‘ಸಬ್ ಕೊ ಸನ್ಮತಿ ದೇ ಭಗವಾನ್’ ಕಾರ್ಯಕ್ರಮ
ಉಡುಪಿ, ಅ.8: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಉಡುಪಿ, ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿ, ಲಯನ್ಸ್ ಕ್ಲಬ್ ಉಡುಪಿ-ಚೇತನ, ರೋಟರಿ ಕ್ಲಬ್ ಉಡುಪಿ-ರಾಯಲ್ ಮತ್ತು ತುಳುಕೂಟ ಉಡುಪಿ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿ 153ನೇ ವರ್ಷದ ಸ್ಮರಣಾರ್ಥ ಸ್ವಚ್ಛ ಪರಿಸರ ಬದುಕು ನಮ್ಮದಾಗಲಿ: ಸಬ್ ಕೊ ಸನ್ಮತಿ ದೇ ಭಗವಾನ್ ಕಾರ್ಯಕ್ರಮವು ಸೊಸೈಟಿಯ ಜಗನಾಥ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ತೆಂಕನಿಡಿಯೂರು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಕ್ಕಾರು ಗಣನಾಥ ಶೆಟ್ಟಿ ಉದ್ಘಾಟಿಸಿದರು. ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜನಪದ ಕರಕುಶಲ ಕಲೆ-ಪ್ರಶಸ್ತಿ ಪುರಸ್ಕೃತೆ ರಾಧಮ್ಮ ಹಾಗೂ ಕೈ-ಮಗ್ಗ ನೇಕಾರ ಗೀತಾ ಕೇಶವ ಶೆಟ್ಟಿಗಾರ್ ಅವರನ್ನು ಸನ್ಮಾನಿಸ ಲಾಯಿತು. ಮಹಾತ್ಮಾ ಗಾಂಧಿಯ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಾತ್ಮಾ ಗಾಂಧೀಜಿಯ ಹೆಜ್ಜೆ ಗುರುತು- ಚಿತ್ರಗಳ ಪ್ರದರ್ಶನ, ವಿಶೇಷವಾಗಿ ಚರಕ ಉತ್ಪನ್ನಗಳ ಮಾರಾಟವನ್ನು ಏರ್ಪಡಿಸಲಾಗಿತ್ತು.
ಸಮಾಜ ಸೇವಕ ವಿಶ್ವನಾಥ ಶೆಣೈ, ರೋಟರಿ ಕ್ಲಬ್ ಉಡುಪಿ ರಾಯಲ್ನ ಅಧ್ಯಕ್ಷ ಡಾ.ಬಾಲಕೃಷ್ಣ ಮದ್ದೋಡಿ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷ ಮೋಹನ ಶೆಟ್ಟಿ ಮೂಡನಿಡಂಬೂರು, ಬಡಗಬೆಟ್ಟು ಸೊಸೈಟಿಯ ಉಪಾಧ್ಯಕ್ಷ ಎಲ್.ಉಮಾನಾಥ, ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ಉಡುಪಿ ಜಂಗಮ ಮಠದ ಪ್ರೊ.ಯು.ಸಿ. ನಿರಂಜನ್ ಉಪಸ್ಥಿತರಿದ್ದರು. ಪ್ರೊ.ಮ್ಯೂಸಿಕ ಸುಪ್ರಿಯಾ, ಶ್ರೀಧರ್ ಭಟ್ ಕಲ್ಯಾಣಪುರ ಸಹಕರಿಸಿದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.