ಕಾಂಗ್ರೆಸ್‌ನ ‘ಭಾರತ್ ಜೋಡೊ’: ಸಂಘಪರಿವಾರದ ಫ್ಯಾಶಿಸಂಗೆ ಸವಾಲಾಗಬಹುದೇ?

Update: 2022-09-29 03:00 GMT

ಭಾಗ-2

ದ್ವೇಷಾಧಾರಿತ ಹಿಂದುತ್ವವಾದಿ ಹಿಂದೂ ಸಮಾಜವೊಂದು ಹಿಂದೂ ವೋಟ್ ಬ್ಯಾಂಕ್ ಅಗಿ ಸೃಷ್ಟಿಯಾಗಿದೆ. (ಇದು ಕೇವಲ ಶೇ. 36ರಷ್ಟು ಮಾತ್ರ. ಉಳಿದ ಶೇ. 64 ಜನ ಅವರ ಜೊತೆ ಇಲ್ಲ ಎಂಬುದೆಲ್ಲಾ ಕಾಲಯಾಪನೆಯ ಚರ್ಚೆಗಳು. ಏಕೆಂದರೆ ಈ ಹಿಂದುತ್ವವಾದಿ ಓಟ್ ಬ್ಯಾಂಕು 1984ರಲ್ಲಿ ಕೇವಲ ಶೇ.7ರಷ್ಟಿತ್ತು. ಆದರೆ ಆನಂತರ ಪ್ರತೀ ಚುನಾವಣೆಯಲ್ಲಿ ಹೆಚ್ಚಾಗುತ್ತಾ ಬಂದಿದೆ. ಕರ್ನಾಟಕವನ್ನೂ ಒಳಗೊಂಡಂತೆ ದೇಶದ 10 ದೊಡ್ಡ ರಾಜ್ಯಗಳಲ್ಲಿ ಈಗಾಗಲೇ ಅದು ಶೇ. 50-60ನ್ನು ಮುಟ್ಟಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು ಮೊದಲಿಗಿಂತ ಕಡಿಮೆ ವೋಟುಗಳನ್ನು ಪಡೆದ ಕೇವಲ ಎರಡೇ ರಾಜ್ಯಗಳಾಗಿದ್ದ ಪಂಜಾಬ್ ಮತ್ತು ತಮಿಳುನಾಡುಗಳಲ್ಲೂ ಈ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿ ಅದರ ವೋಟು ಶೇರು ಹೆಚ್ಚಾಗಿದೆ.) 

ಈ ಹಿಂದೂ ಸಮಾಜ ಪ್ರತೀ ಚುನಾವಣೆಯಲ್ಲೂ ಹಿಂದುತ್ವವಾದಿ ಅಜೆಂಡಾಗಳಿಗೆ ವೋಟುಹಾಕುತ್ತದೆ. ಹೀಗಾಗಿ ಎಲ್ಲಿಯ ತನಕ ಈ ದೇಶದಲ್ಲಿ ಮತದಾರ, ವಿಶೇಷವಾಗಿ ಬಹುಸಂಖ್ಯಾತ ಸವರ್ಣೀಯ ಹಿಂದೂ ಸಮಾಜ ಪ್ರಜಾತಂತ್ರೀಕರಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಚುನಾವಣೆಗಳು ಫ್ಯಾಶಿಸಂ ಅನ್ನು ನವೀಕರಿಸುವ ಸಾಧನಗಳಾಗಿರುತ್ತವೆ. ಆದ್ದರಿಂದಲೇ ಈ ಮಧ್ಯೆ ಭಾರತೀಯ ಫ್ಯಾಶಿಸ್ಟರು ಸಂವಿಧಾನ ಬದಲಾವಣೆಯ ಮಾತುಗಳನ್ನೂ ಆಡದೆ ಚುನಾವಣೆಯನ್ನು ತಮ್ಮ ಫ್ಯಾಶಿಸ್ಟ್ ಸರ್ವಾಧಿಕಾರಕ್ಕೆ ಪ್ರಜಾತಂತ್ರದ ಮುಖವಾಡ ಹೊದಿಸುವ ಸಾಧನವನ್ನಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. 

ವಿರೋಧ ಪಕ್ಷಗಳನ್ನು ಆಳುವ ಹಿಂದುತ್ವ ಹೆಜಿಮೊನಿ

ಒಂದೊಮ್ಮೆ ಇತರ ಕಾರಣಗಳಿಂದ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದರೂ ಅಥವಾ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ, ಈ ಹಿಂದುತ್ವವಾದಿ ಅಜೆಂಡಾಗಳನ್ನೇ ಅನುಸರಿಸುವಷ್ಟು ಅಥವಾ ರದ್ದು ಮಾಡದೆ  ಮುಂದುವರಿಸುವಷ್ಟು ಯಾಜಮಾನ್ಯವನ್ನು (ಹೆಜಿಮೊನಿ) ಹಿಂದುತ್ವ ರಾಜಕಾರಣ ಹೊಂದಿದೆ.  

ಇತಿಹಾಸದ ಕೆಲವು ಉದಾಹರಣೆಗಳನ್ನಿಲ್ಲಿ ಗಮನಿಸಬಹುದು: 

