ಕೊಂಕಣ ರೈಲ್ವೆಯಿಂದ ಸಂಸ್ಥಾಪನಾ ದಿನಾಚರಣೆ
ಉಡುಪಿ, ಅ.17: ಕೊಂಕಣ ರೈಲ್ವೆಯ 32ನೇ ಸ್ಥಾಪನಾ ದಿನಾಚರಣೆಯು ನವಿ ಮುಂಬಯಿ ನೆರುಲಾದ ಕೊಂಕಣ ರೈಲು ವಿಹಾರದಲ್ಲಿ ರವಿವಾರ ಸಂಭ್ರಮ ದಿಂದ ನಡೆಯಿತು.
ಕೆಆರ್ಸಿಎಲ್ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕ ಸಂಜಯ್ ಗುಪ್ತಾ ಅವರು ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಳೆ 32 ವರ್ಷಗಳಲ್ಲಿ ನಿಗಮವು ತನ್ನ ಗ್ರಾಹಕರಿಗೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿ ಸಿಬ್ಬಂದಿಗಳೂ ಅತ್ಯುತ್ತಮ ಸೇವೆ ಸಲ್ಲಿಸಿ ನಿಗಮದ ಏಳಿಗೆಗೆ ಕಾರಣರಾಗಿದ್ದಾರೆ ಎಂದರು.
ಕಳೆದ 18 ತಿಂಗಳಲ್ಲಿ ನಿಗಮವು ಹಲವು ಸಾಧನೆಗಳನ್ನು ಮಾಡಿದೆ. ಇವುಗಳಲ್ಲಿ ರೋಹಾ ಹಾಗೂ ವೀರ್ ನಡುವೆ ಹಳಿ ದ್ವಿಪಥ ಪೂರ್ಣಗೊಂಡಿರುವುದು, 10 ಹೊಸ ನಿಲ್ದಾಣಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸಿರುವುದು, ಇಡೀ ಕೊಂಕಣ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿರುವುದು, ಡೆಮು ರೈಲು ಸೇವೆಗೆ ಕಳೆದ ಎಪ್ರಿಲ್ನಲ್ಲಿ ಪ್ರಧಾನಿ ಚಾಲನೆ ನೀಡಿರುವುದು ಸೇರಿವೆ ಎಂದರು.
ನಿಗಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಪ್ರಶಸ್ತಿ ಹಾಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.