ಮೈಸೂರಿನ ಹೈದರ್ ಮತ್ತು ಟಿಪ್ಪು ಅಮೆರಿಕದ ಕ್ರಾಂತಿಕಾರಿಗಳಿಗೂ ಸ್ಫೂರ್ತಿಯಾಗಿದ್ದರೆಂಬುದು ನಿಮಗೆ ಗೊತ್ತೇ?

Update: 2022-10-19 02:30 GMT

ವಸಾಹತುಶಾಹಿ ಬ್ರಿಟಿಷರು ಮತ್ತು ಬ್ರಾಹ್ಮಣೀಯ ಹಿಂದುತ್ವವಾದಿ ಇತಿಹಾಸಕಾರರು ಬಚ್ಚಿಡಲಾಗದ ಮತ್ತು ಮುಚ್ಚಿಡಲಾಗದ ಟಿಪ್ಪು ಮತ್ತು ಹೈದರ್‌ರನ್ನು ಬರೀ ಕರ್ನಾಟಕವಲ್ಲ, ಅಮೆರಿಕ ಮತ್ತು ಫ್ರಾನ್ಸನ್ನು ಒಳಗೊಂಡಂತೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಮೆಚ್ಚಿಕೊಂಡಿತ್ತು ಎಂಬ ಸಂಗತಿಗಳನ್ನು ಇತ್ತೀಚಿನ ಹಲವಾರು ಅಧ್ಯಯನಗಳು ಹೊರತಂದಿವೆ. ಹಾಗೆ ನೋಡಿದರೆ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಕೆಲವೇ ಭಾರತೀಯರಲ್ಲಿ ನಮ್ಮ ನಾಡಿನ ಹೈದರ್ ಮತ್ತು ಟಿಪ್ಪುರವರು ಎಲ್ಲರಿಗಿಂತ ಮೊದಲಿಗರು ಎಂಬುದು ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯವಾಗಬೇಕಿತ್ತು. ಆದರೆ ಇಂದು ನಮ್ಮಿಂದ ನಮ್ಮ ಹೆಮ್ಮೆಯನ್ನು ಕಿತ್ತುಕೊಳ್ಳಲಾಗುತ್ತಿದೆ.



ಸಂಸದ ಪ್ರತಾಪ ಸಿಂಹ ಅವರೇ, ತಾವು ಮೈಸೂರಿನ ಸಂಸದರಾಗಿದ್ದೀರಿ. ಆದರೆ ಮೈಸೂರಿನ ಹಿರಿಮೆಯನ್ನು ತಮ್ಮ ಆಳ್ವಿಕೆಯ ಕಾಲದಲ್ಲಿ ಅಮೆರಿಕವೂ ಒಳಗೊಂಡಂತೆ ಇಡೀ ಜಗತ್ತೇ ಅಚ್ಚರಿಯಿಂದ ಹಾಗೂ ಕಾಳಜಿಯಿಂದ ಮೆಚ್ಚಿಕೊಳ್ಳುವಂತೆ ಮಾಡಿದ್ದ ಟಿಪ್ಪು ಮತ್ತು ಹೈದರ್ ಅವರನ್ನು ಶ್ರೀರಂಗಪಟ್ಟಣಕ್ಕೆ ಹಾಗೂ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ದ್ವೇಷ ರಾಜಕಾರಣ ಮಾಡಲು ಹೊರಟಿದ್ದೀರಿ. ತಮ್ಮ ಪಕ್ಷದ ದ್ವೇಷ ರಾಜಕಾರಣದ ಭಾಗವಾಗಿ ಟಿಪ್ಪುಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಬದಲಾಯಿಸಿದ್ದೇನೆಂದು ಕೊಚ್ಚಿಕೊಳ್ಳುತ್ತಾ ‘‘ಟಿಪ್ಪು ಶ್ರೀರಂಗಪಟ್ಟಣದವನು ಆತನಿಂದ ಮೈಸೂರಿಗೆ ಏನು ಅನುಕೂಲ ಆಗಿದೆ’’ ಇನ್ನಿತ್ಯಾದಿ ಹುಂಬ ಹಾಗೂ ಹಸಿಹಸಿ ಮುಸ್ಲಿಮ್ ದ್ವೇಷದ ಪ್ರಶ್ನೆಗಳನ್ನು ಕೇಳಿದ್ದೀರಿ. ಆದರೆ ಅದೇ ರೀತಿ ಸಾವರ್ಕರ್ ಹೆಸರನ್ನು ಬೆಂಗಳೂರಿನ ರಸ್ತೆಗೆ ಇಡುವಾಗ ಇದೇ ಪ್ರಶ್ನೆ ಏಕೆ ಕೇಳಲಿಲ್ಲ ಎಂದು ಕೆಲವು ಕನ್ನಡಿಗರು ಕೇಳಿದ ಪ್ರಶ್ನೆಗೆ ತಮ್ಮಿಂದ ಇನ್ನೂ ಉತ್ತರ ಬಂದಿಲ್ಲ. ಅದಿರಲಿ. ನಮ್ಮ ಟಿಪ್ಪುಮತ್ತು ಹೈದರಲಿಯವರು ಇಡೀ ಮೈಸೂರು ಸಂಸ್ಥಾನವಲ್ಲ, ಇಡೀ ಭಾರತವಲ್ಲ ಬದಲಿಗೆ ದೂರದ ಅಮೆರಿಕದ ಕ್ರಾಂತಿಕಾರಿಗಳಿಗೂ, ಫ್ರಾನ್ಸಿನ ಕ್ರಾಂತಿಕಾರಿಗಳಿಗೂ ಸ್ಫೂರ್ತಿಯಾಗಿದ್ದರು ಎಂಬುದು ನಿಮಗೆ ಗೊತ್ತೆ? ಮನುಕುಲದ ಕಂಟಕರಾದ ಹಿಟ್ಲರ್-ಮುಸ್ಸೋಲಿನಿಯಿಂದ ಸ್ಫೂರ್ತಿ ಪಡೆದ ನಿಮ್ಮ ಸಾವರ್ಕರ್ ರನ್ನು ಭಾರತದ ಹೆಮ್ಮೆಯೆಂದು ಅಪಪ್ರಚಾರ ಮಾಡುವ ನೀವು, ಸ್ವಾತಂತ್ರ್ಯ-ಸಮಾನತೆಯ ಕನಸಿನೊಂದಿಗೆ ಅಮೆರಿಕದಲ್ಲಿ ಕ್ರಾಂತಿ ಮಾಡಿದ ಅಮೆರಿಕದ ಕ್ರಾಂತಿಕಾರಿಗಳಾದ ವಾಶಿಂಗ್‌ಟನ್, ಜೆಫರ್ಸನ್‌ರಿಗೂ ಸ್ಫೂರ್ತಿಯಾಗಿದ್ದ ನಮ್ಮ ನಾಡಿನ ಹೈದರ್ ಮತ್ತು ಟಿಪ್ಪುರನ್ನು ಮಾತ್ರ ಹೀಗಳೆಯುವುದು ನಾಡದ್ರೋಹ ಹಾಗೂ ದೇಶದ್ರೋಹವಲ್ಲವೇ?