ಸ್ವಾತಂತ್ರ್ಯ ಪೂರ್ವದಲ್ಲಿ (ತಿಲಕ್, ಮಾಳವೀ) ಮತ್ತು ನಂತರದಲ್ಲಿ ಅತ್ಯುಗ್ರ ಹಿಂದುತ್ವವಾದಿಗಳು (ಪಟೇಲ್, ಮುನ್ಷಿ) ಕಾಂಗ್ರೆಸ್ ಮತ್ತು ಆ ನಂತರದ ಜನತಾ ಪಾರ್ಟಿಯ (ಮೊರಾರ್ಜಿ ದೇಸಾಯಿ, ಗುಲ್ಜಾರಿ ನಂದಾ)ಅತ್ಯುನ್ನತ ಸ್ಥಾನದಲ್ಲಿ ಮುಂದುವರಿದದ್ದು, ತುರ್ತುಸ್ಥಿತಿಯಲ್ಲಿ ಇಂದಿರಾ ಗಾಂಧಿ ತೋರಿದ ಅಪಾರ ಮುಸ್ಲಿಮ್ ದ್ವೇಷ, 1980ರ ನಂತರ ಇಂದಿರಾ ಸರಕಾರ ಅಳವಡಿಸಿಕೊಂಡ ‘ಹಿಂದೂ ಆತಂಕದಲ್ಲಿದ್ದಾನೆ-ದೇಶ ಆತಂಕದಲ್ಲಿದೆ’ ಎಂಬ ಹಿಂದುತ್ವ ನೀತಿ, ಹಿಂದೂ ಏಕಾತ್ಮಕ ಯಾತ್ರೆ, ರಾಜೀವ್ ಗಾಂಧಿ ಕಾಲದಲ್ಲಿ ಬಾಬರಿ ಮಸೀದಿ ಬೀಗ ತೆಗೆದು ಬಿಜೆಪಿಯ ಹಿಂದೂ ಕೋಮುವಾದಕ್ಕೆ ಇಂಬಾಗಿದ್ದು, 1992ರಲ್ಲಿ ಬಾಬರಿ ಮಸೀದಿ ನಾಶಕ್ಕೆ ಮೌನ ಸಮ್ಮತಿ ನೀಡಿದ್ದು, ಯುಪಿಎ ಕಾಲದಲ್ಲಿ ಕಮ್ಯುನಿಸ್ಟರ ಬೆಂಬಲದೊಂದಿಗೆಯೇ ಬಿಜೆಪಿಯ ಇಂದಿನ ಧರ್ಮಾಧಾರಿತ ನಾಗರಿಕತ್ವಕ್ಕೆ ತಾತ್ವಿಕ ಅಡಿಪಾಯ ಕೊಡುವಂತೆ ವೀಸಾ ನಿಮಗಳನ್ನು ಬದಲಿಸಿದ್ದು, ತೀರಾ ಇತ್ತೀಚೆಗೆ 2020ರ ಆಗಸ್ಟ್ 5ರಂದು ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾದಾಗ ಪ್ರಿಯಾಂಕಾ ನೇತೃತ್ವದಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಾ ಮಂದಿರ ನಿರ್ಮಾಣದ ಹಿರಿಮೆ ತಮಗೆ ಸಲ್ಲಬೇಕೆಂದು ಪೈಪೋಟಿಗಿಳಿದದ್ದು..ಕಾಂಗ್ರೆಸ್‌ನ ಮೇಲಿರುವ ಹಿಂದುತ್ವ ರಾಜಕಾರಣದ ಯಾಜಮಾನ್ಯವನ್ನು ಸೂಚಿಸುತ್ತದೆ. 

ಇತರ ವಿರೋಧ ಪಕ್ಷಗಳ ಕಥೆಯೂ ತುಂಬಾ ಭಿನ್ನವೇನಲ್ಲ: 

ಬಾಬರಿ ಮಸೀದಿ ನಾಶದ ನಂತರವೂ ಡಿಎಂಕೆ ಎನ್‌ಡಿಎ ಭಾಗವಾದದ್ದು, ಗುಜರಾತ್ ಗಲಭೆಯ ನಂತರವೂ ಬಿಎಸ್ಪಿಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಮೋದಿ ಪರವಾಗಿ ಪ್ರಚಾರ ಮಾಡಿದ್ದು.. ಆಪ್, ಬಿಎಸ್ಪಿ, ಎಸ್ಪಿಎಲ್ಲಾ ಪಕ್ಷಗಳೂ ಉತ್ತರ ಪ್ರದೇಶದ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದಲೇ ಪ್ರಾರಂಭಿಸಿ ತಾವು ಅಧಿಕಾರಕ್ಕೆ ಬಂದರೆ ಬಿಜೆಪಿಗಿಂತ ಮುಂಚೆ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡುತ್ತೇವೆಂಬ ಭರವಸೆ ನೀಡಿದ್ದು, ಆಪ್ ಪಕ್ಷವಾದರೆ ಈ ಪೈಪೋಟಿಯಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ದಿಲ್ಲಿಯಲ್ಲಿ ಎಲ್ಲಾ ಮಂದಿರಗಳಲ್ಲಿ ಸರಕಾರದಿಂದಲೇ ಹನುಮಾನ್ ಚಾಲೀಸಾ ಪಠಣವನ್ನು ಆಯೋಜಿಸುತ್ತಿರುವುದೂ, ಜೆಡಿಯು, ಬಿಎಸ್ಪಿಯಂಥ ಪಕ್ಷಗಳೇ ರಾಜ್ಯ ಸಭೆಯಲ್ಲಿ ಸಿಎಎ, ಆರ್ಟಿಕಲ್ 370 ರದ್ದು, UAPA ತಿದ್ದುಪಡಿ, ತ್ರಿಪಲ್ ತಲಾಖ್ ಇನ್ನಿತರ ಬಿಜೆಪಿಯ ಹಿಂದುತ್ವವಾದಿ ಮಸೂದೆಗಳಿಗೆ ಬೆಂಬಲ ಕೊಟ್ಟು ಶಾಸನವಾಗಿಸಿದ್ದು- 

ಇವೆಲ್ಲಾ ಸಂಘಪರಿವಾರದ ಫ್ಯಾಶಿಸ್ಟ್ ಅಪರಾಧಗಳಿಗೆ ಇತರ ಪಕ್ಷಗಳು ಹೇಗೆ ಸಹಾಪರಾಧಿಗಳಾಗಿವೆ ಎಂದು ಸಾಬೀತು ಪಡಿಸುವ ಚಾರ್ಜ್ ಶೀಟ್ ಮಾತ್ರವೇ? ಅಥವಾ ಇದು ಹಿಂದುತ್ವದ ಯಾಜಮಾನ್ಯ ಹೇಗೆ ಇಡೀ ಸಂಸದೀಯ ವ್ಯವಸ್ಥೆಯನ್ನು ಆವರಿಸಿಕೊಂಡಿದೆ ಎಂಬುದನ್ನು ಹಾಗೂ ಹೇಗೆ ಅವು ಫ್ಯಾಶಿಸಂ ಅನ್ನು ಸೋಲಿಸುವುದಿರಲಿ ಅದರ ವಿರುದ್ಧ ಗುಣಾತ್ಮಕ ಪ್ರತಿರೋಧವನ್ನೂ ತೋರಲಾರವು ಎಂಬುದನ್ನು ಸಾಬೀತುಪಡಿಸುವ ಇತಿಹಾಸದ ಗುಣಪಾಠಗಳೇ?

