ಅಸ್ಪಶ್ಯತೆ ವಿರುದ್ಧ ಶ್ರೀರಾಮಸೇನೆ ಹೋರಾಟ: ಪ್ರಮೋದ್ ಮುತಾಲಿಕ್
ಕುಂದಾಪುರ, ಅ.1: ಕೋಲಾರ, ಕೊಪ್ಪಳದಲ್ಲಿ ನಡೆದ ಅಸ್ಪೃಶ್ಯತೆ ಘಟನೆ ಅತ್ಯಂತ ಕ್ರೌರ್ಯವಾದುದು. ಇದು ಹೇಯ ಕೃತ್ಯ. ಇದನ್ನು ನಡೆಸಿದವರಿಗೆ ಕಠಿನ ಶಿಕ್ಷೆ ಕೊಡಬೇಕು. ನಾವು ಅಸ್ಪೃಶ್ಯತೆ ವಿರುದ್ಧ ಕಳೆದೆರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ದೇಶದಲ್ಲಿ ಇನ್ನೂ ಅಂಬೇಡ್ಕರ್ ಅವರ ಕನಸು ನನಸಾಗದಿರುವುದು ದುರಂತ ಎಂದು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶನಿವಾರ ಕುಂದಾಪುರದ ಶೇರೂನ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಘೋಷಿಸಿದಂತೆ ಕೆಲಸ ನೀಡಿರುವುದು ಸ್ವಾಗತಾರ್ಹ. ಆದರೆ ಅವರಿಗೆ ಪುತ್ತೂರು ಅಥವಾ ಜಿಲ್ಲೆಯೊಳಗೆ ನೌಕರಿ ನೀಡಬೇಕು ಹಾಗೂ ಗುತ್ತಿಗೆ ಬದಲು ಖಾಯಂ ಮಾಡಬೇಕು. ಅದೇ ರೀತಿ ಮತಾಂಧರಿಂದ ಕೊಲೆಗೀಡಾಗಿರುವ ಪರೇಶ್ ಮೇಸ್ತ, ಹರ್ಷ ಹಾಗೂ ರುದ್ರೇಶ್ ಅವರ ಕುಟುಂಬಗಳಿಗೂ ಆಧಾರವಾಗಿರುವಂತಹ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವುದು ಕೇಂದ್ರ ಸರಕಾರದ ಯೋಗ್ಯ ನಿರ್ಧಾರ. ದೇಶದ ಸುರಕ್ಷತೆ ವಿಚಾರದಲ್ಲಿ ರಾಜಿಯಿಲ್ಲ ಎನ್ನುವ ಸಂದೇಶವನ್ನು ಮೋದಿ ಸರಕಾರ ಕೊಟ್ಟಿದೆ. ಕೊಲೆ, ಸುಲಿಗೆ, ಗಲಭೆಗಳು ಪಿಎಫ್ಐ, ಎಸ್ಡಿಪಿಐನಿಂದ ಆಗುತ್ತಿದ್ದು, ಅದಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಇದು ಅಗತ್ಯವಿತ್ತು. ಬ್ಯಾನ್ ಪಿಎಫ್ಐ ವಿಚಾರದಲ್ಲಿ ರಾಮ ಸೇನೆ ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತಿತ್ತು. ಅದಕ್ಕೀಗ ಬಲ ಸಿಕ್ಕಿದೆ ಎಂದರು.
ಕುಂದಾಪುರದ ಪುರಸಭೆ ವ್ಯಾಪ್ತಿಯ ಎದುರಿನ ರಸ್ತೆಯ ಡಾಮರೀಕರಣಕ್ಕೆ ಇಲ್ಲಿನ ಕೆಲ ಮುಸ್ಲೀಮರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಇದು ಸಾರ್ವಜನಿಕರಿಗೆ ಅನುಕೂಲವಾಗುವ ರಸ್ತೆಯಾಗಿದ್ದು, ಇದನ್ನು ಪುರಸಭೆ, ಸರಕಾರ ಅಭಿವೃದ್ಧಿಪಡಿಸಬೇಕಿದೆ. ಈ ಬಗ್ಗೆ ಸರಕಾರ, ಶಾಸಕರು ಗಮನ ಕೊಡಬೇಕು ಎಂದರು.
ಹರ್ಷ ಹತ್ಯೆ ಪ್ರಕರಣದ ಲಾಭ ಪಡೆದ ಬಿಜೆಪಿಗರು, ಆ ಬಳಿಕ ತನಿಖೆಯ ಬಗ್ಗೆ ಗಮನವನ್ನೇ ನೀಡದಿರುವುದು ದುರಂತ. ಇಂತಹ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕಾರ್ಯ ಮಾಡಬೇಕು ಎಂದು ಮುತಾಲಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಪ್ರ.ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ ಕುಂದಾಪುರ, ವಕ್ತಾರ ಶರತ್ ಮಣಿಪಾಲ ಉಪಸ್ಥಿತರಿದ್ದರು.
"ಶ್ರೀರಾಮ ಸೇನೆ ರಾಜಕೀಯ ಪಕ್ಷವಲ್ಲ. ಸಾಂಸ್ಕೃತಿಕ ಸಂಘಟನೆಯಾಗಿದೆ. ಮುಂಬರುವ ಯಾವುದೇ ಚುನಾವಣೆಯಲ್ಲಿ ನಾನಾಗಲಿ, ನಮ್ಮ ಸೇನೆಯ ಯಾರೂ ಸ್ಪರ್ಧಿಸುವುದಿಲ್ಲ. ಹಿಂದೂಧರ್ಮದ ರಕ್ಷಣೆಯೇ ಶ್ರೀರಾಮ ಸೇನೆಯ ಮೂಲ ಧ್ಯೇಯವಾಗಿದ್ದು, ಹಿಂದುತ್ವದ ವಿಚಾರದಲ್ಲಿ ಹೊಂದಾಣಿಕೆಯಾಗುವ ಪ್ರಶ್ನೆಯೇ ಇಲ್ಲ".
-ಪ್ರಮೋದ್ ಮುತಾಲಿಕ್