ಕೃಷಿ ಸಖಿಯರ ತರಬೇತಿ ಕಾರ್ಯಕ್ರಮ ಸಮಾರೋಪ
ಉಡುಪಿ, ಅ.15: ಉಡುಪಿ ಜಿಪಂ, ರಾಷ್ಟ್ರೀಯ ಗ್ರಾಮೀಣ ಜೀವನೋ ಪಾಯ ಅಭಿಯಾನ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯ ದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ(ಕೃಷಿ ಸಖಿ ಯರಿಗೆ) ಪರಿಸರ ಕೃಷಿ ವಿಧಾನಗಳ ಕುರಿತ 6 ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಶನಿವಾರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಅಭಿಯಾನದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್ ಮಾತನಾಡಿ, ಈಗಾಗಲೇ ಸರಕಾರದಿಂದ ಗ್ರಾಪಂ ಮಟ್ಟದ ಒಕ್ಕೂಟದಲ್ಲಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೃಷಿ ಜೀವನೋಪಾಯ ವಿಷಯಗಳ ಬಗ್ಗೆ ಮಾಹಿತಿ, ವಿವಿಧ ತರಬೇತಿ ಹಾಗು ಸರಕಾರದ ಯೋಜನೆಗಳನ್ನು ತಲುಪಿಸಲು ಕೃಷಿ ಸಖಿಯರನ್ನು ನಿಯೋಜನೆ ಮಾಡಲಾಗಿದೆ. ಈ ಕೃಷಿ ಸಖಿಯರು ತಮ್ಮ ಗ್ರಾಮದ ಸಂಜೀವಿನಿ ಮಹಿಳೆಯರಿಗೆ ಕೃಷಿ ಸಂಬಂಧಿಸಿದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ್ ಮಾತನಾಡಿ, ಪ್ರತಿಯೊಂದು ಕೃಷಿ ಸಖಿಯರು ಕೃಷಿ ಹಿನ್ನಲೆಯಿಂದ ಬಂದವರಾಗಿರಿವುದರಿಂದ ಇತರೆ ಮಹಿಳೆಯರಿಗೆ ಕೃಷಿ ಬಗ್ಗೆ ಉತ್ತಮ ಮಾರ್ಗದರ್ಶನ ನೀಡ ಬೇಕು. ಇಂದು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳಷ್ಟು ಅಭಿವೃದ್ಧಿಗೊಳುತ್ತಿದ್ದು ಅದಕ್ಕೆ ಪೂರಕವಾಗಿ ಯೋಜನೆ ಗಳನ್ನು ಗ್ರಾಮೀಣ ಮಹಿಳೆಯರಿಗೆ ತಲುಪಿಸಲು ಪ್ರಯತ್ನಸಬೇಕೆಂದು ತಿಳಿಸಿದರು.
ಕೇಂದ್ರದ ವಿಜ್ಞಾನಿ ಡಾ.ಚೈತನ್ಯ ಎಚ್.ಎಸ್., ಜಿಪಂ ಜಿಲ್ಲಾ ವ್ಯವಸ್ಥಾಪಕ ನವ್ಯ ಉಪಸ್ಥಿತರಿದ್ದರು. ಜಿಪಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಸ್ವಾಗತಿಸಿದರು. ಯುವ ವೃತ್ತಿಪರ ಜಯಮಾಲಾ ವಂದಿಸಿದರು. ಕೇಂದ್ರದ ವಿಜ್ಞಾನಿ ಡಾ.ಸಚಿನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.