ಮಿಕ್ಕೆಲ್ಲಾ ವಿಷಯದಲ್ಲೂ ಬ್ರಿಟಿಷರು ಬರೆದ ಇತಿಹಾಸವನ್ನು ಭಾರತೀಕರಿಸಬೇಕು (ಅರ್ಥಾತ್ ಬ್ರಾಹ್ಮಣೀಕರಿಸಬೇಕು) ಎನ್ನುವ ತಾವು ಮತ್ತು ತಮ್ಮ ಸಂಘಿ ಮಿತ್ರರು ಬ್ರಿಟಿಷ್ ವಸಾಹತುಶಾಹಿಗಳು ಟಿಪ್ಪುವನ್ನು ದುರುಳೀಕರಿಸಲು ತಮ್ಮ ಮೂಗಿನ ನೇರಕ್ಕೆ ಬರೆದ ಇತಿಹಾಸವನ್ನು ಮಾತ್ರ ಪರಮ ಸತ್ಯವೆಂದು ಹೇಗೆ ವಾದಿಸುತ್ತೀರಿ!? ಅದೇನೇ ಇರಲಿ ವಸಾಹತುಶಾಹಿ ಬ್ರಿಟಿಷರು ಮತ್ತು ಬ್ರಾಹ್ಮಣೀಯ ಹಿಂದುತ್ವವಾದಿ ಇತಿಹಾಸಕಾರರು ಬಚ್ಚಿಡಲಾಗದ ಮತ್ತು ಮುಚ್ಚಿಡಲಾಗದ ಟಿಪ್ಪು ಮತ್ತು ಹೈದರ್‌ರನ್ನು ಬರೀ ಕರ್ನಾಟಕವಲ್ಲ, ಅಮೆರಿಕ ಮತ್ತು ಫ್ರಾನ್ಸನ್ನು ಒಳಗೊಂಡಂತೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಮೆಚ್ಚಿಕೊಂಡಿತ್ತು ಎಂಬ ಸಂಗತಿಗಳನ್ನು ಇತ್ತೀಚಿನ ಹಲವಾರು ಅಧ್ಯಯನಗಳು ಹೊರತಂದಿವೆ. ಹಾಗೆ ನೋಡಿದರೆ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಕೆಲವೇ ಭಾರತೀಯರಲ್ಲಿ ನಮ್ಮ ನಾಡಿನ ಹೈದರ್ ಮತ್ತು ಟಿಪ್ಪುರವರು ಎಲ್ಲರಿಗಿಂತ ಮೊದಲಿಗರು ಎಂಬುದು ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯವಾಗಬೇಕಿತ್ತು. ಆದರೆ ಇಂದು ನಮ್ಮಿಂದ ನಮ್ಮ ಹೆಮ್ಮೆಯನ್ನು ಕಿತ್ತುಕೊಳ್ಳಲಾಗುತ್ತಿದೆ. ನಮ್ಮ ಮೈಸೂರಿನ ಹೈದರಲಿ ಖಾನ್ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳು ಒಂದು ವೀರೋಚಿತ ಸ್ವಾತಂತ್ರ್ಯ ಸಮರವಾಗಿ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು ಹಾಗೂ ಹೈದರ್ ಮತ್ತು ಟಿಪ್ಪುವಿನ ಗೆಲುವಿನಿಂದ ಅಮೆರಿಕ ಮತ್ತು ಇಡೀ ಜಗತ್ತೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಬಂಧಬಾಹುಗಳಿಂದ ವಿಮೋಚನೆಯಾಗುತ್ತದೆಂಬ ಆಶಾಭಾವನೆಯಿಂದ ಆಂಗ್ಲೋ-ಮೈಸೂರು ಯುದ್ಧಗಳನ್ನು ಗಮನಿಸುತ್ತಿದ್ದರು. ಹೈದರ್-ಟಿಪ್ಪುಗೆದ್ದಾಗ ಇಡೀ ಅಮೆರಿಕ ಸಂಭ್ರಮಗೊಳ್ಳುತ್ತಿತ್ತು ಮತ್ತು ಅವರಿಬ್ಬರೂ ವೀರರಾಗಿ ಸಾವನ್ನಪ್ಪಿದ್ದಾಗ ಇಡೀ ಅಮೆರಿಕವೇ ಕಣ್ಣೀರಿಟ್ಟಿತು. ಹೀಗಾಗಿಯೇ ತಾವು ಮತ್ತು ತಮ್ಮ ಬಿಜೆಪಿ ಸರಕಾರ ಎಷ್ಟೇ ಪ್ರಯತ್ನಪಟ್ಟರೂ ಅಮೆರಿಕದ ನಾಸಾದಲ್ಲಿ ಈಗಲೂ ಜತನದಿಂದ ಕಾಪಿಟ್ಟಿರುವ ಟಿಪ್ಪುವಿನ ಹಾಗೂ ಈ ಜಗತ್ತಿನ ಮೊತ್ತ ಮೊದಲ ಕ್ಷಿಪಣಿಯ ಇತಿಹಾಸವನ್ನು ಅಳಿಸಿಹಾಕಲಾಗಿಲ್ಲ. ಹಾಗೆಯೇ ಅಮೆರಿಕದ ಆಳುವ ವರ್ಗ ಎಷ್ಟೇ ಇಸ್ಲಾಮೋಫೋಬಿಕ್ ಆಗಿದ್ದರೂ ಅಮೆರಿಕದ ಕ್ರಾಂತಿಯ ಇತಿಹಾಸದಲ್ಲಿ ಹೈದರ್ ಮತ್ತು ಟಿಪ್ಪುರವರ ಹೋರಾಟದ ಬಗ್ಗೆ ದಾಖಲಾಗಿರುವ ಅಪಾರ ಗೌರವವನ್ನು ಅಳಿಸಲಾಗಿಲ್ಲ. ಅದೇ ರೀತಿ ನಮ್ಮ ಸಂವಿಧಾನದ ಮೂಲ ಕೃತಿಯಲ್ಲಿ ಈ ದೇಶದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಲ್ಲಿ ಟಿಪ್ಪು ಚಿತ್ರವೂ ಇರುವುದನ್ನು ಕಿತ್ತುಹಾಕಲಾಗಿಲ್ಲ. ಇದು ನಾವರಿಯದ ನಮ್ಮ ಚರಿತ್ರೆ. ತಮ್ಮಂಥ ಆಳುವವರ್ಗಗಳು ಜನರು ಮರೆಯಬೇಕೆಂದು ಬಯಸುವ ನಮ್ಮ ಹೆಮ್ಮೆಯ ಚರಿತ್ರೆ.