ಫ್ಯಾಶಿಸಂ ವಿರೋಧಿ ಶರತ್ತುಗಳು ಮತ್ತು ಕಾಂಗ್ರೆಸ್

ಹಾಗೆಯೇ ಶರತ್ತು ಬದ್ಧ ಬೆಂಬಲವಾದಿಗಳು ಇಲ್ಲಿ ಗಮನಿಸಬೇಕಾದ ಇತಿಹಾಸದ ಇನ್ನೂ ಕೆಲವು ಮುಖ್ಯ ಸಂಗತಿಗಳಿವೆ: 

ಅ) 1969ರ ನಂತರದ ಇಂದಿರಾಗಾಂಧಿಯವರ ಘೋಷಣೆಗಳು ಮತ್ತು ಅವರ ಜನ ಸಂಪರ್ಕಗಳು ಇಂದು ರಾಹುಲ್ ಗಾಂಧಿಯವರು ಮಾಡುತ್ತಿರುವುದಕ್ಕಿಂತ ಪ್ರಮಾಣ ಹಾಗೂ ಗುಣದಲ್ಲಿ ಹತ್ತಾರುಪಟ್ಟು ತೀವ್ರವಾಗಿತ್ತು. ಹೀಗಾಗಿಯೇ ಆಗ ಸಿಪಿಐ ಪಕ್ಷದ ನೇತಾರರಾಗಿದ್ದ ಕುಮಾರ್ ಮಂಗಳಂ ಅವರು ಈಗ ಸಿಪಿಐ ಅನ್ನು ಕಾಂಗ್ರೆಸ್‌ನೊಳಗೆ ವಿಲೀನಗೊಳಿಸಿ ಒಳಗಿಂದ ಕಾಂಗ್ರೆಸನ್ನು ಕ್ರಾಂತಿಕಾರಿಯಾಗಿಸುವ ಕಾಲ ಎಂದು ಘೋಷಿಸಿ ಕಾಂಗ್ರೆಸ್ ಸೇರಿಕೊಂಡು ಮಂತ್ರಿಯಾಗಿದ್ದರು. ಸಿಪಿಐ ಅಂತೂ ತುರ್ತುಸ್ಥಿತಿಯನ್ನೂ ಶರತ್ತು ಬದ್ಧವಾಗಿ ಬೆಂಬಲಿಸಿತ್ತು. ಆದರೆ ಇಂದಿರಾ ಕಾಂಗ್ರೆಸ್ ಸಮಾಜವಾದಿ ನೀತಿಯನ್ನು ಜಾರಿಗೆ ತರುವುದಿರಲಿ ತುರ್ತುಸ್ಥಿತಿಯನ್ನು ಬಳಸಿಕೊಂಡು ಅಂದಿನ ದೊಡ್ಡ ಬಂಡವಾಳಶಾಹಿ ಟಾಟಾ, ದೊಡ್ಡ ಬಂಡವಾಳಶಾಹಿಗಳ ಪರವಾಗಿ ಮುಂದಿಟ್ಟ ಟಾಟಾ ಮೆಮೊರಾಂಡಮ್ ಅನ್ನು ಸಂಪೂರ್ಣವಾಗಿ ಜಾರಿಗೆ ತಂದಿತು. ಮುಸ್ಲಿಮರ ಮೇಲೆ ಇನ್ನಿಲ್ಲದ ದೌರ್ಜನ್ಯವನ್ನು ನಡೆಸಿತು. 

ಅ) 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದದ್ದೇ  ಕಮ್ಯುನಿಸ್ಟರು ಹಾಗೂ ಇತರರು ವಿಧಿಸಿದ ‘ಕಾಮನ್ ಮಿನಿಮಮ್ ಪ್ರೋಗ್ರಾಂ’ನ ಶರತ್ತುಗಳಿಗೆ ಬದ್ಧವಾಗಿರುವ ಭರವಸೆಯ ಮೇಲೆ. ಆದರೆ ಅದೇ ಕಾಲಾವಧಿಯಲ್ಲೇ ಆ ಶರತ್ತುಗಳೆಲ್ಲ ಮೀರಿ ಧರ್ಮಾಧಾರಿತ ನಾಗರಿಕತ್ವ ನೀತಿಗೆ ಭೂಮಿಕೆ ಒದಗಿಸಿಕೊಟ್ಟ ವೀಸಾ ನೀತಿ, ಆಂಶಿಕವಾಗಿ ಎನ್‌ಪಿಆರ್  ಜಾರಿ, ಮೋದಿ ಜಾರಿಗೆ ತಂದು ಹಿಂದೆಗೆದುಕೊಂಡ ಕೃಷಿ, ವಿದ್ಯುತ್ ನೀತಿಗಳೆಲ್ಲಾ ಜಾರಿಯಾದವು.

