ಪುತ್ತೂರು: ಎಸ್‍ಡಿಪಿಐ ಕಚೇರಿಗೆ ದಾಳಿ, ಪಿಎಫ್‍ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ

Update: 2022-09-24 17:15 GMT

ಪುತ್ತೂರು: ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ದಿಂದ ಎಸ್‍ಡಿಪಿಐ ಜಿಲ್ಲಾ ಕಚೇರಿಗೆ ನಡೆಸಿದ ದಾಳಿಯನ್ನು ವಿರೋಧಿಸಿ ಹಾಗು ಪಿಎಫ್‍ಐ ನಾಯಕರ ಬಂಧನವನ್ನು ಖಂಡಿಸಿ ಶನಿವಾರ ಸಂಜೆ ಎಸ್‍ಡಿಪಿಐ ಪಕ್ಷದಿಂದ ನಗರದ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್‍ಡಿಪಿಐ ದ.ಕ. ಜಿಲ್ಲಾ ಸಮಿತಿ ಸದಸ್ಯ ನವಾಜ್ ಕಟ್ಟೆ ಅವರು ಎನ್‍ಐಎ ಗೃಹ ಮಂತ್ರಿಯ ಟೂಲ್ ಕಿಟ್ ಆಗಿದೆ. ಬಾಂಬು ದಾಳಿ ತರಬೇತಿ ನೀಡುವ ಚಕ್ರವರ್ತಿ ಸೂಲಿಬೆಲೆ, ಬಂದೂಕು ತರಬೇತಿ ನೀಡುವ ಆರ್‍ಎಸ್‍ಎಸ್ ಕಚೇರಿಗೆ ದಾಳಿ ನಡೆಸದೆ ನಮ್ಮ ಕಚೇರಿ ಮನೆಗಳಿಗೆ ದಾಳಿ ನಡೆಸಿ ಸಮುದಾಯದ ಅಮಾಯಕ ನಾಯಕರನ್ನು ಬಂಧಿಸಿದ್ದಾರೆ. ಬಿಜೆಪಿಯ ಫ್ಯಾಸಿಸ್ಟ್‍ಗೆ ಅಡ್ಡಗಾಲಾಗಿ ನಿಂತಿರುವುದು ಎಸ್‍ಡಿಪಿಐ ಮತ್ತು ಪಿಎಫ್‍ಐ ಮಾತ್ರ. ಹಾಗಾಗಿ ಬಿಜೆಪಿಯವರು ನಮ್ಮನ್ನು ಧಮನಿಸಲು ಅನೇಕ ಇಂತಹ ತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ಅವರ ತಂತ್ರಗಳು ಹಗಲು ಕನಸಾದಿತು. ನಮ್ಮ ಕಟ್ಟ ಕಡೆಯ ಕಾರ್ಯಕರ್ತನಿರುವ ತನಕ ಈ ದೇಶವನ್ನು ಹಿಂದು ರಾಷ್ಟ್ರ ಬಿಡಿ ಮುಸ್ಲಿಂ ರಾಷ್ಟ್ರವನ್ನಾಗಿಯೂ ಮಾಡಲು ನಾವು ಬಿಡುವುದಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಇರಬೇಕು ಎಂದು ಹೇಳಿದರು. 

ಎಸ್‍ಡಿಪಿಐ ಕಾರ್ಯಕರ್ತರು ದರ್ಬೆ ವೃತ್ತದಿಂದ ಪುತ್ತೂರಿನ ಮಿನಿವಿಧಾನ ಸೌಧದ ತನಕ ರ್ಯಾಲಿ ನಡೆಸಲು ಸಿದ್ದತೆ ನಡೆಸಿದ್ದರು. ಆದರೆ ಪೊಲೀಸರು ರ್ಯಾಲಿಗೆ ಅನುಮತಿ ನೀಡದ ಹಿನ್ನಲೆಯಲ್ಲಿ ದರ್ಬೆ ವೃತ್ತದಲ್ಲಿಯೇ ಪ್ರತಿಭಟನೆ ನಡೆಸಿದರು.

ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಸುಳ್ಯ ವಿಧಾನ ಕರ್ಯದರ್ಶಿ ಎಮ್.ಎ ರಫೀಕ್, ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ, ಜಿಲ್ಲಾ ಉಪಾದ್ಯಕ್ಷ ವಿಕ್ಟರ್ ಮಾರ್ಟಿಸ್, ಸಂಘಟನ ಕಾರ್ಯದರ್ಶಿ ಅಶ್ರಫ್ ಬಾವು, ನಗರ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಪುತ್ತೂರು ಉಸ್ತುವಾರಿ ಅಕ್ಬರ್ ಬೆಳ್ತಂಗಡಿ, ಎಸ್‍ಡಿಟಿಯು ತಾಲೂಕು ಸಮಿತಿಯ ಸದಸ್ಯ ಜುನೈದ್ ಸಾಲ್ಮರ, ಹಾಜಿ ಅಬ್ದುಲ್ ಹಮೀದ್ ಮೆಜಿಸ್ಟಿಕ್, ಬದ್ರುದ್ದೀನ್, ಮುನೀರ್ ಪುಣಚ, ಮುಸ್ತಾಫ ಮುಸ್ಲಿಯಾರ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News