ಆದರೆ ಅಧಿಕಾರಸ್ಥರ ವಿರುದ್ಧ ವ್ಯಕ್ತಿಯು ನಡೆಸುವ ಹೋರಾಟವು ಮರೆವಿನ ವಿರುದ್ಧ ನೆನಪು ನಡೆಸುವ ಹೋರಾಟವೇ ಆಗಿರುತ್ತದೆ. ಆದ್ದರಿಂದ ಅಮೆರಿಕ ಸಾಮ್ರಾಜ್ಯಶಾಹಿ ಸರಕಾರ ಹಾಗೂ ಭಾರತದ ಹಿಂದುತ್ವವಾದಿ ಸರಕಾರ ಕಿತ್ತುಹಾಕ ಬಯಸುವ ನಮ್ಮ ಹೆಮ್ಮೆಯ ಇತಿಹಾಸದ ಕೆಲವು ಪುಟಗಳನ್ನು ಈ ಲೇಖನದಲ್ಲಿ ಮತ್ತೆ ನೆನಪಿಸಲಾಗಿದೆ.

ಬ್ರಿಟಿಷ್ ವಸಾಹತುಶಾಹಿ-ಸಮಾನ ಶತ್ರು
 15ನೇ ಶತಮಾನದಲ್ಲಿ ಕೊಲಂಬಸನು ಅಮೆರಿಕಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದ ನಂತರ ಮೂಲ ಯುರೋಪಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಯುರೋಪಿಯನ್ನರು ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದರು. 16-17ನೇ ಶತಮಾನದುದ್ದಕ್ಕೂ ಬ್ರಿಟಿಷ್, ಫ್ರೆಂಚ್, ಸ್ಪಾನಿಷ್ ಹಾಗೂ ಪೋರ್ಚುಗೀಸ್ ವಸಾಹತುಶಾಹಿಗಳು ಅಮೆರಿಕದ ಮೂಲನಿವಾಸಿಗಳನ್ನು ಕೊಂದು-ಬಗ್ಗುಬಡಿದು, ಅಮೆರಿಕ ಖಂಡದ ವಿವಿಧ ಭಾಗಗಳನ್ನು ತಮ್ಮ ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡರು.