ಈಗ ವಿರೋಧ ಪಕ್ಷದಲ್ಲಿದ್ದರೂ ಎಲ್ಲಾ ಪಕ್ಷಗಳು ಸರ್ವ ಸಮ್ಮತಿಯಿಂದ ಬ್ರಾಹ್ಮಣವಾದಿ EWS ಮೀಸಲಾತಿಗೆ ಬಂಬಲ ಸೂಚಿಸಿವೆ ಮತ್ತು ಯಾವ ಪಕ್ಷಗಳೂ ತರಗತಿಯಲ್ಲಿ ಭಗವದ್ಗೀತೆ ಬೋಧನೆ, ಹಿಜಾಬ್, ರಾಮಮಂದಿರ ನಿರ್ಮಾಣಗಳಂಥ ಹಿಂದುತ್ವವಾದಿ ದ್ವೇಷಾಧಾರಿತ ನೀತಿಗಳ ವಿರುದ್ಧ ಬಹಿರಂಗ ವಿರೋಧ ವ್ಯಕ್ತಪಡಿಸಿ ಪರ್ಯಾಯ ರಾಜಕೀಯವನ್ನು ಮುಂದಿಡಲು ಸಿದ್ಧವಿಲ್ಲ. ಇವೆಲ್ಲವೂ ಶರತ್ತು ಬದ್ಧ ಬೆಂಬಲವೆಂಬುದಕ್ಕೆ ಯಾವ ಅರ್ಥವೂ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. 

ಹೀಗಾಗಿ ಯಾವ ಪರಿಣಾಮಾತ್ಮಕ ವಿರೋಧವೂ ಇಲ್ಲದ ಸನ್ನಿವೇಶದಲ್ಲಿ ಜನಬಲ ಮತ್ತು ರಾಜ್ಯಬಲವನ್ನು ಬಳಸಿಕೊಂಡು ಭಾರತೀಯ ಫ್ಯಾಶಿಸ್ಟರು ಕಾರ್ಪೊರೇಟ್ ಬಂಡವಾಳದ ಸೇವೆಯನ್ನು ಅಭಿವೃದ್ಧಿಯ ಹೆಸರಲ್ಲೇ ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದಾರೆ. ಈ ಕಾರ್ಪೊರೇಟ್ ಬಂಡವಾಳ ಪರ ನೀತಿಗಳೆಲ್ಲವನ್ನೂ ಕಾಂಗ್ರೆಸ್ ನೇತೃತ್ವದ ಎಲ್ಲಾ ವಿರೋಧ ಪಕ್ಷಗಳು ಪೈಪೋಟಿಯಲ್ಲಿ ಜಾರಿ ಮಾಡುತ್ತಿದ್ದವು ಎಂಬುದನ್ನು ನೆನಪಿಸಿಕೊಂಡಾಗ ಫ್ಯಾಶಿಸಂನ ಆರ್ಥಿಕ ನೀತಿಗಳಿಗೂ ಸಂಸದೀಯ ವಿರೋಧ ಇಲ್ಲವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಹಾಗೂ ಹಿಂದುತ್ವದ ಸಾಮಾಜಿಕ -ಸಾಂಸ್ಕೃತಿಕ ನೀತಿಗಳ ಬಗ್ಗೆಯೂ ಸಂಸದೀಯ ವ್ಯವಸ್ಥೆಯಲ್ಲಿ ಒಂದು ಬಗೆಯ ಸಮ್ಮತಿ ಸೃಷ್ಟಿಯಾಗಿದೆ.

ಇದು ಈ ದೇಶದ ಇಂದಿನ ಫ್ಯಾಶಿಸಂನ ವಿಶ್ವರೂಪ. ಬ್ರಾಹ್ಮಣವಾದ ಮತ್ತು ಬಂಡವಾಳವಾದವನ್ನು ಬಿಜೆಪಿಗೆ ಮುನ್ನ ಕಾಂಗ್ರೆಸನ್ನೂ ಒಳಗೊಂಡಂತೆ ಈ ದೇಶದ ಎಲ್ಲಾ ವಿರೋಧ ಪಕ್ಷಗಳು-ಕಾಂಗ್ರೆಸ್ ಮಾತ್ರವಲ್ಲ- ಆಪ್, ಅಧಿಕಾರದಲ್ಲಿದ್ದಾಗ ಕಮ್ಯುನಿಸ್ಟರು, ಬಿಎಸ್ಪಿ ಎಲ್ಲವೂ ಪೋಷಿಸಿಕೊಂಡು ಬಂದಿವೆ. ಸಂಘಪರಿವಾರದ ಇಂದಿನ ಫ್ಯಾಶಿಸಂ ಹಿಂದೆ ಅಧಿಕಾರದಲ್ಲಿದ್ದವರ ಮತ್ತು ಈ ವ್ಯವಸ್ಥೆಯ ಗುಪ್ತ ಹಾಗೂ ಬಹಿರಂಗ ಪೋಷಣೆಯ ಪರಿಣಾಮ. 

ಮೃದು ಬ್ರಾಹ್ಮಣ್ಯದ ಮೂಲಕ ಉಗ್ರ ಬ್ರಾಹಣ್ಯದ ವಿರೋಧ? 

