರದೆ ಬಸ್ಸು ಮತ್ತು ರೈಲಿನಲ್ಲಿ ಪ್ರಯಾಣಿಸುತ್ತಾ ವಿಳಾಸ ಕೇಳಿಕೊಂಡು ಸಾಗಿದ್ದಾರೆ. ಪೋಷಕರು ತಮಗೆ ಖರ್ಚಿಗೆ ನೀಡಿದ್ದ ಹಣವನ್ನೇ ತಮ್ಮ ಪ್ರಯಾಣಕ್ಕೆ ಬಳಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಅವರ ಪೋಷಕರು ಹಾಗೂ ಕಾಲೇಜಿನ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ ಮಕ್ಕಳ ಜತೆ ಸಮಾಲೋಚನೆ ನಡೆಸುವಂತೆ ತಿಳಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್‌ಗಳಲ್ಲಿ ಇರುವ ಮಕ್ಕಳಿಗೆ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಮಾತ್ರವೇ ಪೋಷಕರ ಭೇಟಿಗೆ ಅವಕಾಶ ನೀಡಲಾಗುತ್ತದೆ. ಕನಿಷ್ಠ ಸಮಯದಲ್ಲಿ ಮಕ್ಕಳಿಗೆ ಪೋಷಕರ ಜತೆ ಇರಲು ಅವಕಾಶ ನೀಡಿದರೆ ಉತ್ತಮ ಎಂದು ಅವರು ಹೇಳಿದರು.

''ನನ್ನ ಮಗಳು ಚೆನ್ನಾಗಿ ಓದುವಳು. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದ ಹಿನ್ನೆಲೆಯಲ್ಲಿ ಮೂರು ಮಂದಿ ಚರ್ಚಿಸಿ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಸುರಕ್ಷಿತವಾಗಿ ತಲುಪಿದ್ದಾರೆ. ಮುಂದೆ ಅವರಿಗೆ ಯಾವರೀತಿಯಲ್ಲಿ ಸಮಾಲೋಚನೆ ಮಾಡಿಸಬಹುದು ಎಂಬ ಬಗ್ಗೆ ಆಲೋಚಿಸಿ ಕ್ರಮ ವಹಿಸಲಾಗುವುದು'' ಎಂದು ವಿದ್ಯಾರ್ಥಿನಿಯೊಬ್ಬರ ತಂದೆ ಪ್ರತಿಕ್ರಿಯಿಸಿದ್ದಾರೆ.

''10 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಕೂಡಾ ಸಂತಸದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿಕೊಂಡು ಉತ್ತಮ ಕಲಿಕೆಯನ್ನು ರೂಢಿಸಿಕೊಂಡಿದ್ದಾರೆ. ಇದೊಂದು ನಮ್ಮ ಸಂಸ್ಥೆಗೂ ಅನಿರೀಕ್ಷಿತ ಹೊಸ ಸವಾಲು. ಸಾಕಷ್ಟು ಭದ್ರತೆ ಇದೆ, ಕೌನ್ಸಲಿಂಗ್ ವ್ಯವಸ್ಥೆಯೂ ಇದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಇನ್ನಷ್ಟು ಬೆರೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’’ ಎಂದು ಸಂಸ್ಥೆಯ ಪ್ರಾಂಶುಪಾಲೆ ಮೋಹನಾ ತಿಳಿಸಿದ್ದಾರೆ.

ಈ ಸಂದರ್ಭ ಡಿಸಿಪಿ ಅಂಶು ಕುಮಾರ್, ದಿನೇಶ್ ಕುಮಾರ್ ಹಾಗೂ ವಿದ್ಯಾರ್ಥಿನಿಯರ ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News