ಅದೇ ಸಮಯದಲ್ಲಿ ಇಡೀ ಜಗತ್ತಿನ ಏಕಾಧಿಪತ್ಯಕ್ಕಾಗಿ ಫ್ರೆಂಚ್ ಮತ್ತು ಬ್ರಿಟಿಷರ ನಡುವೆ ಯುರೋಪಿನಲ್ಲಿ ನಡೆಯುತ್ತಿದ್ದ ಸಂಘರ್ಷ ಆಫ್ರಿಕಾ, ಏಶ್ಯ ಹಾಗೂ ಅಮರಿಕದ ವಸಾಹತುಗಳಲ್ಲೂ ಮುಂದುವರಿಕೆಯಾಗುತ್ತಿದ್ದವು. ಭಾರತದ ಮೇಲಿನ ಅಧಿಪತ್ಯಕ್ಕಾಗಿ ಕಾದಾಡುತ್ತಿದ್ದಂತೆ ಅಮೆರಿಕದ ಮೇಲಿನ ತಮ್ಮ ಏಕಾಧಿಪತ್ಯಕ್ಕಾಗಿಯೂ ಫ್ರೆಂಚ್ ಮತ್ತು ಬ್ರಿಟಿಷರು ಕಾದಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯವಾದಿ ಸರಕಾರಕ್ಕೂ ಮತ್ತು ಅದರಡಿಯಲ್ಲಿ ಸೀಮಿತ ಸ್ಥಳೀಯಾಧಿಕಾರವನ್ನು ಹೊಂದಿದ್ದ ಅಮೆರಿಕದ ಯುರೋಪಿಯನ್ ಮೂಲದ ನೆಲೆಸಿಗ ವರ್ತಕ ಹಾಗೂ ಇತರ ಜನವರ್ಗಗಳಿಗೂ ದೊಡ್ಡ ವ್ಯಾವಹಾರಿಕ ವೈರುಧ್ಯ ಏರ್ಪಡುತ್ತಿತ್ತು. ತನ್ನ ಆಳ್ವಿಕೆಯಲ್ಲಿರುವ ಅಮೆರಿಕನ್ ವಸಾಹತುಗಳ ಬಗ್ಗೆ ಬ್ರಿಟಿಷ್ ಸರಕಾರ ಜಾರಿ ಮಾಡುತ್ತಿದ್ದ ಕಾನೂನುಗಳೆಲ್ಲವೂ ನೆಲೆಸಿಗ ಅಮೆರಿಕನ್ನರಿಗಿಂತ ಬ್ರಿಟನ್‌ನ ಹಿತಾಸಕ್ತಿಗಳಿಗೆ ಮಾತ್ರ ಅನುಕೂಲವಾಗಿರುತ್ತಿದ್ದವು ಮತ್ತು ನಿಚ್ಚಳವಾಗಿ ತಾರತಮ್ಯಗಳಿಂದ ಕೂಡಿರುತ್ತಿದ್ದವು. ಜೊತೆಗೆ ಬ್ರಿಟನ್ ಸರಕಾರ ಅಮೆರಿಕದ ನೆಲೆಸಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಪರಿಗಣಿಸುತ್ತಿತ್ತು. ಇದು ಬ್ರಿಟನ್ ಸಾಮ್ರಾಜ್ಯದ ವಿರುದ್ಧ ಅಮೆರಿಕದ ನೆಲೆಸಿಗ ಯೂರೋಪಿಯನ್ನರಲ್ಲಿ ಅಪಾರವಾದ ಅಸಮಾಧಾನ ಹುಟ್ಟಿಹಾಕಿತ್ತು. ಅಮೆರಿಕದ ವ್ಯಾಪಾರಿಗಳ ಹಿತಾಸಕ್ತಿಯನ್ನು ಬಲಿಗೊಟ್ಟು ಬ್ರಿಟನ್‌ನ ಟೀ ವ್ಯಾಪಾರಿಗಳಿಗೆ ಲಾಭ ಹೆಚ್ಚಿಸುವ ಉದ್ದೇಶದಿಂದ ಬ್ರಿಟನ್ 1773ರಲ್ಲಿ ಹೊಸ ಟೀ ತೆರಿಗೆ ನೀತಿ ಜಾರಿ ಮಾಡಿದ ನಂತರ ಹೆಪ್ಪುಗಟ್ಟಿದ ಅಸಮಾಧಾನ ಬೃಹತ್ ಆಕ್ರೋಶವಾಗಿ ಸ್ಫೋಟವಾಯಿತು. 1773ರ ಡಿಸೆಂಬರ್ 16ರಂದು ಬ್ರಿಟನ್‌ನಿಂದ ಆಮದಾದ ಟೀಯನ್ನೆಲ್ಲಾ ಸಮುದ್ರಕ್ಕೆ ಎಸೆದ -ಬೋಸ್ಟನ್ ಟೀಪಾರ್ಟಿ ಯೆಂದು ಪ್ರಖ್ಯಾತವಾಗಿರುವ ಪ್ರತಿರೋಧದ ಮೂಲಕ ಅಮೆರಿಕನ್ನರ ಹೋರಾಟ ಹೊಸ ಮಜಲನ್ನು ಮುಟ್ಟಿತು.

ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ವಸಾಹತುಶಾಹಿಗಳು ಮ್ಯಾಸಚುಸೆಟ್ಸ್ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿದ್ದ ಸ್ವಯಮಾಡಳಿತ ಹಕ್ಕನ್ನು ರದ್ದುಮಾಡಿತ್ತು. ಇವೆಲ್ಲವೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆರ್ಥಿಕ ನೆಲೆಯಲ್ಲಿ ಮಡುಗಟ್ಟುತ್ತಿದ್ದ ಅಸಮಾಧಾನವನ್ನು ರಾಜಕೀಯ ಸ್ವಾತಂತ್ರ್ಯದ ಹೋರಾಟವನ್ನಾಗಿ ರೂಪಿಸಿತು. 1774ರಲ್ಲಿ ಬ್ರಿಟಿಷ್ ಅಡಿಯಲ್ಲಿದ್ದ ಅಮೆರಿಕದ 18 ಸಂಸ್ಥಾನಗಳು ಮೊತ್ತಮೊದಲ ಬಾರಿಗೆ ಒಟ್ಟು ಸೇರಿ ಅಮೆರಿಕ ಖಂಡಮಟ್ಟದ ಸಮ್ಮೇಳನವನ್ನು ನಡೆಸಿ ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿದವು. ಮರುವರ್ಷದಿಂದಲೇ ಅಮೆರಿಕದ ಹೋರಾಟಗಾರರಿಗೂ ಹಾಗೂ ಬ್ರಿಟಿಷ್ ಸೇನೆಯ ನಡುವೆ ಸಶಸ್ತ್ರ ಕಾದಾಟ ಪ್ರಾರಂಭವಾಗುವ ಮೂಲಕ ಅಮೆರಿಕ ಕ್ರಾಂತಿ ಪ್ರಾರಂಭವಾಯಿತು. 1776 ಜುಲೈ 4 ಅಮೆರಿಕನ್ ವಸಾಹತುಗಳ ಎರಡನೇ ಖಂಡಾಂತರ ಸಮ್ಮೇಳನದಲ್ಲಿ ಅಮೆರಿಕನ್ ಕ್ರಾಂತಿಕಾರಿಗಳು ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದರೂ ಮುಂದಿನ ಐದು ವರ್ಷಗಳ ಕಾಲ ಅಮೆರಿಕನ್ ಕ್ರಾಂತಿಕಾರಿಗಳು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ನಡುವೆ ಘನಘೋರ ಸಶಸ್ತ್ರ ಸಂಘರ್ಷವೂ ನಡೆಯಿತು.