ಆದ್ದರಿಂದ ಭಾರತ್ ಜೋಡೊ ಬಗ್ಗೆ ಉತ್ಪ್ರೇಕ್ಷಿತ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಮುನ್ನ ಇತಿಹಾಸದ ಇನ್ನೂ ಎರಡು ಪಾಠಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು: 
ಮೊದಲನೆಯದಾಗಿ ಕಾಂಗ್ರೆಸ್ ಆದಿಯಾಗಿ ಬಹುಪಾಲು ಎಲ್ಲಾ ಪಕ್ಷಗಳು ಸಾರದಲ್ಲಿ ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಪಕ್ಷಗಳೇ ಆಗಿವೆ ಎಂಬುದನ್ನು ಕಳೆದ 75 ವರ್ಷಗಳ ಇತಿಹಾಸವನ್ನು ಕಣ್ಣುಬಿಟ್ಟು ನೋಡುತ್ತಿರುವವರಿಗೆ ವಿಶೇಷವಾಗಿ ಸಾಬೀತು ಮಾಡುವ ಅಗತ್ಯವಿಲ್ಲ. ಅಂಬೇಡ್ಕರ್ ಅವರೂ ಕೂಡ ಭಾರತೀಯ ಪ್ರಜಾತಂತ್ರದ ಪ್ರಧಾನ ಕೊರತೆ ಇಲ್ಲಿನ ಬಹುಸಂಖ್ಯಾತತೆ ಎನ್ನುವುದು ರಾಜಕೀಯ ಬಹುಸಂಖ್ಯಾತತೆ (Political Majority)ಯಾಗದೆ ಕೋಮುವಾರು ಬಹುಸಂಖ್ಯಾತತೆ (Communal Majority) ಆಗಿದೆ ಎಂದು ಹೇಳಿದ್ದು ಇದೇ ಅರ್ಥದಲ್ಲಿ. ಆದ್ದರಿಂದ ಇಲ್ಲಿನ ಫ್ಯಾಶಿಸಂಗೆ ಭಾರತೀಯ ಸಮಾಜ ಒದಗಿಸಿರುವ ಸಾಂಸ್ಥಿಕ ಬೇರುಗಳನ್ನು ಕಡಿಯದೆ ಯಾವ ಪಕ್ಷವೂ ಫ್ಯಾಶಿಸಂ ಅನ್ನು ವಿರೋಧಿಸಲು ಸಾಧ್ಯವಿಲ್ಲ. 

ಆದ್ದರಿಂದ ಈ ಬ್ರಾಹ್ಮಣೀಯ ಕಾರ್ಪೊರೇಟ್ ಫ್ಯಾಶಿಸಂ ಅನ್ನು ಸೋಲಿಸಲು ಒಂದು ನೈಜ ಬ್ರಾಹ್ಮಣವಾದ ವಿರೋಧಿ, ಬಂಡವಾಳಶಾಹಿ ವಿರೋಧಿ ಜನಸಮರದ ಅಗತ್ಯವಿದೆ. ಕಳೆದ 75 ವರ್ಷಗಳ ಸಂಸದೀಯ ಇತಿಹಾಸವು ಮೃದು ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿ ಪಕ್ಷಗಳು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತೆ ಮಾಡಿದ್ದರೂ ಅಂತಿಮವಾಗಿ ಹೇಗೆ ಮಾನ್ಯತೆಯನ್ನು ಕಳೆದುಕೊಂಡು ಅತ್ಯುಗ್ರ ಬ್ರಾಹ್ಮಣಶಾಹಿ-ಬಂಡವಾಳಶಾಹಿ ಫ್ಯಾಶಿಸ್ಟ್ ಆಳ್ವಿಕೆಗೆ ದಾರಿ ಮಾಡಿಕೊಟ್ಟವು ಎಂಬುದಕ್ಕೆ ಸಾಕ್ಷಿಯಾಗಿದೆ. ಭಾರತ್ ಜೋಡೊ ಕಾರ್ಯಕ್ರಮವು ಕಾಂಗ್ರೆಸನ್ನು ಅಧಿಕಾರಕ್ಕೆ ತಂದೇ ಬಿಟ್ಟರೂ ಅದರ ನೀತಿಗಳು ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಮನೋಧರ್ಮವನ್ನು ಅರ್ಥಾತ್ ಹಿಂದುತ್ವ ಅಜೆಂಡಾಗಳನ್ನು ಅಲುಗಾಡಿಸುವುದಿಲ್ಲ. ಅದು ಮತ್ತೆ ಇನ್ನಷ್ಟು ಉಗ್ರವಾದ ಫ್ಯಾಶಿ ಆಳ್ವಿಕೆಗೆ ದಾರಿ ಮಾಡಿಕೊಡುತ್ತದೆ. 

ಜನಸಂಘಟನೆಯಿಲ್ಲದೆ ಜನರೊಳಗಿರುವ ಫ್ಯಾಶಿಸಂ ಸೋಲಿಸಲಾಗದು 

ಎರಡನೆಯದಾಗಿ, ಭಾರತೀಯ ಫ್ಯಾಶಿಸ್ಟರು ಕಳೆದ ನೂರು ವರ್ಷಗಳಿಂದ ಜನರಲ್ಲಿ ಆಳವಾದ ಬೇರುಗಳನ್ನು ಬಿಡುತ್ತಾ ಇಂದು ಸಮಾಜದಲ್ಲಿ ಮತ್ತು ಆಡಳಿತದಲ್ಲಿ ಸರ್ವಾಧಿಕಾರಿಯಾಗುವಷ್ಟು ಬೆಳೆದಿದ್ದಾರೆ. ಮೊದಮೊದಲು ಅವರು ಅಲ್ಪಶಕ್ತಿಯನ್ನೇ ಹೊಂದಿದ್ದರೂ ನಿರಂತರತೆ, ದೃಢತೆ ಹಾಗೂ ಕುತಂತ್ರಿ ಕಾರ್ಯತಂತ್ರಗಳ ಮೂಲಕ ಅವರು ಬೆಳೆದರು. ಉದಾಹರಣೆಗೆ 1990ರ ನಂತರದ ರಾಮರಥಯಾತ್ರೆಯ ಮೂಲಕ ಅವರು ಹಿಂದೂ ಸಮಾಜದಲ್ಲಿ ವಿಸ್ತೃತವಾಗಿ ಬೇರುಬಿಟ್ಟಿದ್ದು ಈಗ ಇತಿಹಾಸ. ಇವತ್ತು ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಕೂಡಾ ಇದೇ ರೀತಿ ಕಾಂಗ್ರೆಸ್‌ನ ಬೆಳವಣಿಗೆಗೆ ಅನುಕೂಲ ಮಾಡಿಕೊಡಬಹುದೇ? 

