‘ಉಡುಪಿ ವೈಭವ’ ಕಾರ್ಯಕ್ರಮದ ಬೃಹತ್ ಮೆರವಣಿಗೆ
ಉಡುಪಿ, ಅ.17: ಕರ್ನಾಟಕ ರಾಜ್ಯ ಶಾಮಿಯಾನ, ಡಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ಗಂಗಾವತಿ, ಆಲ್ ಇಂಡಿಯಾ ಟೆಂಟ್ ಆ್ಯಂಡ್ ಡೆಕೋರೇಟರ್ಸ್ ವೆಲ್ಫೇರ್ ಅಸೋಸಿಯೇಶನ್ ನವದೆಹಲಿ, ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ ಇದರ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಳ್ಳ ಲಾಗಿರುವ ರಾಜ್ಯಮಟ್ಟದ ೨ನೇ ಮಹಾಅಧಿವೇಶನ ಹಾಗೂ ಉಡುಪಿ ಜಿಲ್ಲಾ ದಶಮಾನೋತ್ಸವದ ‘ಉಡುಪಿ ವೈಭವ’ ಕಾರ್ಯ ಕ್ರಮದ ಮೆರವಣಿಗೆಗೆ ಸೋಮವಾರ ನಗರದ ಜೋಡುಕಟ್ಟೆಯಲ್ಲಿ ಚಾಲನೆ ನೀಡಲಾಯಿತು.
ಮೆರವಣೆಗೆಯಲ್ಲಿ ಚಂಡೆ ವಾದನ, ವಿವಿಧ ಜಿಲ್ಲೆಯ ಸಮಿತಿಯಿಂದ ವಿವಿಧ ಬಗೆಯ ಗಣಪತಿ, ಶ್ರೀಕೃಷ್ಣ, ನಾರಾಯಣ ಗುರು, ಭಾರತ ಮಾತೆ, ಕನ್ನಡ ಭುವನೇಶ್ವರಿ, ಶ್ರೀಲಕ್ಷ್ಮೀ ದೇವಿಯ, ಜೈ ಹನುಮಾನ್, ವೆಂಕಟರಮಣ, ಮಹಾ ವೀರ, ಜೋಗದ ವೈಭವ, ಮಹಾಕಾಳಿ, ಯಕ್ಷಗಾನ, ರಜತ ರಥ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ವಿವಿಧ ಟ್ಯಾಬ್ಲೋಗಳು ಸಾಗಿಬಂದವು.
ಜೋಡುಕಟ್ಟೆಯಿಂದ ಹೊರಟ ಮೆರವಣಿಗೆಯು ಕೋರ್ಟ್ ರೋಡ್, ಹಳಿ ಡಯಾನಾ ಸರ್ಕಲ್, ಕೆ.ಎಂ.ಮಾರ್ಗ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ, ಶಾರದಾ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಸಮಾಪ್ತಿ ಗೊಂಡಿತು. ಉಡುಪಿ ಜಿಲ್ಲಾ ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಜ್ ಮಲ್ಲಾರ್, ರಾಜ್ಯಾಧ್ಯಕ್ಷ ಶಿವಕುಮಾರ್ ಹಿರೇಮಠ, ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್, ಪ್ರಧಾನ ಕಾರ್ಯದರ್ಶಿ ದಾಮೋದರ್, ಜಿಲ್ಲಾ ಶಾಮಿಯಾನ ಅಧ್ಯಕ್ಷ ಉದಯಕುಮಾರ್, ರಾಜ್ಯ ಸಮಿತಿ ಸದಸ್ಯರು ಹಾಗೂ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.