ಹೈದರ್-ಟಿಪ್ಪು- ಅಮೆರಿಕನ್ನರ ಸಮರ ಸಂಗಾತಿಗಳು

ಈ ಸಂದರ್ಭದಲ್ಲೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಜಗತ್ತಿನ ಇತರ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳು ವಿಜಯಿಯಾಗುವುದು ತಮ್ಮ ವಿಜಯಕ್ಕೂ ಪೂರ್ವಶರತ್ತು ಎಂಬುದನ್ನು ಅಮೆರಿಕದ ಕ್ರಾಂತಿಕಾರಿಗಳು ಅರ್ಥಮಾಡಿಕೊಂಡರು. ಅದರ ಭಾಗವಾಗಿ ಜಗತ್ತಿನ ವಿವಿಧ ಕಡೆಗಳಿಗೆ ಅದರಲ್ಲೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪರಮ ವೈರಿಯಾಗಿದ್ದ ಹಾಗೂ ಭಾರತವನ್ನು ಒಳಗೊಂಡಂತೆ ಜಗತ್ತಿನ ಹಲವಾರು ಭಾಗಗಳಲ್ಲಿ ಬ್ರಿಟಿಷ್‌ಸಾಮ್ರಾಜ್ಯಶಾಹಿಗೆ ಸವಾಲು ಹಾಕುತ್ತಿದ್ದ ಫ್ರಾನ್ಸ್, ಸ್ಪೇನ್ ಇನ್ನಿತ್ಯಾದಿ ದೇಶಗಳಿಗೆ ತಮ್ಮ ರಾಯಭಾರಿಗಳನ್ನು ಕಳಿಸತೊಡಗಿದರು. ಅಮೆರಿಕದ ಪ್ರಥಮ ಸಾಲಿನ ಕ್ರಾಂತಿಕಾರಿಗಳು ಹಾಗೂ ಆ ನಂತರದ ಸ್ವತಂತ್ರ ಅಮೆರಿಕದ ಅಧ್ಯಕ್ಷರುಗಳೂ ಆದ ಜಾರ್ಜ್ ವಾಶಿಂಗ್‌ಟನ್, ಥಾಮಸ್ ಜೆಫರ್ಸನ್, ಫ್ರಾಂಕ್ಲಿನ್, ಮ್ಯಾಡಿಸನ್ ಹಾಗೂ ಇನ್ನಿತರರು ಅಮೆರಿಕದ ಸ್ವಾತಂತ್ರ್ಯಕ್ಕೆ ಜಾಗತಿಕ ಬೆಂಬಲ ಗಳಿಸಿಕೊಳ್ಳುವಲ್ಲಿ ಹಾಗೂ ಜಗತ್ತಿನಾದ್ಯಂತ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ನಡೆಯುತ್ತಿದ್ದ ಸಮರಗಳ ಜೊತೆ ಸಂಬಂಧ ಹಾಗೂ ಸಹಕಾರಗಳನ್ನು ಸ್ಥಾಪಿಸಿಕೊಳ್ಳುವಲ್ಲಿ ಅಪಾರ ಪರಿಶ್ರಮ ತೋರಿದರು. ಜಗತ್ತಿನ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಬ್ರಿಟಿಷ್ ವಿರೋಧಿ ಸಮರಗಳಲ್ಲಿ ಅಮೆರಿಕನ್ನರು ಅತ್ಯಂತ ಗೌರವ, ಆದರ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಮೈಸೂರು ಪ್ರಾಂತದಲ್ಲಿ ಹೈದರಲಿಖಾನ್ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ನಡೆಸುತ್ತಿದ್ದ ಸ್ವಾತಂತ್ರ್ಯ ಸಮರದ ಬಗ್ಗೆ ಎಂಬುದು ನಿಜವಾದ ದೇಶಭಕ್ತರಿಗೆಲ್ಲಾ ಹೆಮ್ಮೆ ತರುವ ವಿಷಯವಾಗಿದೆ. ಅಮೆರಿಕನ್ ಕ್ರಾಂತಿಕಾರಿಗಳಿಗೆ ಹೈದರ್ ಮತ್ತು ಟಿಪ್ಪುವಿನ ಪರಿಚಯ ಮಾಡಿಕೊಟ್ಟಿದ್ದು ಫ್ರೆಂಚರು. ಅಮೆರಿಕದ ಎರಡನೇ ಅಧ್ಯಕ್ಷರಾದ ಥಾಮಸ್ ಜೆಫರ್ಸನ್ ಅವರು ಅಮೆರಿಕನ್ ಸಂಗ್ರಾಮದ ಸಂದರ್ಭದಲ್ಲಿ ಫ್ರಾನ್ಸಿನಲ್ಲಿದ್ದಾಗ ಫ್ರೆಂಚ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಹೈದರ್ ಮತ್ತು ಟಿಪ್ಪುರವರ ಸಮರ ಸಾಧನೆಗಳನ್ನು ಹಾಗೂ ಆರ್ಕಾಟ್, ಕಡಲೂರು, ಮದ್ರಾಸ್ ಇನ್ನಿತರ ಕಡೆ ಬ್ರಿಟಿಷ್ ಸೈನ್ಯ ಹೈದರ್ ಮತ್ತು ಟಿಪ್ಪುಅವರ ರಣಾಕ್ರಮಣಕ್ಕೆ ಶರಣಾಗಿ ಓಡಿ ಹೋಗುತ್ತಿದ್ದುದನ್ನು ಅಥವಾ ಹೈದರ್ ಶರತ್ತುಗಳಿಗೆ ಒಪ್ಪಿಅನಿವಾರ್ಯವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದನ್ನು ಅತ್ಯಂತ ಕುತೂಹಲ ಹಾಗೂ ಆಸಕ್ತಿಗಳಿಂದ ಟಿಪ್ಪಣಿ ಮಾಡಿಕೊಂಡು ಅಮೆರಿಕದ ತಮ್ಮ ಸಂಗಾತಿಗಳಿಗೆ ರವಾನಿಸುತ್ತಿದ್ದರು. ಈ ಸಾಹಸಗಾಥೆಗಳು ಅಲ್ಲಿ ಇನ್ನಷ್ಟು ವಿಸ್ತೃತ ಪ್ರಚಾರ ಪಡೆದುಕೊಂಡು ಹೈದರ್ ಮತ್ತು ಟಿಪ್ಪು ಸುಲ್ತಾನರು ಆಗ ಅಮೆರಿಕದ ಮನೆಮಾತಾಗಿಬಿಟ್ಟಿದ್ದರು.

