ನಿತೀಶ್‌ ಕುಮಾರ್‌ ವಯಸ್ಸಿನಿಂದ ಬಾಧಿತರಾಗಿ ಭ್ರಮೆಗೆ ಒಳಗಾಗಿದ್ದಾರೆ: ಪ್ರಶಾಂತ್‌ ಕಿಶೋರ್‌

Update: 2022-10-09 12:03 GMT
Photo: PTI

ಪಶ್ಚಿಮ ಚಂಪಾರಣ್‌, ಬಿಹಾರ: ನಿತೀಶ್‌ ಕುಮಾರ್‌ಗೆ(Nitish Kumar) ತಿರುಗೇಟು ನೀಡಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ (Prashant Kishor) ಅವರು, ಬಿಹಾರ ಮುಖ್ಯಮಂತ್ರಿ ಅವರು ಭ್ರಮೆಯಲ್ಲಿದ್ದಾರೆ ಮತ್ತು ರಾಜಕೀಯವಾಗಿ ಏಕಾಂಗಿಯಾಗಿದ್ದಾರೆ. ಅವರು ನಿಜವಾಗಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಬೇರೆ ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಿತೀಶ್‌ ಕುಮಾರ್‌ ರವರಿಗೆ ವಯಸ್ಸಾಗಿರುವ ಕಾರಣ ಅರಳುಮರುಳಾಗಿದ್ದು, ಇದು ಅವರ ಮಾತಿನಲ್ಲಿ ಪ್ರತಿಫಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ 'ಜನ್ ಸೂರಜ್' ಅನ್ನು ತರಲು ಇತ್ತೀಚೆಗೆ ರಾಜ್ಯಾದ್ಯಂತ 'ಪಾದಯಾತ್ರೆ' ಆರಂಭಿಸಿರುವ ಪ್ರಶಾಂತ್‌ ಕಿಶೋರ್, 'ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾನೆ' ಎಂಬ ನಿತೀಶ್‌ ಕುಮಾರ್‌ ರ ಹೇಳಿಕೆಗೆಗೆ ಪ್ರತಿಕ್ರಿಯಿಸಿದರು.

"ನಾನು ಬಿಜೆಪಿಯ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಕೇಳಿದ್ದೇನೆ ಎಂದು ಅವರು (ನಿತೀಶ್ ಕುಮಾರ್) ಹೇಳಿದರು. ಅದು ಹೇಗೆ ಸಾಧ್ಯ? ನಾನು ಬಿಜೆಪಿಯನ್ನು ಬೆಂಬಲಿಸುತ್ತಿದ್ದರೆ, ನಾನು ಕಾಂಗ್ರೆಸ್ ಅನ್ನು ಬಲಪಡಿಸಲು ಅವರನ್ನು ಏಕೆ ಕೇಳುತ್ತೇನೆ? ಎರಡನೆಯದ್ದು ಸರಿಯಾಗಿದ್ದರೆ, ಮೊದಲನೆಯದು ತಪ್ಪಾಗುತ್ತದೆ" ಎಂದು ಕಿಶೋರ್ ಎಎನ್‌ಐಗೆ ತಿಳಿಸಿದರು.

"ಅವರು (ಕುಮಾರ್) ತಮ್ಮ ವಯಸ್ಸಿನಿಂದ ಪ್ರಭಾವಿತರಾಗಿದ್ದಾರೆ ಮತ್ತು ಭ್ರಮೆಗೆ ಒಳಗಾಗಿದ್ದಾರೆ. ಅವರು ನಂಬದ ಜನರು ಸುತ್ತುವರೆದಿರುವುದರಿಂದ ಅವರು ರಾಜಕೀಯವಾಗಿ ಪ್ರತ್ಯೇಕಿಸಲ್ಪಟ್ಟಿದ್ದಾರೆ ಮತ್ತು ಈ ಉದ್ವೇಗದಿಂದಾಗಿ ಅವರು ತಮ್ಮ ನೈಜ ಅರ್ಥವನ್ನು ಬಿಟ್ಟು ಬೇರೆಯೇ ಏನನ್ನೋ ಮಾತನಾಡುತ್ತಾರೆ" ಎಂದು ಅವರು ಹೇಳಿದರು. 

ಶನಿವಾರ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, "ಕಿಶೋರ್ ಅವರು ರಾಜಕೀಯ ಪಕ್ಷಗಳಿಗೆ ಚುನಾವಣೆಗಳನ್ನು ಗೆಲ್ಲಲು ಮತ್ತು ಜನರ ಮೇಲೆ ಪ್ರಭಾವ ಬೀರಲು ಸಹಾಯ ಮಾಡಿದ್ದಾರೆ. ಆದರೆ, ಅವರು ಈಗ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕಿಶೋರ್ ಅವರು ತಮ್ಮ ಜೆಡಿ (ಯು) ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಸಲಹೆ ನೀಡಿದ್ದರು" ಎಂದು ಅವರು ಹೇಳಿದರು. ಅಕ್ಟೋಬರ್ 5 ರಂದು‌ ಹೇಳಿಕೆ ನೀಡಿದ್ದ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ತಮ್ಮನ್ನು ಅವರ ನಿವಾಸಕ್ಕೆ ಆಹ್ವಾನಿಸಿದ್ದಾರೆ ಮತ್ತು ಅವರ ಪಕ್ಷಕ್ಕೆ ಸೇರಿ ಅದನ್ನು ಮುನ್ನಡೆಸುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದ್ದರು.

ಈ ಹಿಂದೆ ಪ್ರಶಾಂತ್ ಕಿಶೋರ್ ಅವರು ಜೆಡಿ (ಯು) ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸಣ್ಣ ಅವಧಿಗೆ ಸೇವೆ ಸಲ್ಲಿಸಿದ್ದರು. ಆದರೆ ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News