ಸಂಘಪರಿವಾರದ ರಾಮರಥ ಯಾತ್ರೆಯು ಹಾದುಹೋದ ನಂತರ ಅದರ ದ್ವೇಷ ಸಂದೇಶವನ್ನು ಪರಿವಾರದ ಸಂಘಟನೆಗಳು ಸ್ಥಳೀಯಕರಿಸಿದವು ಮತ್ತು ದುಪ್ಪಟ್ಟುಗೊಳಿಸಿದವು. ಅದಕ್ಕೆ ಬೇಕಾದ ಸಂಘಟನೆಗಳನ್ನು ಅವರು ನಿರಂತರವಾಗಿ ಕಟ್ಟಿಕೊಳ್ಳುತ್ತಲೇ ಬಂದಿದ್ದರು. ರಥಯಾತ್ರೆಯನ್ನು ಬಳಸಿಕೊಂಡು ಅದು ಇನ್ನಷ್ಟು ಆಳವಾಯಿತು. ಅಗಲವಾಯಿತು. 

ಉದಾಹರಣೆಗೆ 1991ರ ರಥಯಾತ್ರೆಯ ಭಾಗವಾಗಿಯೇ ವಿಶ್ವಹಿಂದೂ ಪರಿಷತ್ ಚಿಕ್ಕಮಗಳೂರಿನಲ್ಲಿ ಶಾರದಾ ಯಾತ್ರಾವನ್ನು ಆಯೋಜಿಸಿತು. ಅದಾದ ಮರುವರ್ಷದಿಂದಲೇ ಬಾಬಾಬುಡಾನ್ ದರ್ಗಾದಲ್ಲಿ ಹಿಂದೂ ರಿವಾಜುಗಳನ್ನು ಬಲವಂತವಾಗಿ ಹೇರುತ್ತಾ ದತ್ತಜಯಂತಿಯನ್ನು ಪ್ರಾರಂಭಿಸಿತು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಆನಂತರದ ಜೆಡಿಎಸ್ ಪಕ್ಷ ಅದನ್ನು ವಿರೋಧಿಸಿದರೆ ಹಿಂದೂ ವೋಟ್ ಬ್ಯಾಂಕ್ ಕಳೆದುಕೊಳ್ಳುತ್ತವೆಂಬ ಭೀತಿಯಲ್ಲಿ ಹಿಂದುತ್ವವಾದಿ ಆಕ್ರಮಣಗಳನ್ನು ಕಾನೂನುಮಾನ್ಯಗೊಳಿಸುತ್ತಾ ಹೋದವು. ಅದರ ಒಟ್ಟು ಪರಿಣಾಮ ಈಗ ಚಿಕ್ಕಮಗಳೂರು ಮಾತ್ರವಲ್ಲ ಸುತ್ತಮುತ್ತಲ ಜಿಲ್ಲೆಗಳಲ್ಲೂ ಬಿಜೆಪಿ ಸತತ ಗೆಲ್ಲುತ್ತಾ ಬಂದಿದೆ ಮತ್ತು ಸಂಘಪರಿವಾರ ಹಿಂದೂ ಸಮಾಜದಲ್ಲಿ ವಿಸ್ತೃತವಾದ ಸಂಘಟನೆಯನ್ನು ಕಟ್ಟಿಕೊಂಡಿದೆ. 

ಇದು ಫ್ಯಾಶಿಸ್ಟರು ಯಾತ್ರೆಗಳನ್ನು ಸಮಾಜದಲ್ಲಿ ನೆಲೆಯನ್ನು ಗಳಿಸಿಕೊಳ್ಳಲು ಹಾಗೂ ವೋಟುಗಳಾಗಿಸಿಕೊಳ್ಳಲು ಅನುಸರಿಸಿದ ರೀತಿ. ಆದರೆ ಭಾರತ್ ಜೋಡೊ ಯಾತ್ರೆಯನ್ನು ಸಮಾಜದ ನೆಲೆಯನ್ನಾಗಿ ಮಾಡಿಕೊಳ್ಳುವ ಅಜೆಂಡಾ ಆಗಲೀ, ಜನಸಂಘಟನೆಗಳಾಗಲೀ ಕಾಂಗ್ರೆಸ್‌ಗೆ ಇಲ್ಲ. 
ಫ್ಯಾಶಿಸ್ಟರಿಗೆ ಪರ್ಯಾಯವಾದ ತೀವ್ರವಾದ ಜನಪರ ಅಜೆಂಡಾಗಳು ಮತ್ತು ಜನಸಂಘಟನೆಗಳು ಇಲ್ಲದೆ ಬಿಜೆಪಿಯನ್ನು ಚುನಾವಣೆಯಲ್ಲೂ ಸೋಲಿಸಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಫ್ಯಾಶಿಸಂನ್ನು ಸೋಲಿಸಲಂತೂ ಸಾಧ್ಯವೇ ಇಲ್ಲ. ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ಬಿಜೆಪಿಯೇತರ ಪಕ್ಷಗಳು ಆಳವಾದ ಮತ್ತು ವಿಸ್ತಾರವಾದ ಜನಬೆಂಬಲವನ್ನೇ ಹೊಂದಿಲ್ಲ. 

ಚುನಾವಣೆಗೆ ಸೀಮಿತವಾದ ವಿರೋಧದಿಂದ ಸುಸ್ಥಿರವಾಗುತ್ತಿರುವ ಫ್ಯಾಶಿಸಂ!