ಹೈದರ್-ally ಬಗ್ಗೆ ಅಮೆರಿಕನ್ ಲಾವಣಿಗಳು!
ಉದಾಹರಣೆಗೆ, ಅಮೆರಿಕದ ಸ್ವಾತಂತ್ರ್ಯ ಸಮರದ ಇತಿಹಾಸಕಾರ ಫ್ರಾಂಕ್ ಮೂರ್ ಅವರು ತಮ್ಮ Diary of the American Revolutionನಲ್ಲಿ ದಾಖಲಿಸುವಂತೆ ಹೈದರ್ ಮತ್ತು ಬ್ರಿಟಿಷರ ನಡುವೆ ನಡೆಯುತ್ತಿದ್ದ ಎರಡನೇ ಆಂಗ್ಲೋ ಮೈಸೂರ್ ಯುದ್ಧದಲ್ಲಿ (1780-84) ಟಿಪ್ಪುನೇತೃತ್ವದ ಮೈಸೂರು ಸೇನೆಯು ಬ್ರಿಟಿಷರಿಗೆ ನೀಡುತ್ತಿದ್ದ ಅನಿರೀಕ್ಷಿತ ಮಾರಣಾಂತಿಕ ಪೆಟ್ಟುಗಳ ಮಾಹಿತಿಗಳು ಅಮೆರಿಕನ್ನರಿಗೆ 1781ರ ಆಗಸ್ಟ್‌ಗೆ ತಲುಪಿತ್ತು.

1781ರ ಅಕ್ಟೋಬರ್‌ನಲ್ಲಿ ಲಾರ್ಡ್ ಕಾರ್ನ್‌ವಾಲಿಸ್‌ನ ನೇತೃತ್ವದ ಬ್ರಿಟಿಷ್ ಸಾಮ್ರಾಜ್ಯದ ಸೇನೆ ಅಮೆರಿಕದ ಕ್ರಾಂತಿಕಾರಿ ಸೇನೆಯ ದಂಡನಾಯಕರಾಗಿದ್ದ ಜಾರ್ಜ್ ವಾಶಿಂಗ್‌ಟನ್‌ರಿಗೆ ಶರಣಾಯಿತು. ಒಂಭತ್ತು ದಿನಗಳ ನಂತರ ಈ ವಿಜಯವನ್ನು ನ್ಯೂಜೆರ್ಸಿ ಪ್ರಾಂತದ ಟ್ರೆನ್ಟನ್‌ನಲ್ಲಿ ಆಚರಿಸಲಾಯಿತು ಹಾಗೂ ಈ ವಿಜಯದಲ್ಲಿ ತಾವು ನೆನೆಸಿಕೊಳ್ಳಬೇಕಿರುವ 13 ಜನರ ನೆನಪಿನಲ್ಲಿ 13 ತೋಪುಗಳನ್ನು ಹಾರಿಸಲಾಯಿತು. ಅಮೆರಿಕದ ಜನರು ತಮ್ಮ ಸ್ವಾತಂತ್ರ್ಯ ಸಂಭ್ರಮದಲ್ಲೂ ಮರೆಯದೇ ನೆನೆಸಿಕೊಂಡ 13 ಜನರಲ್ಲಿ ಒಬ್ಬರು ಭಾರತದ ಹೆಮ್ಮೆಯ ಹೈದರಲಿ.
 ಫ್ರಾಂಕ್ ಮೂರ್ ದಾಖಲಿಸಿರುವಂತೆ ಅಮೆರಿಕನ್ನರು ಹೈದರಲಿಯನ್ನು ನೆನೆಸಿಕೊಂಡಿದ್ದು ಹೀಗೆ:""The great and heroic Hyder Ali, raised up by providence to avenge the numberless cruelties perpetrated by the English on his unoffending countrymen, and to check the insolence and reduce the power of Britain in the East Indies''.

