ಕಾಪು: ನಿವೃತ್ತ ಯೋಧ ಹಾಜಿ ಅಬ್ದುರ್ರಝಾಕ್ ಶಾಬಾನ್ ನಿಧನ
ಕಾಪು: ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮೂಳೂರು ನಿವಾಸಿ ಹಾಜಿ ಅಬ್ದುರ್ರಝಾಕ್ ಶಾಬಾನ್ (85) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು.
18ನೇ ವಯಸ್ಸಿನಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ಅಬ್ದುರ್ರಝಾಕ್ ಶಾಬಾನ್ ಅವರು ಎರಡು ವರ್ಷ ಬೆಂಗಳೂರಿನ ಏರ್ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ಕಮ್ಯುನಿಕೇಶನ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದು ಬಳಿಕ ಕಮ್ಯುನಿಕೇಶನ್ ಆಫಿಸರ್ ಆಗಿ ಕಾರ್ಯನಿರ್ವಹಿಸಿದ್ದರು.
ವಾಯುಸೇನಾ ಕಾಲಾವಧಿಯಲ್ಲಿ ದೆಹಲಿ, ಆಗ್ರ, ಲಕ್ನೋ, ಹಲ್ವಾರ ಪ್ರದೇಶ ಹಾಗು ಹಿಮಾಲಯದ ತಪ್ಪಲಿನ ಲಡಾಖ್ ಸೇನಾ ನೆಲೆಯಲ್ಲೂ ಸಾಹಸಿಕ ಕಾರ್ಯಾಚರಣೆ ನಡೆಸಿದ್ದರು.
1962ರ ಚೀನಾ ಯುದ್ಧ, 1965ರ ಪಾಕಿಸ್ತಾನ ಯುದ್ಧ ಹಾಗೂ 1971ರ ಪಾಕಿಸ್ತಾನದ ವಿರುದ್ಧ ಸಮರ ಸೇನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಮೆಡಲ್ಗಳಿಂದ ಪುರಸ್ಕೃತರಾದರು. 1975ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ ನಂತರ ಧಾರ್ಮಿಕ ಸೇವಾರಂಗದಲ್ಲಿ ತೊಡಗಿಸಿಕೊಂಡಿದ್ದರು.
ಮೂಳೂರಿನ ಮಸೀದಿಯ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಮೂರು ಭಾರಿ ಮದ್ರಸದ ಹಾಗೂ ಒಂದು ಭಾರಿ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯೂ ಆಗಿದ್ದ ಇವರು ತಂದೆಯ ಹೆಸರಿನಲ್ಲಿ ಮುಹಮ್ಮದ್ ಶಾಬಾನ್ ಟ್ರಸ್ಟ್ ಸ್ಥಾಪಿಸಿ ಅಸಕ್ತ ಕುಟುಂಬಗಳಿಗೆ ಧನಸಹಾಯ ನೀಡುತ್ತಿದ್ದರು.
ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಅಲ್ ಕೋಬರ್ ಮತ್ತು ದುಬೈ ಪ್ರತಿನಿಧಿಯಾಗಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತಿನ ಮಾಜಿ ಅಧ್ಯಕ್ಷರಾಗಿದ್ದರು. ಇವರು ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಹಾಜಿ ಅಬ್ದುರ್ರಝಾಕ್ ಶಾಬಾನ್ ಅವರು ಪತ್ನಿ, ಗಂಡು ಮಕ್ಕಳು, ಬಂಧುಬಳಗವನ್ನು ಅಗಲಿದ್ದಾರೆ.