ಫ್ಯಾಶಿಸಂ ಸೋಲಬೇಕಿರುವುದು ಸಮಾಜದಲ್ಲಿ, ಜನರ ತಲೆಯಲ್ಲಿ. ಎಲ್ಲಿಯತನಕ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ಸಂಘಪರಿವಾರ ಹೇಳುವ ‘‘ಹಿಂದೂ ಆತಂಕದಲ್ಲಿದ್ದಾನೆ, ದೇಶ ಆತಂಕದಲ್ಲಿದೆ, ಬಲಿಷ್ಠವಾದ ಜನನಾಯಕನ ಸರ್ವಾಧಿಕಾರದಿಂದ ಮಾತ್ರ ಹಿಂದೂಗಳ ಶತ್ರುಗಳನ್ನು ಸೋಲಿಸಲು ಸಾಧ್ಯ’’ ಎಂಬ ರಾಜಕೀಯ ಸರಿ ಎಂಬ ಭಾವನೆ ಇರುತ್ತದೋ ಅಲ್ಲಿಯವರೆಗೆ ಬಿಜೆಪಿಯ ವಿರೋಧವನ್ನೆಲ್ಲಾ ದೇಶ ವಿರೋಧ ಮತ್ತು ಹಿಂದೂ ವಿರೋಧ ಎಂದೇ ಸಮೀಕರಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಾ ಹೋಗುತ್ತದೆ. ಚುನಾವಣೆಗಳಲ್ಲಿ ಗೆಲ್ಲುತ್ತಾ ಹೋಗುತ್ತದೆ. 2019ರಲ್ಲಿ ಕರ್ನಾಟಕದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಸೆಕ್ಯುಲರ್ ವೋಟುಗಳು ಒಡೆಯಬಾರದೆಂದು ನಡೆಸಿದ ಜಂಟಿ ಸ್ಪರ್ಧೆಯ ಪ್ರಯೋಗವು ಬಿಜೆಪಿಯ ವೋಟು ಶೇರುಗಳನ್ನು ಹೆಚ್ಚಿಸಿದ್ದು ಇದೇ ಕಾರಣಕ್ಕೆ. 

ಹೀಗಾಗಿ ಇಂದಿನ ಸಂದರ್ಭದ ವಿಪರ್ಯಾಸವೆಂದರೆ ಆಳವಾದ ಮತ್ತು ವಿಸ್ತಾರವಾದ ಜನಬೆಂಬಲವನ್ನು ಕಟ್ಟಿಕೊಳ್ಳದ ಪಕ್ಷಗಳು ಮತ್ತು ಸಂಘಟನೆಗಳು ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧ ನಡೆಸುವ ತಂತ್ರಗಳು ಅದಕ್ಕೆ ಉಪಕಾರಿಯಾಗಿ ಪರಿಣಮಿಸುತ್ತಿರುವುದು. ಹೀಗಾಗಿ ಎಲ್ಲಿಯ ತನಕ ಈ ದೇಶದ ಮತದಾರರನ್ನು ಅದರಲ್ಲೂ ಸವರ್ಣೀಯ ಬಹುಸಂಖ್ಯಾತ ಹಿಂದೂ ಮತದಾರರನ್ನು ಪ್ರಜಾತಂತ್ರೀಕರಣಗೊಳಿಸುವ ನಿರಂತರ ಸಮರವನ್ನು ಪಕ್ಷಗಳು ನಡೆಸುವುದಿಲ್ಲವೋ ಅಲ್ಲಿಯವರೆಗೆ ಈ ಭಾರತೀಯ ಫ್ಯಾಶಿಸಂ ಒಂದು ಸುಸ್ಥಿರ ಫ್ಯಾಶಿಸಂ ಆಗಿಯೇ ಉಳಿದುಕೊಂಡಿರುತ್ತದೆ. 
ಅದನ್ನು ಅಂತಹ ಒಂದು ದೀರ್ಘ ಸಮರವನ್ನು ಹೂಡುವ ಇರಾದೆಯಾಗಲೀ, ಅಜೆಂಡಾ ಆಗಲೀ, ಸಂಘಟನಾ ಶಕ್ತಿಯಾಗಲೀ ಕಾಂಗ್ರೆಸನ್ನೂ ಒಳಗೊಂಡಂತೆ ಯಾವ ಬಿಜೆಪಿ ವಿರೋಧಿ ಪಕ್ಷಗಳಿಗೂ ಇಲ್ಲ. ಆಗಾಗ ಅವರ ನಡುವೆ ಕಾಣಿಸಿಕೊಳ್ಳುವ ವೈರುಧ್ಯಗಳು ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಅಜೆಂಡಾಗಳ ಅನುಷ್ಠಾನದ ತೀವ್ರತೆಯಲ್ಲಿರುವ ಭಿನ್ನಾಭಿಪ್ರಾಯಗಳೇ ವಿನಾ ಅದರ ತಾತ್ವಿಕ ವಿರೋಧವಿಲ್ಲ. 

ಜೋಡೊಗಳಲ್ಲಿ ಉತ್ತರವಿಲ್ಲ- ಸುದೀರ್ಘ ಜನಸಮರಕ್ಕೆ ಪರ್ಯಾಯವಿಲ್ಲ 

ಅರ್ಥಾತ್ ಸ್ವಾತಂತ್ರ್ಯೋತ್ತರ ನಾವು ಕಟ್ಟಿಕೊಂಡ ಪ್ರಜಾತಾಂತ್ರಿಕ ಸಾಧನಗಳು ಫ್ಯಾಶಿಸಂ ಅನ್ನು ಸೋಲಿಸುವಲ್ಲಿ ವಿಫಲವಾಗಿವೆ. ಬದಲಿಗೆ ಸಂವಿಧಾನದ ಸಂಧಿಯಿಂದಲೇ ಈ ಫ್ಯಾಶಿಸ್ಟ್ ಸರ್ವಾಧಿಕಾರ ಹುಟ್ಟಿಕೊಂಡು ಸಾಂವಿಧಾನಿಕವಾಗಿಯೇ ಅಳ್ವಿಕೆ ಮಾಡುತ್ತಿದೆ. ಹೀಗಾಗಿ ಇಂದು ದೇಶ ಮತ್ತೆ ಸ್ವಾತಂತ್ರ್ಯಪೂರ್ವ ಸ್ಥಿತಿಗೆ ಮರಳಿದೆ. ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯನ್ನು ಬುಡಮಟ್ಟ ನಿವಾರಿಸಿ ಸಮತೆ-ಮಮತೆಯನ್ನು ಅಧರಿಸಿದ ನವನಾಗರಿಕತೆಯನ್ನು ಕಟ್ಟುವ ಮೂಲಕ ಮಾತ್ರ ಇಂದು ಭಾರತಕ್ಕೆ ಎದುರಾಗಿರುವ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯ. ಅಂತಹ ಸಮಾಜವಾದಿ ಪ್ರಬುದ್ಧ ಭಾರತಕ್ಕಾಗಿ ಒಂದು ಹೊಸ ಸ್ವಾತಂತ್ರ್ಯ ಹೋರಾಟವನ್ನೇ ಕಟ್ಟಬೇಕಿದೆ. ಅದರ ಭಾಗವಾಗಿ ಅಂಬೇಡ್ಕರ್ ಕನಸಿದ ನಿಜವಾದ ಸಂವಿಧಾನ, ಭಗತ್ ಸಿಂಗ್ ಆಶಯದ ಭಾರತ, ಸರ್ವರಿಗೂ ಸಮಪಾಲು ಸಮಬಾಳಿನ ಭಾರತವನ್ನು ಕಟ್ಟಬೇಕಿದೆ. 