ಅಂದರೆ- ತನ್ನ ಅಮಾಯಕ ದೇಶವಾಸಿಗಳ ಮೇಲೆ ಇಂಗ್ಲಿಷರು ನಡೆಸಿದ ಅಸಂಖ್ಯಾತ ದಾರುಣ ಕ್ರೌರ್ಯಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ಭಾರತದಲ್ಲಿ ಬ್ರಿಟಿಷರ ದರ್ಪ ಮತ್ತು ಆಳ್ವಿಕೆಯನ್ನು ಮೊಟಕುಗೊಳಿಸಲು ದೈವಕೃಪೆಯಿಂದ ಮೇಲೆದ್ದು ಬಂದ ಮಹಾನ್ ವೀರ ಹೈದರಲಿ.

(ಆಸಕ್ತರು ಫ್ರಾಂಕ್ ಮೂರ್ ಅವರ ಪುಸ್ತಕ Diary of the American Revolution ಅನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://archive.org/details/diaryofamericanr0000unse)
ಅಷ್ಟು ಮಾತ್ರವಲ್ಲ. ಚಿಕಾಗೋ ವಿಶ್ವವಿದ್ಯಾನಿಲಯದ ಸಂಶೋಧಕ ಪ್ರೊ. ಬ್ಲೇಕ್ ಸ್ಮಿತ್ ಅವರು ಹೇಳುವಂತೆ ಟಿಪ್ಪು, ಹೈದರ್ ಮತ್ತು ಮೈಸೂರು ಪ್ರಾಂತಗಳ ಹೆಸರು 18ನೇ ಶತಮಾನದ ಪ್ರಖ್ಯಾತ ಇತಿಹಾಸಕಾರ ಜೆಡಿದಾ ಮೋರ್ಸ್ ಅವರು 1793ರಲ್ಲಿ ಬರೆದ The American Universal Geographyವನ್ನೂ ಒಳಗೊಂಡಂತೆ ಹಲವಾರು ಪಠ್ಯಪುಸ್ತಕಗಳ ಭಾಗವಾಗಿತ್ತು. (https://aeon.co/essays/why-american-revolutionaries-admired-the-rebels-of-mysore)

ಅಮೆರಿಕ ಸ್ವಾತಂತ್ರ್ಯ ಸಂಗ್ರಾಮವನ್ನು ಗೆಲ್ಲಬೇಕೆಂದರೆ ಜಾಗತಿಕವಾಗಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿ ಕುಂದುವುದು ಅತ್ಯಗತ್ಯವೆಂದು ಅರ್ಥಮಾಡಿಕೊಂಡಿದ್ದ ಅಮೆರಿಕನ್ ಕ್ರಾಂತಿಕಾರಿಗಳು ಫ್ರೆಂಚರೊಂದಿಗೆ ಮಾತ್ರವಲ್ಲದೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ನಿಜವಾದ ಸವಾಲಾಗಿದ್ದ ಎಲ್ಲರೊಂದಿಗೂ ನೇರ ರಣಮೈತ್ರಿ ಮಾಡಿಕೊಳ್ಳುವ ಆಸಕ್ತಿಯನ್ನು ಹೊಂದಿದ್ದರು. ಅದರ ಭಾಗವಾಗಿಯೇ ಫ್ರೆಂಚ್ ಮಿಲಿಟರಿ ಸಮಾಲೋಚಕ ಥಾಮಸ್ ಕಾನ್ವೆಯ ಸಲಹೆಯ ಮೇರೆಗೆ ಏಶ್ಯ ಖಂಡದಲ್ಲಿ ಬ್ರಿಟಿಷರಿಗೆ ದೊಡ್ಡ ಸವಾಲಾಗಿದ್ದ ಟಿಪ್ಪುವಿನ ಸಮರಕ್ಕೆ ಸಹಾಯವಾಗಲು 1777ರಲ್ಲಿ ಒಂದು ಸೇನಾಪಡೆಯನ್ನು ಕಳಿಸುವ ಬಗ್ಗೆಯೂ ಯೋಚಿಸಿದ್ದರು. ಅಮೆರಿಕದ ವಿವಿಧ ಸಂಸ್ಥಾನಗಳೂ ವಿವಿಧ ರೀತಿಯಲ್ಲಿ ಮೈಸೂರು ಸಂಸ್ಥಾನದ ಬಗ್ಗೆ ಹಾಗೂ ಹೈದರ್-ಟಿಪ್ಪುರವರ ಬಗ್ಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದವು. 1781ರಲ್ಲಿ ಪೆನ್ಸಿಲ್ವೇನಿಯಾ ಪ್ರಾಂತದ ಶಾಸನಸಭೆಯು ತಮ್ಮ ಒಂದು ಯುದ್ಧ ನೌಕೆಗೆ Hyder-Ally (ಮಿತ್ರ) ಎಂದು ಹೆಸರಿಟ್ಟು ಗೌರವಿಸಿತು. ಅಮೆರಿಕದ ಆ ಕಾಲದ ಪ್ರಖ್ಯಾತ ಕವಿ ಹಾಗೂ ಅಮೆರಿಕದ ಎರಡನೇ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್ ಅವರ ಮಿತ್ರ ಹೈದರಲಿಯ ಕುರಿತು ನುಡಿ ನಮನವನ್ನೇ ಮಾಡಿರುವುದೂ ಅಮೆರಿಕದ ಇತಿಹಾಸದಲ್ಲಿ ದಾಖಲಾಗಿದೆ:

From an Eastern prince she takes her name,

Who, smit with freedom’s sacred flame

Usurping Britons brought to shame,

His country’s wrongs avenging

(ಹೆಸರಿದು ಪೂರ್ವದ ರಾಜನದು
ಸ್ವಾತಂತ್ರ್ಯದ ಪವಿತ್ರ ಜ್ವಾಲೆಯಲ್ಲಿ
ತನ್ನ ನಾಡಿಗೆ ಅನ್ಯಾಯ ಬಗೆದ

ದರ್ಪಿಷ್ಟ ಬ್ರಿಟಿಷರಿಗೆ ಪಾಠ ಕಲಿಸಿದ ರಣಕಲಿಯದು....)
(https://quod.lib.umich.edu/a/amverse/BAD9545.0001.001/1:38?rgn=div1;view=fulltext)

