ಮಧುರೈ: ಆರೆಸ್ಸೆಸ್ ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆತ; ದೂರು

Update: 2022-09-25 02:50 GMT

ಮಧುರೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಳೀಯ ಮುಖಂಡರೊಬ್ಬರ ಮನೆ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ಮಧುರೈನ ಮೇಳ ಅನುಪ್ಪನದಿ ಎಂಬಲ್ಲಿ ಎಂ.ಎಚ್.ಕೃಷ್ಣನ್ ಎಂಬವರ ಮನೆ ಮೇಲೆ ಇಬ್ಬರು ಅಪರಿಚಿತ ದಾಳಿಕೋರರು ಮೂರು ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದಾಳಿಯ ವೇಳೆ ಕೃಷ್ಣನ್ ಹಾಗೂ ಅವರ ಕುಟುಂಬ ಸದಸ್ಯರು ಮನೆಯೊಳಗಿದ್ದರು.

ಎರಡು ಪೆಟ್ರೋಲ್ ಬಾಂಬ್‍ಗಳು ಸಿಡಿದಿದ್ದು, ಸ್ವಲ್ಪ ಬೆಂಕಿ ಕಾಣಿಸಿಕೊಂಡಿದೆ. ಮೂರನೇ ಬಾಂಬ್ ಸಿಡಿಯಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ. ರಾತ್ರಿ 7.40ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಬಂದು ಆರೆಸ್ಸೆಸ್ ಮುಖಂಡನ ಮನೆಯ ಮೇಲೆ ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ಆತ ಪರಾರಿಯಾಗಿದ್ದಾನೆ. ಇಬ್ಬರೂ ದಾಳಿಕೋರರು ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಕೀರೈತುರೈ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News