ಆದರೆ ಇವು ರಾತ್ರೋರಾತ್ರಿ ಸಂಭವಿಸುವ ಸಂಗತಿಯಲ್ಲ. ದ್ವೇಷ ಸಿದ್ಧಾಂತಕ್ಕೆ -ಬ್ರಾಹ್ಮಣವಾದ-ಬಂಡವಾಳದ ಕುತಂತ್ರಗಳಿಗೆ - ಬಲಿಯಾಗಿರುವ ನಮ್ಮದೇ ಜನರಲ್ಲಿ ಮತ್ತೆ ಸಮತಾವಾದಿ ಆಶಯಗಳನ್ನು ಬಿತ್ತುತ್ತಾ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮೂಲಕ ಸಮಾಜದಲ್ಲಿ ಮತ್ತು ಅಧಿಕಾರದಲ್ಲಿ ಬೇರುಬಿಟ್ಟಿರುವ ಫ್ಯಾಶಿಸಂ ವಿರುದ್ಧ ನಡೆಸುವ ಸುದೀರ್ಘ ಜನಸಮರದ ಮೂಲಕ ಮಾತ್ರ ಸಾಧಿಸಬಹುದಾದ ವಿಜಯವಾಗಿದೆ. 

ಇದು ಇಂದಿನ ಸಂದರ್ಭ. 
ಇದು ನವಭಾರತದ ಕನಸಿಗರಲ್ಲಿ ಸದ್ಯಕ್ಕೆ ಫ್ಯಾಶಿಸಂ ಅನ್ನು ಸೋಲಿಸುವ ಪವಾಡ ಸದೃಶ ಮಂತ್ರದಂಡಗಳಿಲ್ಲ ಎಂಬ ವಾಸ್ತವದ ಅರಿವು ಮೂಡಿಸಬೇಕು. ಬೇರುಬಿಟ್ಟಿರುವ ಫ್ಯಾಶಿಸಂ ಅನ್ನು ಬುಡಸಮೇತ ಕಿತ್ತುಹಾಕುವ ಪ್ರಕ್ರಿಯೆಯು ರಕ್ತಸಿಕ್ತವೇ ಆಗಿರುತ್ತದೆ. ಏಕೆಂದರೆ ಸಮಾಜದ ಬಲಿಷ್ಠರು, ರಾಜ್ಯಬಲ ಫ್ಯಾಶಿಸ್ಟರ ಜೊತೆಗಿದೆ. 
ಆದರೆ ಇತಿಹಾಸದಲ್ಲಿ ಜನತೆ ತಾಳ್ಮೆ, ಪರಿಶ್ರಮ, ತ್ಯಾಗ ಮತ್ತು ಬಲಿದಾನಗಳನ್ನು ಮಾಡುತ್ತಲೇ ಹಿಟ್ಲರ್‌ಗಳನ್ನು ಸೋಲಿಸಿದ್ದಾರೆ. ಭಾರತದಲ್ಲೂ ಇದು ಪ್ರಾಯಶಃ ದಶಕಗಳ ಕಾಲ ಒಂದೆರಡು ಪೀಳಿಗೆಗಳು ನಡೆಸಬೇಕಾದ ಜನಸಮರ. ಅದರ ಬದಲಿಗೆ ಹುಡುಕುವ ಅಡ್ಡಹಾದಿಗಳು ಮತ್ತು ಶಾರ್ಟ್‌ಕಟ್‌ಗಳು ಫ್ಯಾಶಿಸ್ಟರನ್ನು ನಮ್ಮ ಜನರ ನಡುವೆಯೇ ಇನ್ನಷ್ಟು ಬೇರು ಊರುವಂತೆ ಮಾಡಬಹುದು. 

ಸಾರಾಂಶವಿಷ್ಟೆ: 
ಭಾರತ್ ಜೋಡೊವನ್ನು ವಿರೋಧಿಸಬೇಕಿಲ್ಲ. 
ಆದರೆ ಆ ನಡಿಗೆಯ ಕೆಲವು ಸಕಾರಾತ್ಮಕ ನಡೆಗಳು ಮತ್ತು ವ್ಯಕ್ತಿಗಳು, ಕಾಂಗ್ರೆಸ್‌ನ ವರ್ಗ ಹಿನ್ನೆಲೆ, ಫ್ಯಾಶಿಸ್ಟ್ ಶಕ್ತಿಗಳ ಜೊತೆಗೆ ಅದಕ್ಕಿರುವ ಸಾಂಸ್ಥಿಕ ಸಖ್ಯ ಹಾಗೂ ಅದರಿಂದಾಗಿ ಈ ನಡೆಗಳಿರುವ ಮಿತಿಯನ್ನು ಮರೆಸಬಾರದು. ಹಾಗೆಯೇ ಶರತ್ತು ಬದ್ಧ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News