ಹಲವಾರು ಅಮೆರಿಕನ್ ಇತಿಹಾಸಕಾರರು ದಾಖಲಿಸಿರುವಂತೆ ಆಗ ಅಮೆರಿಕನ್ ಯುದ್ಧದಲ್ಲಿ ವೀರೋಚಿತ ಪಾತ್ರವಹಿಸಿದ ಹಲವಾರು ಯುದ್ಧ ಕುದುರೆಗಳಿಗೂ ಹೈದರ್ ಹಾಗೂ ಟಿಪ್ಪು ಎಂದು ಹೆಸರಿಟ್ಟಿದ್ದರಂತೆ! 1799ರ ನಾಲ್ಕನೇ ಆಂಗ್ಲೋ-ಮೈಸೂರ್ ಯುದ್ಧದಲ್ಲಿ ಟಿಪ್ಪು ವೀರೋಚಿತ ವಾಗಿ ಹೋರಾಡಿ ರಣರಂಗದಲ್ಲಿ ಮಡಿದ ನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಭಾರತದಲ್ಲಿ ಎದುರಾಗಿದ್ದ ಸವಾಲು ಅಂತಿಮಗೊಳ್ಳುತ್ತದೆ. ಆದರೂ ಅಮೆರಿಕನ್ನರು ಸುಲಭವಾಗಿ ಹೈದರ್-ಟಿಪ್ಪುರನ್ನು ಮರೆಯುವುದಿಲ್ಲ. ಅಮೆರಿಕದ ಜಾನ್ ರಸೆಲ್ ಎನ್ನುವ ಪಾದ್ರಿ 1800ರ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ದಿನಾಚರಣೆಯಂದು ದಿವ್ಯ ಆಶೀರ್ವಾದ ಪ್ರವಚನವನ್ನು ಮಾಡುತ್ತಾ ಬ್ರಿಟಿಷ್ ಸಾಮ್ರಾಜ್ಯವಾದದ ಅಪಾಯದ ಬಗ್ಗೆ ತನ್ನ ಕೇಳುಗರಿಗೆ ಎಚ್ಚರಿಸುತ್ತಾರೆ ಹಾಗೂ ತನ್ನ ಪ್ರಾರ್ಥನಾ ಸಭೆಯಲ್ಲಿದ್ದವರಿಗೆ ಟಿಪ್ಪುವಿನ ಸಾವಿನ ಕುರಿತು ಹೇಳುತ್ತಾ ‘‘ಟಿಪ್ಪುಸುಲ್ತಾನರು ಅತ್ಯಂತ ವೀರೋಚಿತವಾಗಿ ತಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹೋರಾಡುತ್ತಾ ಒಬ್ಬ ನಿಜವಾದ ರಾಜನಿಗೆ ತಕ್ಕುದಾದ ಸಾವನ್ನು ಅಪ್ಪಿದರು’’ ಎಂದು ತಿಳಿಸುತ್ತಾರೆ. (https://aeon.co/essays/why-american-revolutionaries-admired-the-rebels-of-mysore)

ಅಮೆರಿಕದ ಆರ್ಖೈವ್ಸ್‌ನಲ್ಲಿ ಭದ್ರಗೊಂಡ ಹೈದರ್-ಟಿಪ್ಪುನೆನಪು

ಒಂದೆಡೆ ಭಾರತದಲ್ಲಿ ಹೈದರ್ ಮತ್ತು ಟಿಪ್ಪು ಅವರ ನೆನಪುಗಳನ್ನು ವಿಲನೀಕರಿಸುವ ಅಥವಾ ಅಳಿಸಿಬಿಡುವ ಕುತಂತ್ರಗಳು ಮತ್ತು ರಾಜತಂತ್ರಗಳು ನಡೆಯುತ್ತಿವೆ. ಆದರೆ ಅಮೆರಿಕದಲ್ಲಿ ನಿರುದ್ದಿಶ್ಯವಾಗಿ ಹೈದರ್ ಮತ್ತು ಟಿಪ್ಪು ಅವರ ನೆನಪುಗಳು ಆರ್ಖಿವ್ ಆಗುತ್ತಲಿದೆ. 2010ರಲ್ಲಿ ಅಮೆರಿಕಾದ ‘ನ್ಯಾಶನಲ್ ಆರ್ಖೈವ್ಸ್’ ಮತ್ತು ‘ಯೂನಿವರ್ಸಿಟಿ ಆಫ್ ವರ್ಜೀನಿಯಾ’ಗಳು ಅಮೆರಿಕ ಸಂಸ್ಥಾನದ ಪಿತಾಮಹರುಗಳಿಗೆ ಸಂಬಂಧಪಟ್ಟ ಐತಿಹಾಸಿಕ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಒಂದು ವೆಬ್‌ಸೈಟನ್ನು ರೂಪಿಸಿದ್ದಾರೆ. ಅದರಲ್ಲಿ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಹಾಗೂ ಅಮೆರಿಕದ ಪ್ರಾರಂಭಿಕ ಕಾಲದ ಅಧ್ಯಕ್ಷರಾದ ಜಾರ್ಜ್ ವಾಶಿಂಗ್‌ಟನ್, ಬೆಂಜಮಿನ್ ಫ್ರಾಂಕ್ಲಿನ್, ಥಾಮ್ಸ್ ಜೆಫರ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಜೇಮ್ಸ್ ಮ್ಯಾಡಿಸನ್ ಹಾಗ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News